ನವದೆಹಲಿ(ಆಗಸ್ಟ್.02): ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. “ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸೋದಿಲ್ಲ. ಇಂದಿನಿಂದಲೇ ಚುನಾವಣಾ ರಾಜಕಾರಣದಿಂದ ದೂರ ಉಳಿಯುತ್ತಿದ್ದೇನೆ” ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು, ಬಿಜೆಪಿಗೂ ನಮಗೂ ಸಂಬಂಧ ಇಲ್ಲ. ಹೀಗಾಗಿ ನಾವ್ಯಾರು ಬಿಜೆಪಿಗೆ ಹೋಗುವ ಪ್ರಶ್ನೆಯೇ ಸಂಭವಿಸುವುದಿಲ್ಲ. ಪ್ರಪಂಚ ತುಂಬಾ ವಿಶಾಲವಾಗಿದೆ. ನಾವೇ 20 ಶಾಸಕರೂ ಸೇರಿ ಹೊಸಪಕ್ಷ ಕಟ್ಟಿದ್ರಾಯ್ತು ಎಂದಿದ್ದಾರೆ.
ಇತ್ತೀಚೆಗೆ ಜೆಡಿಎಸ್ ಪಕ್ಷದಿಂದ ತಮ್ಮನ್ನು ಉಚ್ಚಾಟಿಸಿರುವುದನ್ನು ಎಚ್.ವಿಶ್ವನಾಥ್ ಸ್ವಾಗತಿಸಿದ್ದರು. ರಾಷ್ಟ್ರೀಯ ಅಧ್ಯಕ್ಷರಿಗೆ ನನ್ನನ್ನು ಪಕ್ಷದಿಂದ ಉಚ್ಚಾಟಿಸುವ ಅಧಿಕಾರವಿದೆ. ಅದರಂತೆ ದೇವೇಗೌಡರು ತಮ್ಮನ್ನು ಉಚ್ಚಾಟಿಸಿದ್ದಾರೆ. ಈ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ ಎಂದು ಪರೋಕ್ಷವಾಗಿ ತಿವಿದಿದ್ದರು.
ಹಾಗೆಯೇ ರಾಜಕಾರಣದಲ್ಲಿ ನಾನು ಯಾರ ಎದುರಾದರೂ ನಿಂತು ಮಾತಾಡಬಲ್ಲೆ. ಆದರೆ, ದೇವೇಗೌಡರನ್ನು ಎದುರಿಸಿ ನಿಂತು ಮಾತಾಡಲು ತಮ್ಮಿಂದ ಸಾಧ್ಯವಿಲ್ಲ. ದೇವೇಗೌಡರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಎಚ್. ವಿಶ್ವನಾಥ್ ನ್ಯೂಸ್-18 ಕನ್ನಡಕ್ಕೆ ತಿಳಿಸಿದ್ದರು.
ಇದನ್ನೂ ಓದಿ: ಹುಣಸೂರು ಕ್ಷೇತ್ರದಲ್ಲಿ ಹೆಚ್.ಡಿ. ದೇವೇಗೌಡ ವರ್ಸಸ್ ಸಿ.ಪಿ. ಯೋಗೇಶ್ವರ್ ಹಣಾಹಣಿ?
ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲಾಗುವ ಹುಣಸೂರಿನ ಉಪಚುನಾವಣೆಯಲ್ಲಿ ಮಾಜಿ ಪ್ರಧಾಇ ದೇವೇಗೌಡರೇ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಬಿಜೆಪಿಯೂ ಒಕ್ಕಲಿಗರ ಪ್ರಬಲ ನಾಯಕ ಸಿ.ಪ ಯೋಗೇಶ್ವರ್ನನ್ನು ಅಖಾಡಕ್ಕಿಳಿಸಲಿದ್ದಾರೆ ಎನ್ನಲಾಗುತ್ತಿತ್ತು.
ಈ ಮಧ್ಯೆ ಜೆಡಿಎಸ್ ಪಕ್ಷವೂ ತಮ್ಮನ್ನು ಪಕ್ಷದಿಂದ ಉಚ್ಚಾಟಿದೆ. ಬಿಜೆಪಿಯೂ ತಮ್ಮ ಮಗನಿಗೆ ಟಿಕೆಟ್ ನೀಡದೆ ಸಿ.ಪಿ ಯೋಗೇಶ್ವರ್ಗೆ ಮಣೆ ಹಾಕಿದೆ. ಹಾಗಾಗಿ ಇನ್ಮುಂದೆ ತಮಗ್ಯಾವುದೇ ರಾಜಕೀಯ ತಗಾದೆ ಬೇಡವೆಂದು ಭಾವಿಸಿ ಎಚ್. ವಿಶ್ವನಾಥ್ ರಾಜಕೀಯ ನಿವೃತ್ತಿ ಘೋಷಿಸಿರಬಹುದು ಎಂಬ ಚರ್ಚೆ ನಡೆಯುತ್ತಿದೆ.
Comments are closed.