ಬೆಂಗಳೂರು,(ಮೇ 24): ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆ ನೂತನ ಸಂಸದ ಜಾಧವ್ ಇಂದು ಬೆಂಗಳೂರಿಗೆ ಆಗಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಬಿಎಸ್ವೈ ಭೇಟಿ ಬಳಿಕ ಉಮೇಶ್ ಜಾಧವ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
“ಮಲ್ಲಿಕಾರ್ಜುನ ಖರ್ಗೆ ಮುಗಿದ ಕಥೆ, ಆ ಬಗ್ಗೆ ಮಾತನಾಡಬಾರದು. ಸೋಲಿಲ್ಲದ ಸರದಾರ 11 ಸಲ ಗೆದ್ದವರು ಮಲ್ಲಿಕಾರ್ಜು ಖರ್ಗೆ. ಯಡಿಯೂರಪ್ಪನವರು ನನ್ನ ಮೇಲೆ ಭರವಸೆ ಇಟ್ಟು ಕಲಬುರಗಿಯಿಂದ ಸ್ಪರ್ಧಿಸುವ ಅವಕಾಶ ಕೊಟ್ಟರು. ಅದರಂತೆಯೇ ನಾನು ಬಿಎಸ್ವೈ ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆದ್ದಿದ್ದೇನೆ. ಈ ಚುನಾವಣೆಯಲ್ಲಿ ಗೆದ್ದಿದ್ದು ನನಗೆ ಖುಷಿ ಇದೆ. ಕಲಬುರಗಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ” ಎಂದು ಹೇಳಿದರು.
ಇನ್ನು, ಮೈತ್ರಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಉಮೇಶ್ ಜಾಧವ್, “ನಾವು ಮೈತ್ರಿ ಸರ್ಕಾರವನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಿಂದ ಯಾವುದೇ ಕೆಲಸ ಆಗುತ್ತಿಲ್ಲ. ಬರುವ ಅನುದಾನ ನಿಂತು ಹೋಗಿದ್ದವು. ಹೀಗಾಗಿ ರಾಜೀನಾಮೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದೆ. ಸಿಎಂ ಕುಮಾರಸ್ವಾಮಿ ಇಂದು ಸಂಜೆ ರಾಜೀನಾಮೆ ನೀಡಲಿ. ಅವರು ರಾಜೀನಾಮೆ ಜನರಿಗೆ ಒಳ್ಳೆಯ ಸಂದೇಶಹೋಗುತ್ತದೆ. ಎಚ್ಡಿಕೆ ಇಂದು ಸಂಜೆಯೇ ರಾಜೀನಾಮೆ ನೀಡುವ ಭರವಸೆ ನನಗಿದೆ” ಎಂದರು.
ಫಲಿತಾಂಶದ ಬಳಿಕ ಕಾಂಗ್ರೆಸ್ ರೆಬೆಲ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾಧವ್, “ಎಲ್ಲರೂ ನಮ್ಮ ಸ್ನೇಹಿತರು, ಅವರೂ ಬರುವ ಅವಕಾಶ ಇದೆ. ಮೈತ್ರಿ ಸರ್ಕಾರ ಬೀಳಿಸುವುದು ಬೇಡ, ಅದೇ ಬೀಳುತ್ತದೆ” ಎಂದು ವ್ಯಂಗ್ಯ ಮಾಡಿದರು.
ಇದೇ ವೇಳೆ, ಉಮೇಶ್ ಜಾಧವ್ ತನಗೆ ಕೇಂದ್ರದಲ್ಲಿ ಸಚಿವ ಸ್ಥಾನದ ಆಸೆಯಿಲ್ಲ ಎಂಬುದನ್ನು ಹೇಳಿದರು. ” ಕೇಂದ್ರದಲ್ಲಿ ಸಚಿವ ಸ್ಥಾನದ ಅಪೇಕ್ಷೆ ನನಗಿಲ್ಲ. ಆದರೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆ ಕೆಲಸ ಮಾಡುತ್ತೇನೆ” ಎಂದು ಹೇಳಿದರು.
Comments are closed.