ಕರ್ನಾಟಕ

ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕುಮಾರ್ ! ವಿದಾಯ ಭಾಷಣದಲ್ಲಿ ಹೇಳಿದ್ದು ಹೀಗೆ ….

Pinterest LinkedIn Tumblr

ಬೆಂಗಳೂರು: ಕಳೆದ 14 ತಿಂಗಳುಗಳ ಕಾಲ ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿದ ಕೆ.ಆರ್ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಆತ್ಮಸಾಕ್ಷಿಗನುಗುಣವಾಗಿ, ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸಿರುವುದಾಗಿ ಹೇಳಿದ ಅವರು, ಬಿ.ಎಸ್ ಯಡಿಯೂರಪ್ಪ ಸರಕಾರ ವಿಶ್ವಾಸ ಮತ ಯಾಚನೆ ಕಲಾಪ ನಡೆಸಿಕೊಟ್ಟ ಬಳಿಕ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ಬಿ.ಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸದನದಲ್ಲಿ ವಿಶ್ವಾಸಮತ ಗೆದ್ದುಕೊಂಡಿದ್ದು, ಧನ ವಿನಿಯೋಗ ವಿಧೇಯಕವನ್ನೂ ಅಂಗೀಕಾರ ದೊರಕಿಸಿಕೊಟ್ಟ ಬಳಿಕ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದರು.

ಇದಕ್ಕೆ ಮುನ್ನ ಕೆಲವು ನಿಮಿಷಗಳ ಕಾಲ ವಿದಾಯ ಭಾಷಣ ಮಾಡಿದ ಸ್ಪೀಕರ್‌, ‘ಸಂವಿಧಾನಕ್ಕೆ ನಿಷ್ಠನಾಗಿ ಆತ್ಮಸಾಕ್ಷಿಗನುಗುಣವಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಕೆಲವು ಘಟನೆಗಳು, ಸಂದರ್ಭಗಳಿಗೆ ಅನುಗುಣವಾಗಿ ವಿವೇಚನೆಯಿಂದ ಹೆಜ್ಜೆಯಿಡಬೇಕಾಗುತ್ತದೆ. ನಾವು ಅಲಂಕರಿಸಿದ ಸ್ಥಾನ ದೊಡ್ಡದು. ನಾವು ಸಣ್ಣವರು. ಅಂತಹ ಅವಕಾಶ ಒದಗಿದಾಗ ಆ ಸ್ಥಾನಕ್ಕೆ ಅಪಚಾರ ಆಗದಂತೆ ಕೆಲಸ ಮಾಡಬೇಕು. ನಾನು ಈ ಸ್ಥಾನಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿದ್ದೇನೆ’ ಎಂದು ರಮೇಶ್ ಕುಮಾರ್ ತಿಳಿಸಿದರು.

ಸಾಕಷ್ಟು ಸವಾಲುಗಳು, ಅಸಮಾಧಾನಗಳು ಇದ್ದವು. ಎಲ್ಲವನ್ನೂ ನಿಭಾಯಿಸಿ ಕರ್ತವ್ಯ ನಿರ್ವಹಿಸಿದ್ದೇನೆ. ಕೆಲವು ಸಲ ಸಿಟ್ಟಿನಲ್ಲಿ ಮಾತಾಡಿರಬಹುದು. ಹಾಗಿದ್ದರೂ ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು. ನನ್ನ ಆಪ್ತ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.

Comments are closed.