ಕರ್ನಾಟಕ

ಭಕ್ತರ ವಿಚಿತ್ರ ಬೇಡಿಕೆಗಳು ಹಾಸನಾಂಬೆ ಹುಂಡಿಯಲ್ಲಿ!

Pinterest LinkedIn Tumblr


ಹಾಸನ: ಹಾಸನಾಂಬಾ ಜಾತ್ರಾ ಮಹೋತ್ಸವದ 11 ದಿನಗಳಲ್ಲಿ ದೇವಾಲಯಕ್ಕೆ ಒಟ್ಟು 3.06 ಕೋಟಿ ರೂ.ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 58.12 ಲಕ್ಷ ರೂ.ಆದಾಯ ಹೆಚ್ಚಾಗಿದೆ.
ವಿಶೇಷ ದರ್ಶನದ ಟಿಕೆಟ್‌ಗಳ ಮಾರಾಟದಿಂದ 1.75 ಕೋಟಿ ರೂ.ಸಂಗ್ರಹವಾಗಿದ್ದರೆ, ಹುಂಡಿ ಕಾಣಿಕೆಯಿಂದ 1.31 ಕೋಟಿ ರೂ.ಸಂಗ್ರಹವಾಗಿದೆ. ಹಾಸನಾಂಬೆ ದೇಗುಲದ ಆವರಣದಲ್ಲಿರುವ ಸಿದ್ದೇಶ್ವರ ದೇವಾಲಯದ ಮುಂಭಾಗ ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಹುಂಡಿಯ ಎಣಿಕೆ ಸಂಜೆ 5.30ರ ವೇಳೆಗೆ ಮುಗಿಯಿತು. ಈ ವರ್ಷ ಹಾಸನಾಂಬ ದೇವಾಲಯದ ಬಾಗಿಲು ಒಟ್ಟು 13 ದಿನ ತೆರೆದಿತ್ತು.

ಈ ಮಧ್ಯೆ, ಭಕ್ತರು ಹಾಸನಾಂಬೆಯ ಸನ್ನಿಧಿಯಲ್ಲಿ ಚಿತ್ರ- ವಿಚಿತ್ರ ಬೇಡಿಕೆಗಳನ್ನು ಮಂಡಿಸಿದ್ದು, ಹುಂಡಿ ತೆರೆದಾಗ ಕಾಣಿಕೆ, ಚಿನ್ನ, ಬೆಳ್ಳಿಯ ಜೊತೆಗೆ ಲಿಖೀತ ಬೇಡಿಕೆಗಳೂ ಅನಾವರಣಗೊಂಡವು;

– ತಾಯೇ ನಮ್ಮ ಸಾಲಗಳನ್ನೆಲ್ಲಾ ತೀರಿಸಿ, ಒಂದು ನಿವೇಶನ ತೆಗೆದುಕೊಳ್ಳಲು ದಯೆ ತೋರಮ್ಮ.

– ನನ್ನ ಮಕ್ಕಳಿಗೆ ಒಳ್ಳೆ ವಿದ್ಯೆ, ಬುದ್ದಿ ಮತ್ತು ಗಂಡನಿಗೆ ಹಾಗೂ ಕುಟುಂಬದವರಿಗೆ ಆಯಸ್ಸು ಕೊಡು ತಾಯಿ.

– ನಾನು ದ್ವಿತೀಯ ಪಿಯುಸಿಯಲ್ಲಿ ಪಾಸ್‌ ಆಗುವಂತೆ ಮಾಡು ತಾಯಿ. ಓದುವ ಆಸಕ್ತಿ ಕರುಣಿಸು, ಒಳ್ಳೆ ಕಾಲೇಜಿನಲ್ಲಿ ಸೀಟು ಸಿಗುವಂತೆ ಮಾಡು.

– ನನ್ನ ತಾಯಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಸಿಗುವಂತೆ ಮಾಡು.

– ಪ್ರೀತಿ ಮಾಡುತ್ತಿರುವ ಹುಡುಗಿ ಮನೆಯವರು ಮತ್ತು ನಮ್ಮ ಮನೆಯವರು ಒಪ್ಪಿಕೊಳ್ಳುವಂತೆ ಮಾಡಿದರೇ ನಾನು ಪ್ರತಿ ವರ್ಷ ನಿನ್ನ ದರ್ಶನಕ್ಕೆ ಬರುತ್ತೀನಿ.

– ಹಾಸನ ಉಪ ವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಹಾಸನದಲ್ಲೇ ಇರಬೇಕು.

– ನನ್ನ ಮಗಳ ಮದುವೆ ಮಾಡಿ 6 ತಿಂಗಳಾಯ್ತು, ನನ್ನ ಸೈಟು ಮಾರಿ 20 ಲಕ್ಷ ಖರ್ಚು ಮಾಡಿ ಮದುವೆ ಮಾಡಿದೆ, ಈಗ ಗಂಡನ ಮನೆಯಲ್ಲಿ ಹಿಂಸೆ ಕೊಡುತ್ತಿದ್ದಾರೆ. ಅವಳಿಗೆ ನೆಮ್ಮದಿ ಕೊಡು ತಾಯಿ.

– ಬೀಗರ ಮನೆಗೆ ಹೋದರೆ ನಾಯಿಗಿಂತ ಕಡೆಯಾಗಿ ನಮ್ಮ ಕಾಣುತ್ತಿದ್ದಾರೆ. ಸರಿ ಮಾಡು ತಾಯಿ.

– ನನಗೆ ಬೇಗ ಸೈಟು ಸಿಕ್ಕಿ ಮನೆ ಕಟ್ಟಬೇಕು.

– ನನ್ನ ಗಂಡನಿಗೆ ಒಳ್ಳೆ ಬುದ್ದಿ ಕೊಡವ್ವ, ನನ್ನ ಗಂಡ ನಾನು ಹೇಳಿದ ಹಾಗೇ ಕೇಳಬೇಕು.

– ನಾನು ಮದುವೆಯಾಗಿ 10 ವರ್ಷ ಕಳೆದಿದೆ, ನಮಗೆ ಸಂತಾನ ಫ‌ಲ ನೀಡಮ್ಮ. ಇನ್ನು ಒಂದು ವರ್ಷದೊಳಗೆ ಮಗುವಾದರೆ ಪ್ರತಿ ವರ್ಷ ನಿನ್ನ ಸನ್ನಿದಿಗೆ ಬಂದು ಹರಕೆ ತೀರಿಸುತ್ತೇನೆ.

Comments are closed.