ಕರ್ನಾಟಕ

ಮದುವೆಗೆ ಹೋಗಿ, ಸೆಲ್ಫೀ ಗೀಳಿಗೆ ಒಂದೇ ಕುಟುಂಬದ ನಾಲ್ವರು ಬಲಿ

Pinterest LinkedIn Tumblr


ಆನೇಕಲ್(ಅ.07): ಸೆಲ್ಫೀ ಗೀಳಿಗೆ ಬಲಿಯಾಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ನದಿ, ತೊರೆ, ಫಾಲ್ಸ್​ಗಳ ಬಳಿ ಸೆಲ್ಫೀ ತೆಗೆದುಕೊಳ್ಳಲು ಹೋಗುವ ಜನರು ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಇಂತಹದ್ದೇ ಒಂದು ಘಟನೆ ತಮಿಳುನಾಡಿನ ಪಾಂಬರ್​ ಡ್ಯಾಂನಲ್ಲಿ ನಡೆದಿದೆ. ಪಾಂಬರ್ ಡ್ಯಾಂ ವೀಕ್ಷಣೆಗೆ ಬಂದಿದ್ದ ಒಂದೇ ಕುಟುಂಬದ ನಾಲ್ಕು ಜನ ಸೆಲ್ಪೀ ತೆಗೆದುಕೊಳ್ಳಲು ಹೋಗಿ ಬಿದ್ದು ಮೃತಪಟ್ಟಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ನಿವಾಸಿಗಳಾದ ಸಂತೋಷ್(14), ಸ್ನೇಹ(19),ಕೋನದ(18), ನಿವಿತಾ(20) ಮೃತಪಟ್ಟವರು. ತಮಿಳುನಾಡಿನ ಕೃಷ್ಣಗಿರಿ ಬಳಿಯ ಪಾಂಬರ್ ಡ್ಯಾಂನಲ್ಲಿ ಈ ಘಟನೆ ನಡೆದಿದೆ. ಮೃತ ನಿವಿತಾ ಎಲೆಕ್ಟ್ರಾನಿಕ್ ಸಿಟಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ನಾಲ್ವರೂ ಆಗಮಿಸಿದ್ದರು. ಬಿಡುವಿನ ವೇಳೆ ಸಮೀಪದ ಪಾಂಬರ್ ಡ್ಯಾಂ ವೀಕ್ಷಣೆಗೆ ತೆರಳಿದ್ದರು.

ಡ್ಯಾಂ ಬಳಿ ಸುತ್ತಾಡಿದ ಬಳಿಕ ಅಂಚಿನಲ್ಲಿ ನಿಂತು ಸೆಲ್ಫೀಗೆ ಪೋಸ್ ನೀಡಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ನಾಲ್ಕೂ ಜನರೂ ಸಾವನ್ನಪ್ಪಿದ್ದಾರೆ. ನಾಲ್ವರಿಗೂ ಈಜು ಬಾರದ ಕಾರಣ ದಡ ಸೇರಲಾರದೇ ಮೃತಪಟ್ಟಿದ್ಧಾರೆ. ಮೃತ ಸಂಬಂಧಕರ ಆಕ್ರಂದನ ಮುಗಿಲು ಮುಟ್ಟಿದೆ. ಕೃಷ್ಣಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.