ಕರ್ನಾಟಕ

ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ: ದಿಢೀರ್ ಸಿಎಂ ಭೇಟಿ, ಆಕ್ರೋಶ ಸ್ಫೋಟ

Pinterest LinkedIn Tumblr


ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಿಸಿದ ಬೆನ್ನಲ್ಲೇ ಅನರ್ಹ ಶಾಸಕರು ಹೆಚ್ಚು ಆತಂಕಕ್ಕೆ ಒಳಗಾಗುವಂತಾಗಿದೆ. ಅದಕ್ಕೆ ಕಾರಣ ಒಂದು ಸ್ಪೀಕರ್ ಕೈಗೊಂಡ ನಿರ್ಧಾರ, ಎರಡನೇಯದು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ ಎಂದು ಸ್ವತಃ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟನೆ ನೀಡಿರುವುದು.

ಅಕ್ಟೋಬರ್ 21ರಂದು 15 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಅ.24ರಂದು ಫಲಿತಾಂಶ ಘೋಷಣೆಯಾಗಲಿದೆ. ಇದರಲ್ಲಿ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ದಿನಾಂಕ ಆಯೋಗ ಘೋಷಿಸಿಲ್ಲ. ಅದಕ್ಕೆ ಕಾರಣ ಕೋರ್ಟ್ ತಡೆಯಾಜ್ಞೆ ನೀಡಿರುವುದು.

ದಿಢೀರ್ ಸಿಎಂ ಭೇಟಿ, ಆಕ್ರೋಶ ಸ್ಫೋಟ;

ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ ಎಂದು ರಾಜ್ಯ ಚುನಾವಣಾಧಿಕಾರಿ ಸ್ಪಷ್ಟನೆ ನೀಡುತ್ತಿದ್ದಂತೆಯೇ ಅನರ್ಹ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಡಿಕೆ ಶಿವಕುಮಾರ್ ಹೇಳಿದಂತೆ ನಮ್ಮನ್ನು ಸಮಾಧಿ ಮಾಡಿಬಿಟ್ರಿ. ನಿಮ್ಮನ್ನು ನಂಬಿ ನಾವು ಬಂದಿದ್ದಕ್ಕೆ ನಮ್ಮ ಬಾಯಿಗೆ ಮಣ್ಣು ಹಾಕಿ ಬಿಡಿ ಎಲ್ಲಾ ಮುಗಿದು ಹೋಯ್ತು ಎಂದು ಅನರ್ಹ ಶಾಸಕರು ಅಸಮಾಧಾನ ತೋಡಿಕೊಂಡಿದ್ದರು. ಇಲ್ಲಾ ನಾನು ನಿಮ್ಮ ಜತೆಗಿದ್ದೇನೆ, ನಿಮಗೆ ಅನ್ಯಾಯವಾಗಲು ನಾನು ಬಿಡಲ್ಲ ಎಂದು ಬಿಎಸ್ ವೈ ಸಮಾಧಾನಪಡಿಸಲು ಯತ್ನಿಸಿದ್ದರು. ಆದರೆ ಚುನಾವಣಾಧಿಕಾರಿ ನೀಡಿರುವ ಸ್ಪಷ್ಟನೆ ನೋಡಿಲ್ಲವಾ? ನಮಗೆ ಸ್ಪರ್ಧಿಸಲು ಅವಕಾಶ ಇಲ್ಲ, ಆ ಕಡೆ ಕೋರ್ಟ್ ನಲ್ಲಿಯೂ ಕಾನೂನು ಸಮರ ಮುಂದುವರಿಸುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು ಎಂದು ವರದಿ ತಿಳಿಸಿದೆ.

ಅನರ್ಹ ಶಾಸಕರ ಮುಂದಿರುವ ದಾರಿ ಏನು?

ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಅನರ್ಹ ಗೊಳಿಸಿರುವ ಸ್ಪೀಕರ್ ಹಾಲಿ ವಿಧಾನಸಭೆಯ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶ ನೀಡಿದ್ದರು.

ಇದೀಗ ಈ ರೂಲಿಂಗ್ ನಿಂದಾಗಿ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಗಿದೆ.

ಸುಪ್ರೀಂನಲ್ಲಿ ಏನು ಮಾಡಬಹುದು:

1)ಈಗಾಗಲೇ ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ಕಟಕಟೆಯಲ್ಲಿದೆ

2)ಇದೀಗ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸ್ಪೀಕರ್ ತೀರ್ಪಿನ ಒಂದು ಭಾಗಕ್ಕೆ ತಡೆಯಾಜ್ಞೆ ನೀಡುವಂತೆ ಸುಪ್ರೀಂನಲ್ಲಿ ಮತ್ತೆ ಅರ್ಜಿ ಸಲ್ಲಿಸಬಹುದು.

3)ಕನಿಷ್ಠ ಪಕ್ಷ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳಬಹುದು.

4) ರಾಜ್ಯದಲ್ಲಿ ಆಯೋಗ ಘೋಷಿಸಿರುವ ಉಪ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸಬಹುದು.

ಮತ್ತೊಂದೆಡೆ ಸುಪ್ರೀಂಕೋರ್ಟ್ ನಲ್ಲಿಯೂ ಅನರ್ಹ ಶಾಸಕರಿಗೆ ಕಾನೂನು ಸಮರದ ಹೋರಾಟದ ಹಾದಿ ಸುಗಮವಾಗಿಲ್ಲ. ಚುನಾವಣಾ ವೇಳಾ ಪಟ್ಟಿ ಪ್ರಕಟವಾದ ವೇಳೆ ಆಕ್ಷೇಪ ಸಲ್ಲಿಸಿದರೆ ಅದನ್ನು ಕೋರ್ಟ್ ಪುರಸ್ಕರಿಸುವುದು ಅನುಮಾನ. ಮತ್ತೊಂದೆಡೆ ಸುಪ್ರೀಂಕೋರ್ಟ್ ಅನರ್ಹರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೂ ಕೂಡಾ ಸಮಸ್ಯೆ ಕಾದಿದೆ. ಅದೇನೆಂದರೆ ಅನರ್ಹತೆ ಅರ್ಜಿ ಬಾಕಿ ಇದ್ದಾಗ ಸಚಿವರಾಗುವ ಅವಕಾಶ ಇಲ್ಲ ಎಂದು ಕಾನೂನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Comments are closed.