ಕರ್ನಾಟಕ

ಸ್ನೇಹಿತನಿಂದಲೇ ಅಪಹರಣ, ಆಸ್ತಿಗಾಗಿ ಪೀಡಿಸಿದ್ದನಂತೆ ಫ್ರೆಂಡ್!

Pinterest LinkedIn Tumblr


ಬೆಂಗಳೂರು: 50 ವರ್ಷ ವಯಸ್ಸಿನ ಬೆಂಗಳೂರು ನಿವಾಸಿಯೊಬ್ಬರು ತಮ್ಮ ಸ್ನೇಹಿತನ ವಿರುದ್ಧವೇ ಅಪಹರಣ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮನ್ನು ಅಪಹರಣ ಮಾಡಿ ಒಂದು ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟಿದ್ದ ಸ್ನೇಹಿತ, ತಮಗೆ ಸೇರಿದ 7 ಕೋಟಿ ರೂ. ಆಸ್ತಿಯನ್ನು ವರ್ಗಾವಣೆ ಮಾಡುವಂತೆ ಒತ್ತಡ ಹೇರಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಒಂದು ವೇಳೆ ನಾನು ಆಸ್ತಿ ನೀಡದಿದ್ದರೆ ನನ್ನ ಕುಟುಂಬದವರನ್ನು ಹತ್ಯೆ ಮಾಡೋದಾಗಿ ಬೆದರಿಕೆ ಹಾಕಿದ್ದ ಅಂತಲೂ ಆರೋಪಿಸಿದ್ಧಾರೆ.

ಬೇಗೂರು ನಿವಾಸಿ ಆನಂದ ಕುಮಾರ್ ಎಂಬುವರು, ತಮ್ಮ ಸ್ನೇಹಿತ ಜ್ಞಾನದೇವ್‌ ವಿರುದ್ಧ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ವರ್ಷ ಈ ಘಟನೆ ನಡೆದಿತ್ತು ಎಂದು ದೂರಿನಲ್ಲಿ ಹೇಳಿದ್ದಾರೆ. ನವೆಂಬರ್ 2, 2018ರಲ್ಲಿ ತಮ್ಮನ್ನು ಕಾರ್‌ನಲ್ಲಿ ಕರೆದೊಯ್ದಿದ್ದ ಜ್ಞಾನದೇವ್, ಅಕ್ಷಯ ನಗರದ ತಮ್ಮ ನಿವಾಸದಲ್ಲಿ ಗೃಹ ಬಂಧದಲ್ಲಿ ಇರಿಸಿದ್ದ ಎಂದು ವಿವರಿಸಿದ್ಧಾರೆ.

ತಾನು ಸಾಲದ ಸುಳಿಯಲ್ಲಿ ಸಿಲುಕಿರುವುದಾಗಿ ಹೇಳಿದ್ದ ಜ್ಞಾನದೇವ್, ಸಿಸಿಬಿ ಪೊಲೀಸರೂ ತನ್ನನ್ನು ಹುಡುಕುತ್ತಿದ್ದಾರೆ ಎಂದು ಹೇಳಿದ್ದ. ಜೆಪಿ ನಗರದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ತನ್ನ ಮನೆಗೇ ಕರೆಸಿಕೊಂಡಿದ್ದ ಜ್ಞಾನದೇವ್, ಆನಂದ ಕುಮಾರ್ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಮಾಡಿಸಿದ್ದ. ಆನಂದ್ ಕುಮಾರ್ ಹೆಸರಿಗೆ ವಿತರಿಸಲಾದ ಚೆಕ್‌ ಬುಕ್‌ಗಳಲ್ಲಿ ಆನಂದ್‌ ಕುಮಾರ್‌ ಸಹಿ ಪಡೆದುಕೊಂಡ ಜ್ಞಾನದೇವ್, ಡೆಬಿಟ್ ಕಾರ್ಡ್‌ಗಳನ್ನೂ ತನ್ನ ಬಳಿಯಲ್ಲೇ ಇಟ್ಟುಕೊಂಡಿದ್ದ. ಬಳಿಕ, ಬೇಗೂರಿನಲ್ಲಿರುವ ಜಮೀನನ್ನೂ ತನ್ನ ಹೆಸರಿಗೆ ಬರೆಯುವಂತೆ ಆನಂದ್‌ ಕುಮಾರ್‌ಗೆ ಜ್ಞಾನದೇವ್ ಒತ್ತಡ ಹೇರಿದ ಎಂದು ಆರೋಪಿಸಲಾಗಿದೆ.

ಆನಂದ್ ಕುಮಾರ್ ಅವರಿಂದ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದ ಜ್ಞಾನದೇವ್, ಡಿಸೆಂಬರ್ 1, 2018ರಲ್ಲಿ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಿದ್ದ. ಆದ್ರೆ, ಈ ವಿಚಾರವನ್ನು ಯಾರಿಗಾದ್ರೂ ಹೇಳಿದ್ರೆ ಕುಟುಂಬ ಸದಸ್ಯರನ್ನು ಸುಮ್ಮನೆ ಬಿಡೋದಿಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಆನಂದ್ ಕುಮಾರ್ ಪೊಲೀಸರಿಗೆ ವಿವರಿಸಿದ್ಧಾರೆ.

ಕಳೆದ ವರ್ಷ ನಡೆದಿದೆ ಎನ್ನಲಾದ ಈ ಪ್ರಕರಣದ ಬಗ್ಗೆ ಇನ್ನಷ್ಟು ದಾಖಲೆಗಳು ಬೇಕು ಎಂದು ಆನಂದ್ ಕುಮಾರ್‌ ಬಳಿ ಪೊಲೀಸರು ಕೇಳಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Comments are closed.