
ಮುಂಬಯಿ: ಕರ್ನಾಟಕ ದೋಸ್ತಿ ಸರಕಾರದ ವಿರುದ್ಧ ಅಸಮಾಧಾನದಿಂದ ನಾವೆಲ್ಲ 12 ಶಾಸಕರು ರಾಜೀನಾಮೆ ನೀಡಿದ್ದೇವೆ. ಬೇರೆ ಪಕ್ಷಗಳಲ್ಲಿ ಇದ್ದರೂ ಎಲ್ಲರದ್ದೂ ಒಂದೇ ನಿರ್ಧಾರವಾಗಿದೆ, ಯಾವುದೇ ಗುಂಪುಗಾರಿಕೆ ನಮ್ಮಲ್ಲಿ ಇಲ್ಲ ಎಂದು ಶಾಸಕ ಎಸ್ಟಿ ಸೋಮಶೇಖರ್ ತಿಳಿಸಿದ್ದಾರೆ.
ಮುಂಬಯಿಯಲ್ಲಿ ಭಾನುವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿದ ಅತೃಪ್ತ ಶಾಸಕರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ಎಲ್ಲ 12 ಶಾಸಕರದ್ದು ಒಮ್ಮತ ತೀರ್ಮಾನ. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆ ಇಲ್ಲ. ಇಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಈಗ ಎಂಟಿಬಿ ನಾಗರಾಜ್ ಅವರೂ ನಮ್ಮನ್ನು ಸೇರಿಕೊಂಡಿದ್ದಾರೆ. ಶೀಘ್ರವೇ ಡಾ. ಸುಧಾಕರ್ ಕೂಡ ಬರಲಿದ್ದಾರೆ ಎಂದರು.
ಮುಂಬಯಿಗೆ ನಾಗರಾಜ್ ಬರುವುದಕ್ಕೂ ಮುನ್ನ ಬಿಜೆಪಿಯ ಆರ್. ಅಶೋಕ್, ಯಡಿಯೂರಪ್ಪ ಆಫ್ತ ಸಹಾಯಕ ಸಂತೋಷ್ ಜತೆ ಇದ್ದರು ಎಂಬ ಪ್ರಶ್ನೆಗೆ ಉತ್ತರಿಸಿದರ ಸೋಮಶೇಖರ್, ಮುಂಬಯಿಗೆ ರಾಜಕಾರಣಿಗಳು ಬರುವುದು ಸಾಮಾನ್ಯ. ವಿಮಾನ ನಿಲ್ದಾಣಕ್ಕೆ ಅವರು ಬಂದಿದ್ದು ಕಾಕತಾಳೀಯ ಇರಬಹುದು ಎಂದರು.
ನಾವು ಯಾರ ಸಂಪರ್ಕದಲ್ಲೂ ಇಲ್ಲ. ಯಾರ ಸಂಪರ್ಕಕ್ಕೂ ಬರಲು ಇಷ್ಟಪಡುವುದಿಲ್ಲ. ಹೀಗಾಗಿ ಹೋಟೆಲ್ ವ್ಯವಸ್ಥಾಪಕರಿಗೆ ದೂರು ನೀಡಿದ್ದು, ನಮ್ಮನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದೇವೆ ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ರಾಜೀನಾಮೆ ಸಲ್ಲಿಸಿದಾಗ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಅವರು ಕೂಡ ಶೀಘ್ರದಲ್ಲೇ ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದರು.
ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಮುಂಬಯಿಗೆ ಹಾರಿದ್ದ ಎಂಟಿಬಿ ನಾಗರಾಜ್ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ. ಸುಧಾಕರ್ ಜತೆ ಕೂಡ ಮಾತುಕತೆ ನಡೆಸಿದ್ದೇನೆ ಎಂದು ನಾಗರಾಜ್ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ 12 ಶಾಸಕರು ಹಾಜರಿದ್ದರು.
Comments are closed.