ರಾಷ್ಟ್ರೀಯ

ಹಣ್ಣು ಮಾರಿ 200 ಬಡ ಜನರಿಗೆ ಊಟ ನೀಡುತ್ತಿರುವ ವ್ಯಕ್ತಿ

Pinterest LinkedIn Tumblr


ತಿರುವನಂತಪುರಂ: ಕೇರಳದ ವ್ಯಕ್ತಿಯೊಬ್ಬರು ಹಣ್ಣು ಮಾರಾಟ ಮಾಡಿ ಪ್ರತಿದಿನ 200 ಬಡ ಜನರಿಗೆ ಊಟ ಹಾಕುತ್ತಿದ್ದಾರೆ.

ಜಿಲ್ಲೆಯ ವಡುಕಾರದಲ್ಲಿ ಹಲವು ವರ್ಷಗಳಿಂದ ಮುಚ್ಚಲಾಗಿರುವ ಬಸ್ ಶೆಲ್ಟರ್ ನಲ್ಲಿ ಮನೆ ಇಲ್ಲದೆ ಇರುವವರು ಹಾಗೂ ನಿರ್ಗತಿಕರಿಗೆ ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಅಲ್ಲಿ ಊಟ ನೀಡಲಾಗುತ್ತದೆ. ಈ ಕೆಲಸವನ್ನು ಹಣ್ಣುಗಳನ್ನು ಮಾರಾಟ ಮಾಡುವ ಜೈಸನ್ ಪಾಲ್ ಅವರು ಪ್ರಾರಂಭಿಸಿದ್ದರು.

ಮದರ್ ತೆರೇಸಾ ಅವರೇ ನನಗೆ ಈ ಕೆಲಸ ಮಾಡಲು ಸ್ಫೂರ್ತಿ ಎಂದು 37 ವರ್ಷದ ಜೈಸನ್ ತಿಳಿಸಿದ್ದಾರೆ. ಈಗ ಅವರ ಒಂದು ತಂಡವಿದ್ದು, ಆ ತಂಡ ಪ್ರತಿದಿನ ಜೈಸನ್ ಜೊತೆ ಸೇರಿ 175 ರಿಂದ 200 ಬಡ ಜನರಿಗೆ ಊಟ ನೀಡುತ್ತಿದ್ದಾರೆ. ಅಗತ್ಯವಿರುವವರಿಗೆ ಶುದ್ಧ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸುವುದು ಅವರ ತಂಡದ ಉದ್ದೇಶವಾಗಿದೆ.

ಜೈಸನ್ ಹೊರತುಪಡಿಸಿ ಈ ಕೆಲಸದಲ್ಲಿ ಅವರ ಪತ್ನಿ ಬೀನೂ ಮಾರಿಯಾ, ಆಟೋ ಡ್ರೈವರ್ ಶ್ರೀಜಿತ್, ಮಾಜಿ ಬಸ್ ಡ್ರೈವರ್ ಶೈನ್ ಜೇಮ್ಸ್ ಸೇರಿದಂತೆ ಹಲವು ಮಂದಿ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಎಲ್ಲರೂ ಈ ಕೆಲಸ ಮಾಡುತ್ತಿದ್ದಾರೆ. ಅವರ ಅಭಿಯಾನ ಸೋಮವಾರದಿಂದ ಶನಿವಾರದವರೆಗೂ ನಡೆಯುತ್ತದೆ.

ಜೈಸನ್ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಅಲ್ಲದೆ ಪ್ರತಿ ತಿಂಗಳು ಈ ಟ್ರಸ್ಟ್ ಗಾಗಿ ಹಣ ಉಳಿತಾಯ ಮಾಡುತ್ತಾರೆ. ಮೊದಲು ಜೈಸನ್ ಬಡಜನರಿಗೆ ಅನ್ನ ಮತ್ತು ಗಂಜಿ ಆಹಾರವಾಗಿ ನೀಡುತ್ತಿದ್ದರು. ಆದರೆ ಈಗ ಅವರು ಅನ್ನ-ಸಾಂಬಾರ್, ಫಿಶ್ ಕರಿ, ತರಕಾರಿಗಳು, ಉಪ್ಪಿನಕಾಯಿ ಹಾಗೂ ಸಲಾಡ್‍ಗಳನ್ನು ನೀಡುತ್ತಾರೆ.

ಈ ತಂಡಕ್ಕೆ ಸಹಾಯ ಮಾಡಲು ಜನರು ದಾನ ಕೂಡ ಮಾಡುತ್ತಿದ್ದಾರೆ. ಕೆಲವರು ಹಣ ನೀಡಿದರೆ ಮತ್ತೆ ಕೆಲವರು, ಅಕ್ಕಿ, ಬೇಳೆ, ತರಕಾರಿ ನೀಡುತ್ತಾರೆ. ಆಹಾರವನ್ನು ವ್ಯರ್ಥ ಮಾಡಬಾರದು ಎಂಬುದು ತಂಡದ ಉದ್ದೇಶವಾಗಿದೆ. ಅಲ್ಲದೆ ಅವರು ಪ್ಲಾಸ್ಟಿಕ್ ಸಹ ಬಳಸುವುದಿಲ್ಲ. ಜೈಸನ್ ಜನರಿಗೆ ಬಾಳೆ ಎಲೆಗಳಲ್ಲಿ ಊಟ ಹಾಕುತ್ತಾರೆ.

Comments are closed.