ಕರ್ನಾಟಕ

ಮಗನ ಸೋಲು; ಕುಮಾರಸ್ವಾಮಿ ತೆಗೆದುಕೊಳ್ಳಲಿರುವ ಕೋಪದ ನಿರ್ಧಾರಕ್ಕೆ ಕಂಗಾಲಾದ ಜೆಡಿಎಸ್ ಸಚಿವರು!

Pinterest LinkedIn Tumblr


ಮಂಡ್ಯ: ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಮಂಡ್ಯ ಲೋಕಸಭಾ ಚುನಾವಣಾ ಸಮರದಲ್ಲಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಮಗ ನಿಖಿಲ್​ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಗೆಲುವಿನ ನಗೆ ಬೀರಿದ್ದರು. ಶತಯಾ-ಗತಾಯ ಮಗನನ್ನು ಗೆಲ್ಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದ ಕುಮಾರಸ್ವಾಮಿಗೆ ಈ ಫಲಿತಾಂಶ ಭಾರೀ ಮುಖಭಂಗ ಉಂಟು ಮಾಡಿತ್ತು. ಮಂಡ್ಯದಲ್ಲಿ 7 ಜೆಡಿಎಸ್​ ಶಾಸಕರಿದ್ದರೂ ನಿಖಿಲ್​ಗೆ ಗೆಲ್ಲಲು ಸಾಧ್ಯವಾಗಿಲ್ಲ. ಈ ವಿಚಾರ ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ನಿಖಿಲ್​ ಸೋಲಿಗೆ ಈ ವ್ತಾಪ್ತಿಯ ಸಚಿವರು ಭಾರೀ ತಲೆದಂಡ ತೆತ್ತಬೇಕಾದ ಪರಿಸ್ಥಿತಿ ಬಂದೊದಗಿದೆ ಎನ್ನಲಾಗುತ್ತಿದೆ.

ನಿಖಿಲ್​ ಗೆಲ್ಲಿಸುವ ಜವಾಬ್ದಾರಿಯನ್ನು ಮಂಡ್ಯ ಉಸ್ತುವಾರಿ ಸಚಿವ ಪುಟ್ಟರಾಜು ಹೊತ್ತಿದ್ದರು. ಆದರೆ, ಅವರ ಕಾರ್ಯತಂತ್ರ ಇಲ್ಲಿ ಕೆಲಸ ಮಾಡಲಿಲ್ಲ. ಹಾಗಾಗಿ, ಸೋಲಿನ ನೈತಿಕ ಹೊಣೆ ಹೊತ್ತು ಪುಟ್ಟರಾಜು ಅವರೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಸಚಿವರಾಗಿದ್ದು ನಿಖಿಲ್​ಗೆ ಲೀಡ್ ಕೊಡಿಸಲಾಗದ ಡಿಸಿ ತಮ್ಮಣ್ಣ ಮತ್ತು ಸಾರಾ ಮಹೇಶ್​​ ಕೂಡ ತಲೆದಂಡ ತೆತ್ತಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಕುಮಾರಸ್ವಾಮಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದಾರಂತೆ.

ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ, ಈ ಭಾಗದಲ್ಲಿ ನಿಖಿಲ್​ ಬದಲಾಗಿ ಸುಮಲತಾಗೆ ಹೆಚ್ಚು ಲೀಡ್​ ಸಿಕ್ಕಿದೆ. ಇದು ಕುಮಾರಸ್ವಾಮಿಯ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ನಿಗಮ ಮಂಡಳಿಯಿಂದ ಅವರಿಗೆ ಕೋಕ್​ ನೀಡಲಾಗುತ್ತಿದೆ ಎನ್ನಲಾಗಿದೆ. ಅಲ್ಲದೆ, ಮೂವರು ಸಚಿವರ ಖಾತೆಯನ್ನು ಹೊಸಬರಿಗೆ ಹಂಚಿಕೆ ಮಾಡುವ ಮೂಲಕ ಸರ್ಕಾರ ಉಳಿಸಿಕೊಳ್ಳುವ ಆಲೋಚನೆಯಲ್ಲಿ ಅವರಿದ್ದಾರೆ. ‌ಕುಮಾರಸ್ವಾಮಿ ಈ ಕೋಪದ ನಿರ್ಧಾರಕ್ಕೆ ಸಚಿವರು ಮತ್ತು ಶಾಸಕರು ಕಂಗಾಲಾಗಿದ್ದಾರಂತೆ. ಈ ಬಗ್ಗೆ ಕುಮಾರಸ್ವಾಮಿ ಅವರನ್ನು ಮನವೊಲಿಸುವ ಪ್ರಯತ್ನಕ್ಕೂ ಮುಂದಾಗಲಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್​ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ 1.30 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಸುಮಲತಾ ಪರ ಸ್ಯಾಂಡಲ್​ವುಡ್​ ನಟರಾದ ಯಶ್​-ದರ್ಶನ್​ ಪ್ರಚಾರ ನಡೆಸಿದ್ದರು. ಇದು ನಿಖಿಲ್​ ಸೋಲಿಗೆ ಪ್ರಮುಖ ಕಾರಣವಾಗಿತ್ತು.

Comments are closed.