ಕರ್ನಾಟಕ

ನಿಖಿಲ್ ನಿಜಕ್ಕೂ ಕುಡಿದು ರಂಪಾಟ ಮಾಡಿದ್ದರಾ?

Pinterest LinkedIn Tumblr


ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ವಿರುದ್ಧ 1.30 ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ. ಅವರು ಸೋತ ಬೇಸರದಲ್ಲಿ ಮೈಸೂರಿನ ಹೋಟೆಲ್​ ಒಂದರಲ್ಲಿ ರಂಪಾಟ ಮಾಡಿದ್ದರು ಎಂದು ಕನ್ನಡದ ದಿನಪತ್ರಿಕೆಯೊಂದು ವರದಿ ಮಾಡಿತ್ತು. ಇದರ ಸತ್ಯಾಸತ್ಯತೆ ತಿಳಿಯಲು ನ್ಯೂಸ್​18 ಕನ್ನಡ ಪ್ರಯತ್ನಿಸಿದಾಗ ಇದೊಂದು ನಕಲಿ ಸುದ್ದಿ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

“ಚುನಾವಣೆಯಲ್ಲಿ ಸೋತ ನಂತರ ನಿಖಿಲ್​ ಮೈಸೂರಿನ ರ್ಯಾಡಿಸನ್​ ಬ್ಲೂ ಹೋಟೆಲ್​ನಲ್ಲಿ ತಂಗಿದ್ದರು. ಈ ವೇಳೆ ಸೋಲಿನ ಬೇಸರದಿಂದ ಜೋರಾಗಿ ಗಲಾಟೆ-ರಂಪಾಟ ಮಾಡಿದ್ದರು. ಈ ವೇಳೆ ಹೋಟೆಲ್​ ಮ್ಯಾನೇಜರ್​ ಹಾಗೂ ಸಿಬ್ಬಂದಿ ಎಷ್ಟೇ ಸಮಾಧಾನ ಪಡಿಸಿದರೂ ಅವರ ವಿರುದ್ಧವೂ ವಾಗ್ದಾಳಿ ನಡೆಸಿ ಗಲಾಟೆ ಮಾಡಿದ್ದರು.​ ಅಜ್ಜ ದೇವೇಗೌಡರ ವಿರುದ್ಧವೂ ಅವರು ಕೂಗಾಡಿದ್ದರು,” ಎಂದು ಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು.

ಈ ಬಗ್ಗೆ ನಮ್ಮ ವರದಿಗಾರರು ಪೊಲೀಸರನ್ನು ಸಂಪರ್ಕಿಸಿದಾಗ, “ಆ ರೀತಿ ಘಟನೆಯೇ ನಡೆದಿಲ್ಲ ಎಂದು ಹೋಟೆಲ್​ನವರೇ ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿಯಲ್ಲಿ ಹುರುಳಿಲ್ಲ. ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗಿದೆ,” ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆಯ ವರದಿ ಸಖತ್​ ವೈರಲ್​ ಆಗಿದ್ದು, ಭಾರಿ ಚರ್ಚೆಗೆ ಎಡೆ ಮಾಟಿಕೊಟ್ಟಿದೆ. ಆದರೆ, ಈ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ.

ಈ ಬಗ್ಗೆ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ,’ಕನ್ನಡಪತ್ರಿಕೆಯೊಂದು ಇಂದು ನಿಖಿಲ್ ಕುಮಾರಸ್ವಾಮಿ ಕುರಿತು ಪ್ರಕಟಿಸಿದ ಸುದ್ದಿ ಅವಾಸ್ತವಿಕ ಹಾಗೂ ಕಪೋಲಕಲ್ಪಿತ. ನಿಖಿಲ್ ಚಾರಿತ್ರ್ಯ ವಧೆ ಮಾಡುವ ಈ ಸುದ್ದಿಯಿಂದ ಒಬ್ಬ ತಂದೆಯಾಗಿ ಅನುಭವಿಸಿದ ನೋವನ್ನು ಸಂಪಾದಕರ ಗಮನಕ್ಕೆ ತಂದಿದ್ದೇನೆ. ಮಾಧ್ಯಮಗಳು ಇಂಥ ಸುಳ್ಳುಸುದ್ದಿಗಳ ಮೂಲಕ ಭಾವನೆಗಳೊಂದಿಗೆ ಚೆಲ್ಲಾಟವಾಡದಿರಿ ಎನ್ನುವುದು ನನ್ನ ಕಳಕಳಿಯ ಮನವಿ,” ಎಂದಿದ್ದಾರೆ.

ಕನ್ನಡಪತ್ರಿಕೆಯೊಂದು ಇಂದು ನಿಖಿಲ್ ಕುಮಾರಸ್ವಾಮಿ ಕುರಿತು ಪ್ರಕಟಿಸಿದ ಸುದ್ದಿ ಅವಾಸ್ತವಿಕ ಹಾಗೂ ಕಪೋಲಕಲ್ಪಿತ.ನಿಖಿಲ್ ಚಾರಿತ್ರ್ಯ ವಧೆ ಮಾಡುವ ಈ ಸುದ್ದಿಯಿಂದ ಒಬ್ಬ ತಂದೆಯಾಗಿ ಅನುಭವಿಸಿದ ನೋವನ್ನು ಸಂಪಾದಕರ ಗಮನಕ್ಕೆ ತಂದಿದ್ದೇನೆ.ಮಾಧ್ಯಮಗಳು ಇಂಥ ಸುಳ್ಳುಸುದ್ದಿಗಳ ಮೂಲಕ ಭಾವನೆಗಳೊಂದಿಗೆ ಚೆಲ್ಲಾಟವಾಡದಿರಿ ಎನ್ನುವುದು ನನ್ನ ಕಳಕಳಿಯ ಮನವಿ

— H D Kumaraswamy (@hd_kumaraswamy) May 25, 2019

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್​ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​ ಕಣದಲ್ಲಿದ್ದರು. ಭಾರಿ ಕುತೂಹಲ ಹಾಗೂ ಪೈಪೋಟಿ ಮೂಡಿಸಿದ್ದ ಈ ಕ್ಷೇತ್ರ ಸುಮಲತಾ ಪಾಲಾಯಿತು. ಈ ಬಗ್ಗೆ ಗೌಡರ ಕುಟುಂಬ ತುಂಬಾನೇ ಅಸಮಾಧಾನಗೊಂಡಿದೆ ಎನ್ನಲಾಗಿದೆ.

ಇನ್ನು, ಮೈತ್ರಿ ಅಭ್ಯರ್ಥಿಯಾಗಿ ಹಾಸನದಿಂದ ಸ್ಪರ್ಧಿಸಿ ಬಿಜೆಪಿಯ ಎ.ಮಂಜು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದ ಪ್ರಜ್ವಲ್​ ರೇವಣ್ಣ “ಕಾರ್ಯಕರ್ತರ ಹಾಗೂ ಹಿರಿಯ ನಾಯಕರ ಆಶೀರ್ವಾದ ಪಡೆದು ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಹೇಳುವ ಮೂಲಕ ಅಚ್ಚರಿ ತಂದಿದ್ದರು.

Comments are closed.