ಕರ್ನಾಟಕ

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗದಿದ್ರೆ ನಾವು ಪಕ್ಷ ಬಿಡ್ತೇವೆ ಎನ್ನುತ್ತಿರುವ ಕಾಂಗ್ರೆಸ್ ಶಾಸಕರು!

Pinterest LinkedIn Tumblr


ಬೆಂಗಳೂರು; ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಹೀನಾಯವಾಗಿ ಸೋಲನುಭವಿಸಿದೆ. ಪರಿಣಾಮ ರಾಜ್ಯ ಸರ್ಕಾರ ಉರುಳಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ, ನಿನ್ನೆ ಮಧ್ಯಾಹ್ನ ಔಪಚಾರಿಕ ಸಭೆ ಬಳಿಕ ಮಾತನಾಡಿದ ಉಭಯ ಪಕ್ಷದ ನಾಯಕರು ಸರ್ಕಾರ ಮುಂದುವರೆಯಲಿದೆ ಮುಂದಿನ ನಾಲ್ಕು ವರ್ಷಕ್ಕೂ ಕುಮಾರಸ್ವಾಮಿಯೇ ಸಿಎಂ ಎಂದು ಸ್ಪಷ್ಟಪಡಿಸಿದ್ದರು.

ಈ ಸಭೆಯ ನಂತರ ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ ಎಂದೇ ಊಹಿಸಲಾಗಿತ್ತು. ಆದರೆ, ಈ ಊಹೆಗೆ ಹಿರೆಕೆರೂರು ಶಾಸಕ ಬಿಸಿ ಪಾಟೀಲ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ನಡೆ ತಣ್ಣೀರೆರಚುವ ಎಲ್ಲಾ ಲಕ್ಷಣಗಳನ್ನೂ ಮುಂದಿಟ್ಟಿದೆ. ಅದರಲ್ಲೂ ಬಿಸಿ ಪಾಟೀಲ್ ಹೇಳಿಕೆ ಮೈತ್ರಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಿದ್ದು ಸಿಎಂ ಆಗದಿದ್ರೆ ಪಕ್ಷ ಬಿಡ್ತೀವಿ; ಆರಂಭದಿಂದಲೂ ಆಪರೇಷನ್ ಕಮಲದ ಜೊತೆ ತಳಕು ಹಾಕಿಕೊಂಡಿದ್ದ ಕಾಂಗ್ರೆಸ್ ಶಾಸಕರೆಂದರೆ ಬಿ.ಸಿ. ಪಾಟೀಲ್. ಲೋಕಸಭೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ನಂತರ ಆಪರೇಷನ್ ಕಮಲಕ್ಕೆ ಬಲಿಯಾಗಿ ಕಾಂಗ್ರೆಸ್ ತ್ಯಜಿಸುವವರ ಪಟ್ಟಿಯಲ್ಲಿದ್ದ ಪ್ರಮುಖ ಹೆಸರು ಸಹ ಅವರದ್ದೇ ಆಗಿತ್ತು. ಹೀಗಾಗಿ ಅವರು ಬಿಜೆಪಿಗೆ ಪಕ್ಷಾಂತರ ಮಾಡಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಶಾಸಕ ಬಿ.ಸಿ. ಪಾಟೀಲ್ ತಮ್ಮ ವರಸೆ ಬದಲಿಸಿದ್ದಾರೆ.

ಶನಿವಾರ ಮಾತನಾಡಿರುವ ಬಿ.ಸಿ. ಪಾಟೀಲ್
“ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಶಾಸಕರನ್ನು ಹಿಡಿದಿಡುವ ಶಕ್ತಿ ಇರುವ ಏಕೈಕ ನಾಯಕ ಎಂದರೆ ಸಿದ್ದರಾಮಯ್ಯ. ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆದರೆ ಮಾತ್ರ ಪಕ್ಷ ಬಿಡುವ ನಾಯಕರನ್ನು ಹಿಡಿದಿಡಲು ಸಾಧ್ಯ. ಇಲ್ಲದಿದ್ದರೆ ನಾವು ಪಕ್ಷ ತ್ಯಜಿಸಿ ಬಿಜೆಪಿಗೆ ಹೋಗಲಿದ್ದೇವೆ” ಎಂಬ ಬೆದರಿಕೆನ್ನು ನಾಯಕರ ಮುಂದಿಟ್ಟಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್ ಸಹ ಇದಕ್ಕೆ ಬೆಂಬಲ ಸೂಚಿಸಿರುವುದು ಮೈತ್ರಿ ನಾಯಕರಿಗೆ ನುಂಗಲಾರದ ತುತ್ತಾಗಿದೆ.

ಲೋಕಸಭಾ ಚುನಾವಣೆ ಪ್ರಚಾರ ಆರಂಭವಾದ ದಿನದಿಂದಲೂ ಕಾಂಗ್ರೆಸ್ ಪಕ್ಷದ ಒಂದು ಬಣದ ಶಾಸಕರು ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ಅಸಲಿಗೆ ಕಾಂಗ್ರೆಸ್ ಶಾಸಕರ ಈ ಹೇಳಿಕೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಕೊಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ, ಚುನಾವಣೆಯ ನಂತರವೂ ಶಾಸಕರು ಇದೇ ರೀತಿಯ ಹೇಳಿಕೆ ಕೊಡುತ್ತಿರುವುದು ಮೈತ್ರಿ ಅಧಿಕಾರದ ಕಾಲಾವಧಿಯ ಕುರಿತ ಪ್ರಶ್ನೆಯನ್ನು ಮುಂದಿಟ್ಟಿದೆ.

ಆಪರೇಷನ್ ಕಮಲ ಹೈಸ್ಪೀಡ್​; ಚುನಾವಣೆ ಮುಗಿಯುತ್ತಿದ್ದಂತೆ ಆಪರೇಷನ್ ಕಮಲ ಮತ್ತೆ ಆರಂಭವಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ರೆಬೆಲ್ ಶಾಸಕ ಎಂದು ಗುರುತಿಕೊಂಡಿರುವ ರಮೇಶ್ ಜಾರಕಿಹೊಳಿ ಯಾವ ಸಂದರ್ಭದಲ್ಲಿ ಬೇಕಾದರೂ ಕಾಂಗ್ರೆಸ್ ತ್ಯಜಿಸುವ ಸಾಧ್ಯತೆ ಇದೆ. ಅಲ್ಲದೆ ಶುಕ್ರವಾರವೇ ಯಡಿಯೂರಪ್ಪನವರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ನೂತನ ಸಂಸದರಾಗಿ ಆಯ್ಕೆಯಾಗಿರುವ ಉಮೇಶ್ ಜಾಧವ್​ಗೂ ಶುಭಾಶಯ ಕೋರಿದ್ದಾರೆ.

ಕಾಂಗ್ರೆಸ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಣದಲ್ಲಿ ಮೊದಲಿನಿಂದಲೂ ನಾಲ್ಕೈದು ಶಾಸಕರು ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಎಲ್ಲವೂ ಅವರ ಲೆಕ್ಕಾಚಾರದಂತೆ ನಡೆದರೆ ಈ ತಿಂಗಳ ಅಂತ್ಯದ ವೇಳೆಗೆ ಅವರ ಬಣದ ಶಾಸಕರ ಜೊತೆಗೆ ಬಿ.ಸಿ. ಪಾಟೀಲ್ ಬಣದ ಶಾಸಕರೂ ಬಿಜೆಪಿ ಸೇರುವುದು ಖಚಿತವಾಗಲಿದೆ. ಈ ಎಲ್ಲಾ ಲೆಕ್ಕಾಚಾರಗಳು ಸಾಕಾರವಾದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ.

Comments are closed.