ಮಂಡ್ಯ: ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಮಂಡ್ಯ ಲೋಕಸಭಾ ಚುನಾವಣಾ ಸಮರದಲ್ಲಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮಗ ನಿಖಿಲ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿನ ನಗೆ ಬೀರಿದ್ದರು. ಶತಯಾ-ಗತಾಯ ಮಗನನ್ನು ಗೆಲ್ಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದ ಕುಮಾರಸ್ವಾಮಿಗೆ ಈ ಫಲಿತಾಂಶ ಭಾರೀ ಮುಖಭಂಗ ಉಂಟು ಮಾಡಿತ್ತು. ಮಂಡ್ಯದಲ್ಲಿ 7 ಜೆಡಿಎಸ್ ಶಾಸಕರಿದ್ದರೂ ನಿಖಿಲ್ಗೆ ಗೆಲ್ಲಲು ಸಾಧ್ಯವಾಗಿಲ್ಲ. ಈ ವಿಚಾರ ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ನಿಖಿಲ್ ಸೋಲಿಗೆ ಈ ವ್ತಾಪ್ತಿಯ ಸಚಿವರು ಭಾರೀ ತಲೆದಂಡ ತೆತ್ತಬೇಕಾದ ಪರಿಸ್ಥಿತಿ ಬಂದೊದಗಿದೆ ಎನ್ನಲಾಗುತ್ತಿದೆ.
ನಿಖಿಲ್ ಗೆಲ್ಲಿಸುವ ಜವಾಬ್ದಾರಿಯನ್ನು ಮಂಡ್ಯ ಉಸ್ತುವಾರಿ ಸಚಿವ ಪುಟ್ಟರಾಜು ಹೊತ್ತಿದ್ದರು. ಆದರೆ, ಅವರ ಕಾರ್ಯತಂತ್ರ ಇಲ್ಲಿ ಕೆಲಸ ಮಾಡಲಿಲ್ಲ. ಹಾಗಾಗಿ, ಸೋಲಿನ ನೈತಿಕ ಹೊಣೆ ಹೊತ್ತು ಪುಟ್ಟರಾಜು ಅವರೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಸಚಿವರಾಗಿದ್ದು ನಿಖಿಲ್ಗೆ ಲೀಡ್ ಕೊಡಿಸಲಾಗದ ಡಿಸಿ ತಮ್ಮಣ್ಣ ಮತ್ತು ಸಾರಾ ಮಹೇಶ್ ಕೂಡ ತಲೆದಂಡ ತೆತ್ತಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಕುಮಾರಸ್ವಾಮಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದಾರಂತೆ.
ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ, ಈ ಭಾಗದಲ್ಲಿ ನಿಖಿಲ್ ಬದಲಾಗಿ ಸುಮಲತಾಗೆ ಹೆಚ್ಚು ಲೀಡ್ ಸಿಕ್ಕಿದೆ. ಇದು ಕುಮಾರಸ್ವಾಮಿಯ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ನಿಗಮ ಮಂಡಳಿಯಿಂದ ಅವರಿಗೆ ಕೋಕ್ ನೀಡಲಾಗುತ್ತಿದೆ ಎನ್ನಲಾಗಿದೆ. ಅಲ್ಲದೆ, ಮೂವರು ಸಚಿವರ ಖಾತೆಯನ್ನು ಹೊಸಬರಿಗೆ ಹಂಚಿಕೆ ಮಾಡುವ ಮೂಲಕ ಸರ್ಕಾರ ಉಳಿಸಿಕೊಳ್ಳುವ ಆಲೋಚನೆಯಲ್ಲಿ ಅವರಿದ್ದಾರೆ. ಕುಮಾರಸ್ವಾಮಿ ಈ ಕೋಪದ ನಿರ್ಧಾರಕ್ಕೆ ಸಚಿವರು ಮತ್ತು ಶಾಸಕರು ಕಂಗಾಲಾಗಿದ್ದಾರಂತೆ. ಈ ಬಗ್ಗೆ ಕುಮಾರಸ್ವಾಮಿ ಅವರನ್ನು ಮನವೊಲಿಸುವ ಪ್ರಯತ್ನಕ್ಕೂ ಮುಂದಾಗಲಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ 1.30 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಸುಮಲತಾ ಪರ ಸ್ಯಾಂಡಲ್ವುಡ್ ನಟರಾದ ಯಶ್-ದರ್ಶನ್ ಪ್ರಚಾರ ನಡೆಸಿದ್ದರು. ಇದು ನಿಖಿಲ್ ಸೋಲಿಗೆ ಪ್ರಮುಖ ಕಾರಣವಾಗಿತ್ತು.
Comments are closed.