ಕೊಪ್ಪಳ: ಮಗಳು ಪ್ರೀತಿಸಿ ಮದುವೆಯಾದ ಹಿನ್ನೆಲೆಯಲ್ಲಿ ಪೋಷಕರು ಎಸ್.ಪಿ ಕಚೇರಿಗೆ ಹೋಗಿ ಕಣ್ಣೀರು ಹಾಕುತ್ತಿರುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ನಿರ್ಮಲಾ ಡ್ಯಾನ್ಸ್ ಮಾಸ್ಟರ್ ಮಂಜು ಎಂಬಾತನನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಯ ವಿಷಯ ಗೊತ್ತಾಗಿ ನಿರ್ಮಲಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ ಪ್ರೇಮಿಗಳು ಮದುವೆಯಾಗಿ ಬಂದಿದ್ದು, ಪೋಷಕರ ಕಣ್ಣೀರಿಗೆ ಕಾರಣವಾಗಿದೆ.
ಮಂಜು ಗಂಗಾವತಿ ನಗರದಲ್ಲಿ ಡ್ಯಾನ್ಸ್ ಮಾಸ್ಟರ್, ನಿರ್ಮಲಾ ಕಾಲೇಜಿಗೆ ಹೋಗುತ್ತಿದ್ದಳು. ಡ್ಯಾನ್ಸ್ ಕಲಿಸಲು ಬಂದ ಸಮಯದಲ್ಲಿ ಇಬ್ಬರಿಗೂ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿದೆ. ಪ್ರೇಮಾಂಕುರವಾದ ಬಳಿಕ ಒಂದು ವರ್ಷ ಸುತ್ತಾಡಿದ್ದಾರೆ. ಕೊನೆಗೆ ಮದುವೆಯಾಗಲು ನಿರ್ಧಾರ ಮಾಡಿದಾಗ ನಿರ್ಮಲಾ ಪೋಷಕರು, ಮಂಜು ಕೀಳು ಜಾತಿಯವನು ಎಂಬ ಕಾರಣಕ್ಕೆ ವಿರೋಧ ಮಾಡಿದ್ದಾರೆ. ಹೀಗಾಗಿ ಒಂದು ವಾರದ ಹಿಂದೆ ಆನೇಕಲ್ ನಲ್ಲಿ ಮದುವೆಯಾಗಿ ಬಂದಿದ್ದಾರೆ.
ನಿರ್ಮಲಾ ಪೋಷಕರಿಗೆ ಮಗಳು ಮದುವೆ ಆಗಿರುವ ವಿಚಾರ ತಿಳಿಸಿದು, ಮತ್ತೆ ಹೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನವ ಜೋಡಿ ಇಂದು ರಕ್ಷಣೆ ಕೋರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದರು. ತಂದೆ 20 ವರ್ಷ ಸಾಕಿ ಸಲುಹಿದ ಮಗಳು ಮತ್ತೊಬ್ಬರ ಜೊತೆ ಹೋಗುವುದನ್ನ ಕಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನಮ್ಮೊಂದಿಗೆ ಬಾ ಎಂದು ಗೋಗರೆದರೂ ಮಗಳು ಮಾತ್ರ ತಂದೆಯನ್ನು ತಿರುಗಿ ನೋಡಲಿಲ್ಲ. ಕಚೇರಿಯಲ್ಲಿ ಹೈಡ್ರಾಮಾ ನಡೆಯುತ್ತಿದ್ದಂತೆ ಪೊಲೀಸರು ನವ ಜೋಡಿಯನ್ನು ಕರೆದುಕೊಂಡು ಹೋಗಿದ್ದಾರೆ.
ನಿರ್ಮಾಲಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಆಕೆಯ ಶಿಕ್ಷಣದ ಜವಾಬ್ದಾರಿ ಹೊತ್ತುಕೊಳ್ಳುವ ಭರವಸೆ ನೀಡಿದ್ದೇನೆ. ಹೀಗಾಗಿ ರಕ್ಷಣೆ ಕೋರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದೇನೆ ಎಂದು ಮಂಜು ತಿಳಿಸಿದ್ದಾರೆ.
Comments are closed.