ಬೆಂಗಳೂರು: ಬಿಜೆಪಿ ರೂಪಿಸಿರುವ ಆಪರೇಷನ್ ಕಮಲ ಯೋಜನೆ ಪ್ಲಾಫ್ ಆಗುವ ಲಕ್ಷಣ ಗೋಚರವಾಗಿದೆ. ಕಾಂಗ್ರೆಸ್ನ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಮುಂದಾಗಿದ್ದರೂ, ಉಳಿದ ಅತೃಪ್ತರು ಇದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆ ಆದ ಬೆನ್ನಲ್ಲೇ ಆಪರೇಷನ್ ಕಮಲದ ಭೀತಿ ಮೈತ್ರಿಯನ್ನು ಕಾಡಿತ್ತು. ಒಂದೆರಡು ಅತೃಪ್ತರು ಬಹಿರಂಗವಾಗಿಯೇ ಬಂಡಾಯ ವ್ಯಕ್ತಪಡಿಸಿದ್ದರು. ಆದರೆ, ಕೆಲ ರೆಬೆಲ್ ಶಾಸಕರು ಈವರೆಗೆ ಬಹಿರಂಗವಾಗಿ ಪಕ್ಷ ಬಿಡುವ ಬಗ್ಗೆ ಹೇಳಿಕೆ ನೀಡಿಲ್ಲ. ಈಗ ಅವರು ಪಕ್ಷ ಬಿಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ.
ಮುಂದಿನ 20 ವರ್ಷಗಳ ರಾಜಕೀಯ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ರಾಜೀನಾಮೆ ನೀಡಲು ರೆಬೆಲ್ಗಳು ಹಿಂಜರಿಯುತ್ತಿದ್ದಾರಂತೆ. ಇತ್ತೀಚೆಗೆ ನಾಗೇಂದ್ರ, ಭೀಮಾನಾಯ್ಕ್, ಮಹೇಶ ಕಮಠಳ್ಳಿ, ಪ್ರತಾಪಗೌಡ ಪಾಟೀಲ್, ಬಿ ಸಿ ಪಾಟೀಲ, ಶಿವರಾಮ ಹೆಬ್ಬಾರ್ ಸೇರಿ ಇತರೆ ನಾಯಕರು ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಹೀಗೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಅತೃಪ್ತರ ಈ ನಡೆ ರಮೇಶ್ ಜಾರಕಿಹೊಳಿಯನ್ನು ಏಕಾಂಗಿ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಪರೇಷನ್ ಕಮಲದ ರುವಾರಿ ಎನ್ನಲಾಗುತ್ತಿದೆ. ಆದರೆ, ಪಕ್ಷದಲ್ಲಿ ಇವರ ವರ್ಚಸ್ಸು ಕಡಿಮೆ ಆಗುತ್ತಿದೆ ಎನ್ನುವ ಮಾತಿದೆ. ಒಂದೊಮ್ಮೆ ಅವರನ್ನು ನಂಬಿ ಬಿಜೆಪಿ ಸೇರಿ ಅತಂತ್ರವಾಗಿಬಿಟ್ಟರೆ ಎನ್ನುವ ಭಯ ರೆಬೆಲ್ಗಳದ್ದು. ಅಲ್ಲದೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ ಜಾಧವ ಭವಿಷ್ಯ ಏನಾಗಲಿದೆ, ಕೇಂದ್ರದಲ್ಲಿ ಇನ್ನೆಷ್ಟು ವರ್ಷ ಬಿಜೆಪಿ ಅಧಿಕಾರದಲ್ಲಿರಬಹುದು, ಕಾಂಗ್ರೆಸ್ನಲ್ಲಿದ್ದರೆ ರಾಜಕೀಯ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಹುದು ಎನ್ನುವ ಬಗ್ಗೆ ಚರ್ಚೆ ನಡೆಸಲಾಗಿದೆ.
Comments are closed.