ಬೆಂಗಳೂರು: ಮೀಟರ್ ದಂಧೆಗೆ ತಾಯಿ ಹಾಗೂ ಮಗ ಬಲಿಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಂದೆಯೇ ಮಗನನ್ನು ನೇಣು ಹಾಕುತ್ತಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ.
ಹೆಚ್ಎಎಲ್ ವಿಭೂತಿಪುರ ನಿವಾಸಿ ಗೀತಾಬಾಯಿ (34) ಹಾಗೂ ಮಗ ವರುಣ್ ರಾವ್ (12) ಮೃತರು. ಗೀತಾಬಾಯಿ ಅವರ ಪತಿ ಸುರೇಶ್ ಸ್ವಂತ ಮಗನಿಗೆ ನೇಣು ಹಾಕಿದ್ದಾರೆ. ಈ ಮೂಲಕ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಂಡಿದೆ.
ಆಗಿದ್ದೇನು?:
ಸುರೇಶ್ ಹಾಗೂ ಗೀತಾಬಾಯಿ ದಂಪತಿ ಪುತ್ರ ವರುಣ್ ರಾವ್, ಪುತ್ರಿಯ ಜೊತೆಗೆ ಹೆಚ್ಎಎಲ್ ವಿಭೂತಿಪುರದಲ್ಲಿ ವಾಸವಿದ್ದರು. ಸುರೇಶ್ ಸ್ವಿಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿದ್ದರೆ, ಗೀತಾಬಾಯಿ ಅವರು ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.
ಕುಟುಂಬದ ಜೊತೆಗೆ ಶನಿವಾರ ಮನೆಯಲ್ಲಿದ್ದ ಸುರೇಶ್ ಫ್ಯಾನಿಗೆ ಸೀರೆ ಕಟ್ಟಿ ಪುತ್ರ ವರುಣ್ ರಾವ್ಗೆ ನೇಣು ಹಾಕಿದ್ದಾನೆ. ಇದನ್ನು ನೋಡಿದ ಪತ್ನಿ ಗೀತಾಬಾಯಿ ಹಾಗೂ ಪುತ್ರಿ ಬಿದ್ದು ಬಿದ್ದು ಕಣ್ಣೀರಿಟ್ಟಿದ್ದಾರೆ. ಆದರೆ ಸುರೇಶ್ ಮಾತ್ರ ಮಗನ ಸಾವನ್ನಪ್ಪಿದ ಬಳಿಕವೇ ದೇಹವನ್ನು ಮಂಚದ ಮೇಲೆ ತಂದು ಹಾಕಿದ್ದಾನೆ. ಈ ದೃಶ್ಯವು ಆರೋಪಿ ಸುರೇಶ್ ಮೊಬೈಲ್ನಲ್ಲಿ ಸೆರೆಯಾಗಿದ್ದು, ಪೊಲೀಸರ ಕೈಗೆ ಸಿಕ್ಕಿದೆ.
ಗೀತಾಬಾಯಿ ಕಣ್ಣೀರು ಹಾಕುತ್ತಿದ್ದ ಧ್ವನಿ ಕೇಳಿ ನೆರೆಹೊರೆಯವರು ಮನೆಗೆ ಬಂದಿದ್ದರು. ಈ ವೇಳೆ ಏನು ನಡೆದಿಲ್ಲ ಎಂಬಂತೆ ಸುರೇಶ್ ನಟಿಸಿದ್ದ. ಬಳಿಕ ಮಗನ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಗೀತಾಬಾಯಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ. ಆದರೆ ಈ ಸಂಬಂಧ ಸುರೇಶ್ನನ್ನು ವಿಚಾರಣೆ ಮಾಡಿದಾಗ, ವಿಭೂತಿಪುರದ ಫೈನ್ಸಾನಿಯರ್ ಸುಧಾ ಎಂಬವರ ಬಳಿ ಎರಡು ವರ್ಷಗಳ ಹಿಂದೆ 40 ಸಾವಿರ ರೂ. ಸಾಲ ಪಡೆದಿದ್ದೆವು. ಕೆಲವು ದಿನಗಳನಲ್ಲಿ ಬಡ್ಡಿ ಸಮೇತ ಸಾಲವನ್ನು ತೀರಿಸಿದ್ದೇವು. ಆದರೂ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಸಹ ಸುಧಾ ಕಡೆಯವರು ಮನೆ ಬಳಿ ಬಂದು ಪತ್ನಿ ಹಾಗೂ ಮಗನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಹೋಗಿದ್ದರು. ಇದರಿಂದಾಗಿ ಮನನೊಂದ ಪತ್ನಿ ನಾನು ಮನೆಯಲ್ಲಿ ಇಲ್ಲದಿದ್ದಾಗ ಡೆತ್ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಸುರೇಶ್ ಹೇಳಿಕೆ ನೀಡಿದ್ದರು ಎಂದು ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಕುಟುಂಬದ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರೋ? ಕೇವಲ ಫೈನ್ಸಾನಿಯರ್ ಗಳಿಗೆ ಹೆದರಿಸಲು ಹೀಗೆ ಮಾಡಿದ್ದರೋ ಎನ್ನುವುದು ಸ್ಪಷ್ಟವಾಗಿಲ್ಲ. ಈ ವಿಡಿಯೋದಿಂದ ಪ್ರಕರಣ ತಿರುವು ಪಡೆದುಕೊಂಡಿದೆ. ಆರೋಪಿ ಸುರೇಶ್ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
Comments are closed.