ಶಿವಮೊಗ್ಗ; ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅತ್ತಿಗದ್ದೆಯ ಬಳಿ ಕುಂಟೆಹಳ್ಳದಲ್ಲಿ ಕೆಎಸ್ ಆರ್ ಟಿಸಿ ರಾಜಹಂಸ ಬಸ್ ಸಿಲುಕಿಕೊಂಡಿದೆ.
ಶಿವಮೊಗ್ಗ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವ ಕಾರಣ ಹಣಗೆರೆಕಟ್ಟೆ ಮಾರ್ಗವಾಗಿ ಬಸ್ ತೆರಳುತ್ತಿತ್ತು. ಬೆಳಗಿನಜಾವ ಅತ್ತಿಗದ್ದೆಯ ಬಳಿ ಕುಂಟೆಹಳ್ಳ ರಸ್ತೆ ಮೇಲೆ ಉಕ್ಕಿಹರಿದ ಪರಿಣಾಮ ಬಸ್ ನೀರಿನಲ್ಲೆ ನಿಲ್ಲಬೇಕಾಯಿತು.
ಕೆಎಸ್ ಆರ್ ಟಿಸಿ ರಾಜಹಂಸ ಬಸ್ ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ಬಸ್ ನಲ್ಲಿ 20 ಪ್ರಯಾಣಿಕರಿದ್ದು, ಸಂಪೂರ್ಣವಾಗಿ ನೀರು ಆವರಿಸಿದ್ದರಿಂದ ರಸ್ತೆ ಕುಸಿದಿರುವುದು ಕಾಣುತ್ತಿರಲಿಲ್ಲ. ಬಸ್ ಇನ್ನೊಂದು ಸ್ವಲ್ಪ ಮುಂದೆ ಬಂದಿದ್ದರೂ ಬಸ್ ನಲ್ಲಿದ್ದ 20 ಪ್ರಯಾಣಿಕರು ಜಲಸಮಾಧಿಯಾಗುತ್ತಿದ್ದರು.
ಬಸ್ ಚಾಲಕ ಸಮಯ ಪ್ರಜ್ಞೆಯಿಂದ ಮುಂಜಾಗ್ರತಾ ಕ್ರಮವಾಗಿ ಬಸ್ ನಿಲ್ಲಿಸಿದ್ದರಿಂದ ಭಾರಿ ಅವಘಡ ತಪ್ಪಿದೆ. ಬೆಳಗ್ಗೆ ಪ್ರಯಾಣಿಕರನ್ನು ರಕ್ಷಿಸಿ ಬೇರೆ ವಾಹನಗಳ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿದೆ.
Comments are closed.