ಬೆಂಗಳೂರು; ಟಿಪ್ಪು ಜಯಂತಿ ಪ್ರತಿ ವರ್ಷವೂ ಒಂದಲ್ಲಾ ಒಂದು ವಿವಾದದಿಂದ್ಲೇ ಸುದ್ದಿಯಾಗೋ ವಿಷ್ಯವಿದು. ಇದನ್ನೇ ಮುಂದಿಟ್ಕೊಂಡು ಹಲವರು ವೋಟ್ ಬ್ಯಾಂಕ್ ರಾಜಕೀಯ ಮಾಡಿದ್ದೂ ಇದೆ.
ಮೂರು ವರ್ಷದ ಹಿಂದೆ ಆಚರಣೆಗೆ ಬಂದಿದ್ದ ಟಿಪ್ಪು ಜಯಂತಿಗೀಗ ಬ್ರೇಕ್ ಬಿದ್ದಿದೆ. ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೇರ್ತಿದ್ದಂತೆ ವಿವಾದಿತ ಟಿಪ್ಪು ಜಯಂತಿಗೆ ಬ್ರೇಕ್ಹಾಕಿದ್ದಾರೆ. ಇನ್ಮುಂದೆ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸುವಂತಿಲ್ಲ ಅಂತಾ ಹುಕುಂ ಹೊರಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಜಯಂತಿಗೆ ಮುನ್ನುಡಿ ಇಟ್ಟಿತ್ತು. ಇದ್ರಂತೆಯೇ 2016 ನವೆಂಬರ್ 10ರಂದು ಅದ್ಧೂರಿಯಾಗಿ ಆಚರಣೆಯನ್ನೂ ಮಾಡಿದರು. ಆದರೆ, ಕೊಡಗು ಜಿಲ್ಲೆಯಲ್ಲಿ ಮಾತ್ರ ರಕ್ತದೋಕುಳಿಯೇ ಹರಿದು ಹೋಗಿತ್ತು. ಟಿಪ್ಪು ಜಯಂತಿ ವಿರುದ್ಧ ಸಿಡಿದೆದ್ದಿದ್ದ ಅಲ್ಲಿನ ಜನ ರಣಾಂಗಣವನ್ನೇ ಸೃಷ್ಟಿ ಮಾಡಿದರು.
ಆದರೆ, ಸಿದ್ದರಾಮಯ್ಯ ಸರ್ಕಾರ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎಂದಿರ್ಲಿಲ್ಲ. ಆಗ್ಲೇ ಯಡಿಯೂರಪ್ಪ ಆ್ಯಂಡ್ ಟೀಂ ನಾವು ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು ಮಾಡೋದಾಗಿ ಘಂಟಾಘೋಷವಾಗಿ ಸಾರಿದ್ದರು. ಅಂದು ಹೇಳಿದಂತೆಯೇ ಇಂದು ಮಾಡಿ ತೋರಿಸಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಟಿಪ್ಪು ಜಯಂತಿಗೆ ತಿಲಾಂಜಲಿ ಬಿಟ್ಟಿದ್ದಾರೆ.
ಯಾವಾಗ ಬಿಜೆಪಿಯ ಈ ನಿರ್ಧಾರ ಹೊರ ಬಿತ್ತೋ ಕೈ ಪಾಳಯ ಕೆರಳಿ ಕೆಂಡವಾಗಿದೆ. ಅದರಲ್ಲೂ ಸಿದ್ದರಾಮಯ್ಯ ಅಂತೂ ಬಿಎಸ್ವೈ ವಿರುದ್ಧ ಕೆಂಡಕಾರಿದ್ದಾರೆ. ಅಂದು ಕೈಯಲ್ಲಿ ಕತ್ತಿ ಹಿಡಿದು, ಟಿಪ್ಪು ವೇಷ ಹಾಕಿ ಕುಣಿದಾಡಿದರು. ಈಗ ಸಂಘ ಪರಿವಾರ ಮೆಚ್ಚಿಸಲು ಟಿಪ್ಪು ಜಯಂತಿಯನ್ನೇ ರದ್ದು ಮಾಡಿದ್ದಾರೆ ಅಂತಾ ಮಾತಲ್ಲೇ ಗುದ್ದು ಕೊಟ್ಟಿದ್ದಾರೆ.
Comments are closed.