ಕರ್ನಾಟಕ

ಆಪರೇಷನ್ ಕಮಲ ವಿಫಲ?

Pinterest LinkedIn Tumblr


ಬೆಂಗಳೂರು: ಬಿಜೆಪಿ ರೂಪಿಸಿರುವ ಆಪರೇಷನ್​ ಕಮಲ ಯೋಜನೆ ಪ್ಲಾಫ್​ ಆಗುವ ಲಕ್ಷಣ ಗೋಚರವಾಗಿದೆ. ಕಾಂಗ್ರೆಸ್​​ನ ಅತೃಪ್ತ ಶಾಸಕ ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ಮುಂದಾಗಿದ್ದರೂ, ಉಳಿದ ಅತೃಪ್ತರು ಇದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್​​-ಜೆಡಿಎಸ್​ ಸರ್ಕಾರ ರಚನೆ ಆದ ಬೆನ್ನಲ್ಲೇ ಆಪರೇಷನ್​ ಕಮಲದ ಭೀತಿ ಮೈತ್ರಿಯನ್ನು ಕಾಡಿತ್ತು. ಒಂದೆರಡು ಅತೃಪ್ತರು ಬಹಿರಂಗವಾಗಿಯೇ ಬಂಡಾಯ ವ್ಯಕ್ತಪಡಿಸಿದ್ದರು. ಆದರೆ, ಕೆಲ ರೆಬೆಲ್​ ಶಾಸಕರು ಈವರೆಗೆ ಬಹಿರಂಗವಾಗಿ ಪಕ್ಷ ಬಿಡುವ ಬಗ್ಗೆ ಹೇಳಿಕೆ ನೀಡಿಲ್ಲ. ಈಗ ಅವರು ಪಕ್ಷ ಬಿಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ.

ಮುಂದಿನ 20 ವರ್ಷಗಳ ರಾಜಕೀಯ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ರಾಜೀನಾಮೆ ನೀಡಲು ರೆಬೆಲ್​ಗಳು ಹಿಂಜರಿಯುತ್ತಿದ್ದಾರಂತೆ. ಇತ್ತೀಚೆಗೆ ನಾಗೇಂದ್ರ, ಭೀಮಾನಾಯ್ಕ್, ಮಹೇಶ ಕಮಠಳ್ಳಿ, ಪ್ರತಾಪಗೌಡ ಪಾಟೀಲ್, ಬಿ ಸಿ ಪಾಟೀಲ, ಶಿವರಾಮ ಹೆಬ್ಬಾರ್ ಸೇರಿ ಇತರೆ ನಾಯಕರು ರಮೇಶ್​ ಜಾರಕಿಹೊಳಿ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಹೀಗೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್​ ಅತೃಪ್ತರ ಈ ನಡೆ ರಮೇಶ್​ ಜಾರಕಿಹೊಳಿಯನ್ನು ಏಕಾಂಗಿ ಮಾಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಪರೇಷನ್​ ಕಮಲದ ರುವಾರಿ ಎನ್ನಲಾಗುತ್ತಿದೆ. ಆದರೆ, ಪಕ್ಷದಲ್ಲಿ ಇವರ ವರ್ಚಸ್ಸು ಕಡಿಮೆ ಆಗುತ್ತಿದೆ ಎನ್ನುವ ಮಾತಿದೆ. ಒಂದೊಮ್ಮೆ ಅವರನ್ನು ನಂಬಿ ಬಿಜೆಪಿ ಸೇರಿ ಅತಂತ್ರವಾಗಿಬಿಟ್ಟರೆ ಎನ್ನುವ ಭಯ ರೆಬೆಲ್​ಗಳದ್ದು. ಅಲ್ಲದೆ, ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಉಮೇಶ ಜಾಧವ ಭವಿಷ್ಯ ಏನಾಗಲಿದೆ, ಕೇಂದ್ರದಲ್ಲಿ ಇನ್ನೆಷ್ಟು ವರ್ಷ ಬಿಜೆಪಿ ಅಧಿಕಾರದಲ್ಲಿರಬಹುದು, ಕಾಂಗ್ರೆಸ್​ನಲ್ಲಿದ್ದರೆ ರಾಜಕೀಯ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಹುದು ಎನ್ನುವ ಬಗ್ಗೆ ಚರ್ಚೆ ನಡೆಸಲಾಗಿದೆ.

Comments are closed.