ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ ಯುವತಿಯ ಮೇಲೆ ಅತ್ಯಾಚಾರ?: ಆರೋಪಿಗೆ ರಾಜಕೀಯ ನಂಟು ಶಂಕೆ

Pinterest LinkedIn Tumblr


ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವ ಘಟನೆ ತಡವಾಗಿ ವರದಿಯಾಗಿದೆ. ನಗರದ ಹಲಸೂರು ಠಾಣೆಯಲ್ಲಿ ಸಂತ್ರಸ್ತೆ ನೀಡಿರುವ ದೂರಿನ ಆಧಾರದಲ್ಲಿ ಈ ಘಟನೆ ನವಂಬರ್ 07ರಂದು ನಡೆದಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹಲಸೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆಯ 363, 347, 376, 394, 506 ಸೆಕ್ಷನ್ ಗಳಡಿಯಲ್ಲಿ ದೂರು ದಾಖಲಾಗಿದೆ.

ನಗರದ ಪ್ರತಿಷ್ಠಿತ ಎಂ.ಜಿ.ರಸ್ತೆಯಲ್ಲಿ ಯುವತಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸ್ಕೋಡಾ ಕಾರಿನಲ್ಲಿ ಬಂದ ಯುವಕ ತನ್ನನ್ನು ಹೊಟೇಲ್ ಉದ್ಯಮಿ ಎಂದು ಪರಿಚಯಿಸಿಕೊಂಡು ಯುವತಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ.

ಬಳಿಕ ತನ್ನ ತಂದೆ ಶಾಸಕರಾಗಿದ್ದಾರೆ ಮತ್ತು ತಾಯಿ ವೈದ್ಯೆಯಾಗಿದ್ದು ತನ್ನನ್ನು ಕಾರ್ತಿಕ್ ರೆಡ್ಡಿ ಎಂದು ಪರಿಚಯಿಸಿಕೊಂಡು ತಾನೊಬ್ಬ ಹೊಟೇಲ್ ಉದ್ಯಮಿ ಎಂದು ಪರಿಚಯಿಸಿಕೊಂಡು ಯುವತಿಗೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಕರೆದೊಯ್ದಿದ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಯುವತಿಯನ್ನು ತನ್ನ ಕಾರಿನಲ್ಲಿ ಸುತ್ತಿಸಿದ ಯುವಕ ನೇರವಾಗಿ ಆಕೆಯನ್ನು ಮಾರತ್ ಹಳ್ಳಿ ವೃತ್ತದ ಬಳಿ ಇರುವ ಮುನಿರೆಡ್ಡಿ ಪಾಳ್ಯ ಲೇ ಔಟ್ ನಲ್ಲಿರುವ ಅಪಾರ್ಟ್ ಮೆಂಟ್ ಒಂದಕ್ಕೆ ಕರೆದೊಯ್ದಿದ್ದಾನೆ. ಈ ಸಂದರ್ಭದಲ್ಲಿ ಭಯಗೊಂಡ ಯುವತಿ ಪ್ರತಿಭಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ತನ್ನಲ್ಲಿ ಗನ್ ಇದೆ ಎಂದು ಆಕೆಯನ್ನು ಬೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಯುವತಿಯ ಪರ್ಸ್ ಮತ್ತು ಮೊಬೈಲ್ ಕಿತ್ತುಕೊಂಡು ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

Comments are closed.