ಚಿಕ್ಕಮಗಳೂರು/ಕೊಡಗು(ಜುಲೈ 26): ಮಲೆನಾಡು ಮತ್ತು ಕೊಡಗು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿನ್ನೆ ರಾತ್ರಿಯಿಂದಲೂ ಮಳೆ ಎಡೆಬಿಡದೆ ಸುರಿಯುತ್ತಿದೆ. ಕಳೆದೊಂದು ವಾರದಿಂದ ಕಾಫಿನಾಡಿನಲ್ಲಿ ಇಳಿಮುಖವಾಗಿದ್ದ ಮಳೆ ಮತ್ತೆ ಆರ್ಭಟಿಸುತ್ತಿದೆ. ಭಾರೀ ಮಳೆಯಿಂದಾಗಿ ಇಲ್ಲಿಯ ಜನಜೀವನ ಅಸ್ತವ್ಯಸ್ತವಾದರೂ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಲೆನಾಡಿನ ನದಿಗಳಿಗೆ ಜೀವ ಕಳೆ ಬಂದಿದೆ.
ಚಿಕ್ಕಮಗಳೂರಿನ ಕುದುರೆಮುಖ, ಕೆರೆಕಟ್ಟೆ, ಶೃಂಗೇರಿ, ಮೂಡಿಗೆರೆ, ಕೊಪ್ಪ ಮತ್ತು ಎನ್.ಆರ್. ಪುರದಲ್ಲಿ ಒಳ್ಳೆಯ ಮಳೆಯಾಗುತ್ತಿದೆ. ಇದರಿಂದಾಗಿ ತುಂಗ, ಭದ್ರ, ಹೇಮಾವತಿ ನದಿಗಳಿಗೆ ಒಳಹರಿವು ಹೆಚ್ಛಾಗುತ್ತಿದ್ದು ಈ ನದಿಗಳು ಮೈದುಂಬಿ ಹರಿಯುತ್ತಿವೆ.
ಕೊಡಗು ಜಿಲ್ಲೆಯಾದ್ಯಂತವೂ ಇವತ್ತು ಬೆಳಗ್ಗೆಯಿಂದ ಮಳೆಯಾಗುತ್ತಿದೆ. ಬ್ರಹ್ಮಗಿರಿ, ಪುಷ್ಪಗಿರಿ ತಪ್ಪಲಲ್ಲಿ ಉತ್ತಮ ಮಳೆಯಾಗಿದ್ದು,ಕಾವೇರಿ ನದಿಯಲ್ಲಿ ನೀರಿನ ಒಳಹರಿವ ಹೆಚ್ಚಾಗಿದೆ. ಕೊಡಗಿನ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ತುಸು ಹೆಚ್ಚಿದೆ. ಹಾಗೆಯೇ ಕೆಆರ್ ಸಾಗರ ಮತ್ತು ಕಬಿನಿ ಜಲಾಶಯಗಳೂ ಭರ್ತಿಯಾಗುತ್ತಿವೆ.
ಇನ್ನು, ಮಹಾರಾಷ್ಟ್ರ ಭಾಗದಲ್ಲಿ ಚೆನ್ನಾಗಿ ಆಗುತ್ತಿರುವುದರಿಂದ ವಿಜಯಪುರದ ಆಲಮಟ್ಟಿ ಜಲಾಶಯ ಕೂಡ ತುಂಬುತ್ತಿದೆ.
ಕೊಡಗಿನ ಹಾರಂಗಿ ಜಲಾಶಯ:
ಗರಿಷ್ಠ ಮಟ್ಟ: 2,859 ಅಡಿಗಳು
ಇಂದಿನ ನೀರಿನ ಮಟ್ಟ: 2,833.12ಅಡಿಗಳು
ಕಳೆದ ವರ್ಷ ಇದೇ ದಿನ: 2,856.18ಅಡಿ
ಇಂದಿನ ನೀರಿನ ಒಳಹರಿವು 1,340 ಕ್ಯುಸೆಕ್
ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1,124.2 ಕ್ಯುಸೆಕ್
ಮೈಸೂರಿನ ಕಬಿನಿ ಜಲಾಶಯ:
ಇಂದಿನ ಒಳಹರಿವು 6615 ಕ್ಯೂಸೆಕ್.
ಇಂದಿನ ಹೊರಹರಿವು 6500 ಕ್ಯೂಸೆಕ್.
ಇಂದಿನ ನೀರಿನ ಮಟ್ಟ 2273.16 ಅಡಿ.
ಗರಿಷ್ಠ ನೀರಿನ ಮಟ್ಟ 2284 ಅಡಿ.
ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾರ್ಮಾಥ್ಯ 19.52 ಟಿಎಂಸಿ
ಜಲಾಶಯದಲ್ಲಿ ಇಂದು ಇರುವ ನೀರಿನ ಸಂಗ್ರಹ 13.28 ಟಿಎಂಸಿ
ಮಂಡ್ಯದ ಕೆ.ಆರ್. ಸಾಗರ:
ಗರಿಷ್ಠ ಮಟ್ಟ-124.80 ಅಡಿ
ಪ್ರಸ್ತುತ ಮಟ್ಟ-88.40
ಒಳಹರಿವು-7,220
ಹೊರಹರಿವು-7,010
ಪ್ರಸ್ತುತ ಸಂಗ್ರಹ-15.007 ಟಿಎಂಸಿ
ವಿಜಯಪುರದ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ:
ಗರಿಷ್ಠ ಮಟ್ಟ- 519.60 ಮೀ.
ಇಂದಿನ ಮಟ್ಟ- 519.24 ಮೀ
ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 116.869 ಟಿಎಂಸಿ
ಒಳಹರಿವು- 11679ಕ್ಯೂಸೆಕ್
ಹೊರ ಹರಿವು- 128 ಕ್ಯೂಸೆಕ್
Comments are closed.