ಬೆಂಗಳೂರು[ಜು. 28] ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಲಿಲ್ಲ ಎನ್ನುತ್ತ ಮಾಜಿ ಪ್ರಧಾನಿ ದೇವೇಗೌಡರು ಕಣ್ಣಿರು ಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೌಡರು, 14 ಜನರಿಗೆ ಸ್ಪೀಕರ್ ಪಕ್ಷಾಂತರ ಕಾಯ್ದೆಯಡಿ ತೀರ್ಪು ಕೊಟ್ಟಿದ್ದಾರೆ. ಇದು ದೇಶದಲ್ಲೇ ಐತಿಹಾಸಿಕ ತೀರ್ಪು. ಕರ್ನಾಟಕದಲ್ಲಿ ಸಭಾಧ್ಯಕ್ಷರು ವಿಶೇಷ ತೀರ್ಪು ನೀಡಿದ್ದಾರೆ. ಈಗಾಗಲೇ ಅನರ್ಹಗೊಂಡಿದ್ದ ಮೂವರು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸೋಕೆ ಹೊರಟಿದ್ದಾರೆ. ಇದೀಗ ಈ 14 ಜನರು ಯಾವ ತೀರ್ಮಾನ ಮಾಡ್ತಾರೆ ನೋಡ್ಬೇಕು ಎಂದರು.
ಇವತ್ತು ಎರಡು ಕ್ಷೇತ್ರಗಳ ಜನರ ಜೊತೆ ಸಭೆ ನಡೆಸಿದ್ದೇನೆ. ಸಭೆಗೆ ಬಂದವರು ಮನಸ್ಸಿನ ನೋವನ್ನ ಹಂಚಿಕೊಂಡಿದ್ದಾರೆ. ನೀವು ಗುರುತಿಸಿದವರು ಹೇಗೆ ಮೋಸ ಮಾಡಿದ್ದಾರೆ ನೋಡಿ ಎಂದು ಪ್ರಶ್ನೆ ಮಾಡಿದ್ರು. ನಿಷ್ಠಾವಂತ ಕಾರ್ಯಕರ್ತರನ್ನ ನಾನು ಗುರುತಿಸಲಿಲ್ಲ. ನಾನು ಅವರ ಮುಂದೆ ತಪ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನಮಾನ ಕೊಡೋಕೆ ಆಗಲಿಲ್ಲ. ನಾನು ಸಿಎಂ ಆಗಿದ್ದಾಗ, ಹಿಂದೆ ಕುಮಾರಸ್ವಾಮಿ ಆಗಿದ್ದಾಗಲೂ ಕಾರ್ಯಕರ್ತರಿಗೆ ಸ್ಥಾನಮಾನ ಕೋಡೋಕೆ ಆಗಲಿಲ್ಲ. ವಿಧಾನಸಭೆ ಅಧಿವೇಶನ ಕರೆದಿರೋದು ಸರಿಯಾದದ್ದು ಅಲ್ಲ ಎಂದು ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದ್ದಾರೆ. ಸ್ಪೀಕರ್ ವಿರುದ್ಧವೇ ವಿಶ್ವಾಸ ನಿರ್ಣಯ ಮಂಡನೆ ಮಾಡ್ತಾರೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇಬ್ಬರು ವಿಶ್ವಾಸಮಂಡನೆಗೆ ಸುಪ್ರೀಂಕೋರ್ಟ್ಗೆ ಅರ್ಜಿಸಲ್ಲಿಸಿದ್ರು, ಆದ್ರೆ ಪುರಸ್ಕಾರ ಆಗಿರಲಿಲ್ಲ. ಆದ್ರೆ ಸ್ಪೀಕರ್ ಅವರು ರಾಜೀನಾಮೆ ಪತ್ರ ಇಟ್ಕೊಂಡು, ಮಾತು ತಪ್ಪಿದ್ರೇ ರಾಜೀನಾಮೆ ನೀಡುವುದಾಗಿ ಹೇಳೀದ್ದನ್ನು ನೀವೆಲ್ಲ ನೋಡಿದ್ದೀರಿ ಎಂದರು.
ನಾಳೆ ನಾಡಿದ್ದು ಅನರ್ಹ ಶಾಸಕರು ಬಂದು ಮಾತನಾಡ್ತಾರೆ. ಅವರು ಬಂದು ಏನ್ ಮಾತಾಡ್ತಾರೆ ನೋಡ್ಬೇಕು. ನಮ್ಮ ಪಕ್ಷದಲ್ಲಿದ್ದವರು ನನ್ನ ಮೇಲೆ, ಕುಮಾರಸ್ವಾಮಿ ಮೇಲೆ ಏನ್ ಆರೋಪ ಮಾಡ್ತಾರೆ ಅನ್ನೋದನ್ನ ನೋಡ್ತೇನೆ. ಆನಂತರ ಪ್ರತಿಕ್ರಿಯೆ ಕೊಡ್ತೇನೆ ಎಂದು ಗೌಡರು ತಿಳಿಸಿದರು.
ಕಾಂಗ್ರೆಸ್ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಂಬರುವ ಉಪಚುನಾವಣೆಗೆ ಮೈತ್ರಿ ಮಾಡಿಕೊಳ್ಳಬೇಕೆ ಬೇಡವೇ ಎಂಬುದನ್ನು ತೀರ್ಮಾನ ಮಾಡಲಾಗುವುದು, ಕಾಂಗ್ರೆಸ್ನವರು ಮೈತ್ರಿ ವಿಚಾರದಲ್ಲಿ ಯಾವ ನಿರ್ಧಾರ ಮಾಡುತ್ತಾರೆ ಎಂಬದನ್ನು ಕಾದು ನೋಡಿ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇವೆ.
ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ರಾಜ್ಯ ನಾಯಕರಿಂದ ಮಾಹಿತಿ ಪಡೆದು ಯಾವ ತೀರ್ಮಾನ ಕೈಗೊಳ್ಳುತ್ತಾರೋ ನೋಡಬೇಕು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಆದೇಶದಂತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಒಪ್ಪಿಕೊಂಡಿದ್ದರು ಎಂದರು.
Comments are closed.