ಬೆಂಗಳೂರು: ವರನಟ ಡಾ. ರಾಜ್ಕುಮಾರ್ ಅವರನ್ನು 19 ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ನಿಂದ ಚಾಮರಾಜನಗರದ ಗಾಜನೂರಿನಿಂದ ಅಪಹರಣಕ್ಕೀಡಾಗಿದ್ದ ಸಂದರ್ಭದಲ್ಲಿ ಅವರ ಬಿಡುಗಡೆ ಸಿದ್ದಾರ್ಥ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿದು ಬಂದಿದೆ.
ಜುಲೈ 30, 2000ನೇ ಇಸವಿಯಂದು ಡಾ. ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಈ ಸಂದರ್ಭದಲ್ಲಿ ಸಿದ್ದಾರ್ಥ ಅವರ ಮಾವ ಎಸ್. ಎಂ. ಕೃಷ್ಣ ಅವರು ರಾಜ್ಯದ ಸಿಎಂ ಆಗಿದ್ದರು. ಜತೆಗೆ ಸಿದ್ದಾರ್ಥ ಅವರು ರಾಜ್ ಕುಟುಂಬದವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಹಾಗಾಗಿ ಅಪಹರಣದ ಬಳಿಕ ರಾಜ್ ಕುಟುಂಬಸ್ಥರೊಂದಿಗೆ ಸಭೆ ನಡೆಸಿದ್ದ ಸಿದ್ದಾರ್ಥ ವರನಟನನ್ನು ಸುರಕ್ಷಿತವಾಗಿ ಕರೆತರುವ ಕುರಿತು ಮಾತುಕತೆ ನಡೆಸಿದ್ದರು. ಎಸ್.ಎಂ. ಕೃಷ್ಣ ಅವರು ಆದಿಕೇವಲು ಜತೆ ಚೆನ್ನೈಗೆ ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು.
ಇದರ ಜತೆಯಲ್ಲೇ ತಮಿಳು ಚಿತ್ರ ನಟ ಸೂಪರ್ಸ್ಟಾರ್ ರಜನಿಕಾಂತ್ ಅವರನ್ನು ಸಂಪರ್ಕಿಸಿ ಅವರ ಮೂಲಕ ರಾಜ್ ಬಿಡುಗಡೆಗೆ ಸಿದ್ಧಾರ್ಥ ಪ್ರಯತ್ನಿಸಿದ್ದರು. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಪ್ರಯತ್ನದ ಫಲವಾಗಿ 108 ದಿನಗಳ ಬಳಿಕ 2000ನೇ ಇಸವಿಯ ನವೆಂಬರ್ 15 ರಂದು ರಾಜ್ ಕುಮಾರ್ ಬಿಡುಗಡೆಗೊಂಡಿದ್ದರು.
ಸಿದ್ಧಾರ್ಥ ಅವರು ಸೋಮವಾರ ರಾತ್ರಿ ಮಂಗಳೂರು ಬಳಿಯ ನೇತ್ರಾವತಿ ಸೇತುವೆ ಬಳಿ ನಾಪತ್ತೆ ಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಅವರು ಎಸ್.ಎಂ. ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದ್ದರು.
Comments are closed.