ಬೆಂಗಳೂರು: “ಸ್ವಪಕ್ಷ ನಾಯಕರ ವಿರುದ್ಧ ನಾನು ಮಾಡಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ನೋಟಿಸ್ ಜಾರಿಗೊಳಿಸಿದೆ. ಈ ನೋಟಿಸ್ಗೆ ನಾನು ಕ್ಯಾರೇ ಎನ್ನುವುದಿಲ್ಲ. ಕನಿಷ್ಠ ಪಕ್ಷ ಇದನ್ನು ಓದಲಿಕ್ಕೂ ಹೋಗುವುದಿಲ್ಲ. ನಾನು ಯಾರ ಬಗ್ಗೆ ಆರೋಪ ಮಾಡಿದ್ದೀನೋ, ಅದೇ ನಾಯಕರ ಆದೇಶದ ಮೇರೆಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ನಾವು ಹೆದರುವುದಿಲ್ಲ” ಎನ್ನುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಾಸಕ ರೋಷನ್ ಬೇಗ್ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ದುರಹಂಕಾರಿ ಮತ್ತು ದಿನೇಶ್ ಗುಂಡೂರಾವ್ ಫ್ಲಾಪ್ ಶೋ ಅಧ್ಯಕ್ಷ ಎಂದು ಮೊದಲಿಗೆ ಶಾಸಕ ರೋಷನ್ ಬೇಗ್ ಮಾಧ್ಯಮದಲ್ಲಿ ಹರಿಹಾಯ್ದಿದ್ದರು. ಬಳಿಕ ಕಾಂಗ್ರೆಸ್ ನಾಯಕರ ವಿರುದ್ಧವೇ ಮಾಧ್ಯಮಗಳಲ್ಲಿ ಬಾಯಿಗೆ ಬಂದಂತೆ ಆರೋಪ ಮಾಡಿದ್ದಕ್ಕೆ ಕಾರಣ ಕೇಳಿ ರೋಷನ್ ಬೇಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ ನೋಟಿಸ್ ಜಾರಿ ಮಾಡಿದ್ದರು.
ಕಾಂಗ್ರೆಸ್ ನಾಯಕರಿಗೆ ಬಫೂನ್, ಆರೋಗೆಂಟ್ ಹಾಗೂ ಫ್ಲಾಪ್ ಶೋ ಎಂಬಿತ್ಯಾದಿ ಪದಗಳನ್ನು ಬಳಸಿ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದೀರಿ. ಬಹಿರಂಗವಾಗಿಯೇ ಇಂಥಹ ಹೇಳಿಕೆಗಳನ್ನು ನೀಡಿ ಪಕ್ಷದ ತತ್ವ-ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ. ಈ ಪಕ್ಷ ವಿರೋಧಿ ಚಟುವಟಿಕೆ ಎಂದು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಇನ್ನು ಈ ನೋಟಿಸ್ಗೆ ಸಂಬಂಧಿಸಿದಂತೆ ರೋಷನ್ ಬೇಗ್ ಟ್ವೀಟ್ ಮಾಡಿದ್ದಾರೆ. ಈ ನೋಟಿಸ್ಗೆ ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ನಾನು ಯಾರ ಬಗ್ಗೆ ಆರೋಪ ಮಾಡಿದ್ದೀನೋ, ಇವರ ಆದೇಶದ ಮೇರೆಗೆ ನೋಟಿಸ್ ನೀಡಲಾಗಿದೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ದವಾಗಿದ್ದೇನೆ ಎಂದು ಬೇಗ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಜತೆಗೆ ತಂದೆ ರೋಷನ್ ಬೇಗರನ್ನ ಸಮರ್ಥಿಸಿಕೊಂಡು ಮಗ ರುಮಾನ್ ಬೇಗ್ ಕೂಡ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಬಿಜೆಪಿಗೆ ಮತಹಾಕುವ ಮುಸಲ್ಮಾನರನ್ನ ಅಪರಾಧಿಗಳು ಎಂಬಂತೆ ನೋಡಲಾಗ್ತಿದೆ. ನಿಜಾರ್ಥದಲ್ಲಿ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಬೇಕಾಬಿಟ್ಟಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
Comments are closed.