ಬೆಂಗಳೂರು: ದಲಿತ ನಾಯಕರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡುವ ಸಂಬಂಧ ನೀಡಿದ್ದ ಹೇಳಿಕೆ ಮತ್ತು ಅದಕ್ಕೆ ಬಿಜೆಪಿಯಿಂದ ಬಂದ ಪ್ರತಿಕ್ರಿಯೆ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಮುಂದೆ ಉತ್ತರಿಸಿದ್ದಾರೆ.
ಮೊನ್ನೆ ನಡೆದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಚಿವ ಸಂಪುಟ ರಚನೆಯಲ್ಲಿ ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿಲ್ಲ. ಒಬ್ಬರೇ ಒಬ್ಬ ಅಲ್ಪಸಂಖ್ಯಾತರನ್ನು ಮಂತ್ರಿ ಮಾಡಿರುವುದು, ಹಿಂದುಳಿದ ವರ್ಗದಲ್ಲಿ ಕೂಡ ಒಬ್ಬರಿಗೊ, ಇಬ್ಬರಿಗೊ ಮಂತ್ರಿ ಸ್ಥಾನ ನೀಡಿದ್ದಾರೆ. ದಲಿತರಿಗೂ ಮೂರ್ನಾಲ್ಕು ಸಂಸದರನ್ನು ಮಂತ್ರಿಯನ್ನಾಗಿ ಮಾಡಿದ್ದಾರಷ್ಟೆ,57 ಜನರಲ್ಲಿ ಕೆಲವರಿಗೆ ನಾಮಕಾವಸ್ಥೆ ಮಂತ್ರಿಗಿರಿ ನೀಡಿದರೆ, ಕರ್ನಾಟಕದಿಂದ ಒಬ್ಬರಿಗೂ ದಲಿತ, ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಟ್ಟಿಲ್ಲ, ಅದು ಅನ್ಯಾಯ, ಸಾಮಾಜಿಕ ನ್ಯಾಯ ಅಲ್ಲ ಎಂದು ಟ್ವಿಟ್ಟರ್ ನಲ್ಲಿ ನಾನು ಹೇಳಿದ್ದೇನೆ ಎಂದರು.
ನಿಮ್ಮ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿರುವ ಬಿಜೆಪಿ ಸಿದ್ದರಾಮಯ್ಯನವರು ಬರಿ ಟ್ವಿಟ್ಟರ್ ನಲ್ಲಿ ಮಾತ್ರ ದಲಿತರ ಮೇಲೆ ಪ್ರೀತಿ ಇಟ್ಟುಕೊಂಡವರು, ಹಾಗಿದ್ದರೆ ಖರ್ಗೆ, ಪರಮೇಶ್ವರ್ ಅವರನ್ನು ಸಿಎಂ ಮಾಡಲಿಲ್ಲವೇಕೆ ಎಂದು ತಿರುಗೇಟು ಕೊಟ್ಟಿದ್ದಾರಲ್ಲವೇ ಎಂದು ಕೇಳಿದಾಗ, ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡುವುದು ಬೇಡ ಎಂದು ನಾವು ಹೇಳಲೇ ಇಲ್ಲ, ಅವರು ಕೂಡ ಸಿಎಂ ಆಗಬೇಕು ಎಂಬ ಇಚ್ಛೆಯನ್ನು ಹೊಂದಿದ್ದಾರೆ.
ನನಗೆ 2013ರಲ್ಲಿ ಶಾಸಕರು ಮತ್ತು ಹೈಕಮಾಂಡ್ ಎಲ್ಲರೂ ಮುಖ್ಯಮಂತ್ರಿಯಾಗಬೇಕೆಂದು ಹೇಳಿದರು, ಅದಕ್ಕೆ ನಾನು ಮುಖ್ಯಮಂತ್ರಿಯಾಗಿದ್ದೆ. ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗಬಾರದು, ಪರಮೇಶ್ವರ್ ಆಗಬಾರದು ಎಂಬುದಲ್ಲ ನಮ್ಮ ಧೋರಣೆ, ಹೈಕಮಾಂಡ್ ಹೇಳಿದ್ದರು, ನಾನು ಸಿಎಂ ಆಗಿದ್ದೆ ಅಷ್ಟೆ, ಈಗ ಎಲ್ಲರಿಗೂ ಅವಕಾಶ ಸಿಗಬೇಕು, ಅದು ನಮ್ಮ ನಿಲುವು ಎಂದರು.
Comments are closed.