ಕರ್ನಾಟಕ

ಸಿದ್ದರಾಮಯ್ಯ ಭಸ್ಮಾಸುರ; ಯಡಿಯೂರಪ್ಪ ಹಸು, ನಾವೆಲ್ಲಾ ಕರುಗಳು: ಶ್ರೀರಾಮುಲು

Pinterest LinkedIn Tumblr


ಚಿತ್ರದುರ್ಗ: ಕೋಟೆ ಒಡೆದು ಹೋಗಿದೆ, ಕೋಟೆಯ ರಾಜರನ್ನ ಜನ ತಿರಸ್ಕಾರ ಮಾಡಿದ್ದಾರೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಮಾಜಿ ಪ್ರಧಾನಮಂತ್ರಿಗಳನ್ನ ಜನರು ಮೂಲೆಗೆ ತಳ್ಳಿದ್ದಾರೆ. ಮೈತ್ರಿ ಕೋಟೆಯಲ್ಲಿದ್ದ ಎಲ್ಲರೂ ಸೋತು ಸುಣ್ಣವಾಗಿದ್ದು, ನೈತಿಕತೆ ಇದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಮೈತ್ರಿ ನಾಯಕರ ವಿರುದ್ಧ ಶಾಸಕ ಬಿ ಶ್ರಿರಾಮುಲು ಆಗ್ರಹಿಸಿದರು.

ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ:

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಂದು ತರಹದ ಮನುಷ್ಯ. ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನುವಂಥ ಆ ರೀತಿಯ ಮನುಷ್ಯ. ಸರ್ಕಸ್ ಕಂಪನಿ ಹೀರೋ ರೀತಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರು. ಆತನ ಕಣ್ಣಿಗೆ ಯಾರು ಕಾಣುತ್ತಾರೋ ಅವರನ್ನ ಏಕ ವಚನದಲ್ಲಿ ಮಾತನಾಡುತ್ತಾರೆ. ಸಂಸ್ಕಾರವೇ ಗೊತ್ತಿಲ್ಲ, ಯಾರೇ ಆದರೂ ಉಡಾಫೆ ಮಾತುಗಳನ್ನಾಡುತ್ತಾರೆ. ನನ್ನದೇ ನಡೆಯಬೇಕು ಅನ್ನುವ ವ್ಯಕ್ತಿ ಅವರು. ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ. ಭಸ್ಮಾಸುರ ಯಾರ ತಲೆ ಮೇಲೆ ಕೈ ಇಟ್ಟರೂ ಅವರು ಭಸ್ಮ ಆಗುತ್ತಿದ್ದರು. ಹಾಗೇ ಸಿದ್ದರಾಮಯ್ಯ ಕೊನೆಗೆ ತನ್ನ ತಲೆಯ ಮೇಲೆಯೇ ಕೈ ಇಟ್ಟುಕೊಂಡು ಭಸ್ಮ ಆಗುತ್ತಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಶ್ರೀರಾಮುಲು ಹರಿಹಾಯ್ದರು.

ಹಾವಿನ ದ್ವೇಷ 12 ವರ್ಷ ಅನ್ನುವಂತೆ ಸಿದ್ದರಾಮಯ್ಯ ಅವರದ್ದೂ. ಕಾದು ಕಾದು ಕಬ್ಬಿಣ ಕೆಂಪಾದಂತೆ ಸಿದ್ದರಾಮಯ್ಯ ಬರೇ ಇಡಬೇಕಿತ್ತು. ಹಾಗಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನ, ಸಿಎಂ ಕುಮಾರಸ್ವಾಮಿ ಮಗ ನಿಖಿಲ್​​​​ರನ್ನು ಸೋಲಿಸಿದರು ಎಂದು ಮಾಜಿ ಸಚಿವರೂ ಆದ ಶ್ರೀರಾಮುಲು ಕುಟುಕಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುಸಿದು ಬಿದ್ದಿದ್ದಾರೆ. ಅವರು ದೆಹಲಿಗೆ ಹೋಗಿ ಸಂಸತ್ತಿನಲ್ಲಿ ಕಡಲೆಕಾಯಿ ಬೀಜ ಮಾರುತ್ತಾರೆ ಎಂದು ರಾಮುಲು ಲೇವಡಿ ಮಾಡಿದರು.

ನಮ್ಮ ಸಂಪರ್ಕಕ್ಕೆ ಯಾವ ಶಾಸಕರು ಇಲ್ಲ. ಈ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಅವರಿಗೆ ಎಲ್ಲಾ ಜವಾಬ್ದಾರಿ ನೀಡಿದ್ದು, ಅವರು ಎಲ್ಲಾ ನೋಡಿಕೊಳ್ಳುತ್ತಾರೆ. ಯಡಿಯೂರಪ್ಪ ಅವರು ಆಕಳಾದರೆ, ನಾವು ಕರುಗಳಂತೆ ಅವರ ಹಿಂದೆ ಹೋಗುತ್ತೇವೆ ಎಂದು ಶಾಸಕ ಬಿ. ಶ್ರೀರಾಮುಲು ಅವರು ಯಡಿಯೂರಪ್ಪ ಮೇಲಿನ ತಮ್ಮ ಪ್ರೀತಿಯನ್ನು ತೋರ್ಪಡಿಸಿದರು.

Comments are closed.