ಕರ್ನಾಟಕ

ಅತೃಪ್ತರ ರಾಜೀನಾಮೆ ಇತ್ಯರ್ಥವಾಗದೆ ಬಹುಮತಯಾಚನೆ ಇಲ್ಲ; ಸ್ಪೀಕರ್​ಗೆ ಕೃಷ್ಣಭೈರೇಗೌಡ ಮನವಿ

Pinterest LinkedIn Tumblr


ಬೆಂಗಳೂರು (ಜುಲೈ.22); ಅತೃಪ್ತರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಈವರೆಗೆ ಯಾವುದೇ ತೀರ್ಮಾನವಾಗದ ಕಾರಣ ಬಹುಮತ ಯಾಚನೆ ಎಂಬುದು ತ್ರಿಶಂಕು ಸ್ಥಿತಿಯಲ್ಲಿದೆ. ಹೀಗಾಗಿ ಇದಕ್ಕೆ ಸ್ಪೀಕರ್ ಶೀಘ್ರವಾಗಿ ಒಂದು ಪರಿಹಾರ ನೀಡಬೇಕು ಅಲ್ಲಿಯವರೆಗೆ ಬಹುಮತ ಯಾಚನೆಯನ್ನು ಮುಂದೂಡಬೇಕು ಎಂದು ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದ್ದಾರೆ.

ಸೋಮವಾರದ ಅಧಿವೇಶನದಲ್ಲಿ ತಮಿಳುನಾಡಿನಲ್ಲಿ 2017ರಲ್ಲಿ ಉಂಟಾದ ರಾಜಕೀಯ ಪ್ರಕ್ಷುಬ್ಧ ವಾತಾವರಣ ಹಾಗೂ 11 ಶಾಸಕರನ್ನು ಅನೂರ್ಜಿತಗೊಳಿಸಿದ ಸ್ಪೀಕರ್​ ತೀರ್ಮಾನವನ್ನು ಉಲ್ಲೇಖಿಸಿ ಮಾತನಾಡಿದ ಕೃಷ್ಣಭೈರೇಗೌಡ, “2017ರಲ್ಲಿ ವಿಪ್ ಉಲ್ಲಂಘಿಸಿದ ಆಡಳಿತ ಪಕ್ಷದ 11 ಶಾಸಕರನ್ನು ಅಲ್ಲಿನ ಸ್ಪೀಕರ್ ಅನೂರ್ಜಿತಗೊಳಿಸಿದ್ದರು. ಸ್ಪೀಕರ್ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಇಂದು ರಾಜ್ಯದಲ್ಲೂ ಸಹ ಇಂತಹದ್ದೇ ಇಂದು ಪರಿಸ್ಥಿತಿ ನಿರ್ಮಾಣವಾಗಿದೆ.

ಆಡಳಿತ ಮೈತ್ರಿ ಪಕ್ಷಗಳ 15ಕ್ಕೂ ಹೆಚ್ಚು ಶಾಸಕರು ಇಂದು ಆಪರೇಷನ್ ಕಮಲಕ್ಕೆ ಬಲಿಯಾಗಿ ಮುಂಬೈನಲ್ಲಿ ಕುಳಿತಿದ್ದಾರೆ. ಇವರೆಲ್ಲರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಇವರ ವಿರುದ್ಧ ಮೈತ್ರಿ ಪಕ್ಷದ ನಾಯಕರು ವಿಪ್ ಉಲ್ಲಂಘನೆ ದೂರು ನೀಡಿದ್ದಾರೆ. ಸದನದಲ್ಲಿ ಇವರ ಹಾಜರಿ ಇಲ್ಲದೆ ಬಹುಮತ ಯಾಚನೆ ನಡೆಯುವುದು ಸರಿಯಲ್ಲ. ಹೀಗಾಗಿ ಸ್ಪೀಕರ್ ಮೊದಲು ಇವರ ರಾಜೀನಾಮೆ ಅರ್ಜಿಯ ಕುರಿತು ವಿಚಾರಣೆ ನಡೆಸಿ. ವಿಪ್ ಉಲ್ಲಂಘನೆ ಕುರಿತು ವಿಚಾರಣೆ ನಡೆಸಿ ಕ್ರಮ ಜರುಗಿಸಿ. ಈ ತ್ರಿಶಂಕು ಸ್ಥಿತಿಯನ್ನು ತೊಲಗಿಸಿ ನಂತರ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ” ಎಂದು ಅವರು ಮನವಿ ಮಾಡಿದ್ದಾರೆ.

ಆಪರೇಷನ್ ಕಮಲದ ಲೆಕ್ಕ ಬಿಚ್ಚಿಟ್ಟು ಬಿಜೆಪಿಗರ ನೈತಿಕತೆ ಪ್ರಶ್ನಿಸಿದ ಕೃಷ್ಣಭೈರೇಗೌಡ;

ರಾಜ್ಯದ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸಿರುವ ಸಚಿವ ಕೃಷ್ಣಭೈರೇಡ ಕಳೆದ 10 ವರ್ಷಗಳಿಂದ ಬಿಜೆಪಿ ಎಲ್ಲೆಲ್ಲಿ ಹೇಗೆ ಆಪರೇಷನ್ ಕಮಲ ನಡೆಸಿತ್ತು ಎಂಬ ವಿವರಣೆ ನೀಡುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಸದನದಲ್ಲಿ ಆಪರೇಷನ್ ಕಮಲದ ಬಗ್ಗೆ ಕಿಡಿಕಾರಿದ ಅವರು, “ಬಹುಮತ ಇಲ್ಲದ ಮೈತ್ರಿ ನಾಯಕರು ನೈತಿಕತೆ ಇದ್ದರೆ ಬಹುಮತ ಸಾಬೀತುಪಡಿಸಲಿ ಎಂದು ಹೇಳುತ್ತಿದ್ದಾರೆ. ಆದರೆ, ಹೀಗೆ ಹೇಳಲು ಅವರಿಗೇನು ನೈತಿಕತೆ ಇದೆ. ಆಪರೇಷನ್ ಕಮಲದ ಮೂಲಕ ಸರ್ಕಾರವನ್ನೇ ಉರುಳಿಸಿ ತಾವು ಸರ್ಕಾರ ರಚಿಸಲು ಇಷ್ಟು ಅವಸರ ತೋರಿಸುತ್ತಿರುವ ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ” ಎಂದು ಕೃಷ್ಣಭೈರೇಗೌಡ ಪ್ರಶ್ನಿಸಿದ್ದಾರೆ.

“ಕಳೆದ ಒಂದು ವರ್ಷದಿಂದ ಬಿಜೆಪಿ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ. ಜೆಪಿಪಿ ಪಕ್ಷದ ನಾಯಕರು ಎಲ್ಲಾ ಅತೃಪ್ತ ಶಾಸಕರ ಬಳಿ ಮಾತನಾಡಿದ್ದಾರೆ, ಹಣದ ಆಮಿಷ ಒಡ್ಡಿದ್ದಾರೆ. ಈ ಕುರಿತ ಆಡಿಯೋಗಳು ಈಗಾಗಲೇ ಬಹಿರಂಗವಾಗಿದೆ. ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಶಾಸಕ ಸುಧಾಕರ್ ಸೇರಿದಂತೆ ಎಲ್ಲಾ ತೃಪ್ತರನ್ನು ಬಿ.ಎಸ್. ಯಡಿಯೂರಪ್ಪ ಅವರ ಪಿಎ ಖುದ್ದು ವಿಮಾನ ಹತ್ತಿಸಿ ಬಂದಿದ್ದಾರೆ. ಮಾಜಿ ಡಿಸಿಎಂ ಆರ್. ಅಶೋಕ್ ಖಾಸಗಿ ವಿಮಾನದಲ್ಲಿ ಖುದ್ದಾಗಿ ಎಂಟಿಬಿ ನಾಗರಾಜ್ ಅವರನ್ನು ಮುಂಬೈಗೆ ಬಿಟ್ಟು ಬಂದಿದ್ದರು. ಇದು ಆಪರೇಷನ್ ಕಮಲ ಅಲ್ವೆ? ಎಂದು ಅವರು ಪ್ರಶ್ನಿಸಿದರು.

ಇನ್ನೂ 2009ರಲ್ಲಿ ತುರುವೇಕರೆ ಶಾಸಕ ಜಗ್ಗೇಶ್ ಅವರಿಂದ ಕಾರವಾರ ಶಾಸಕ ಅರವಿಂದ ಆಸ್ನೋಟಿಕರ್ ತನಕ ಬಿಜೆಪಿ ಮಾಡಿದ್ದೆಲ್ಲವೂ ಆಪರೇಷನ್ ಕಮಲ ಅಲ್ವ? ಆಂಧ್ರ ತೆಲಂಗಾಣದಲ್ಲಿ ಮಾಡಿದ್ದು ಆಪರೇಷನ್ ಕಮಲ ಅಲ್ವ? ದೇಶದ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿ ಬಹಿರಂಗವಾಗಿ ಪಶ್ಚಿಮ ಬಂಗಾಳದ 40 ಜನ ಟಿಎಂಸಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಆಪರೇಷನ್ ಕಮಲ ಅಲ್ವ ಎಂದು ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಕಿಡಿಕಾರಿದ್ಧಾರೆ.

Comments are closed.