ಬೆಂಗಳೂರು: “ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕೇಳಿದ್ದ ಇಂಜಿನಿಯರ್ ವರ್ಗಾವಣೆ ಮಾಡಿಕೊಟ್ಟಿದ್ದೀನಿ. ಇವರಿಗೆ ಬೆಳಿಗ್ಗೆ ಎದ್ದ ಕೂಡಲೇ ನನ್ನ ಬಗ್ಗೆ ಮಾತಾಡಲಿಲ್ಲ ಅಂದ್ರೆ ದಿನ ಕಳೆಯೋದಿಲ್ಲ. ಹುಬ್ಬಳಿಗೆ ಬಿಎಸ್ವೈ ಅಳಿಯನೇ ಉಸ್ತುವಾರಿ. ಕೆ.ಎಸ್ ಈಶ್ವರಪ್ಪ ಹೇಳಿದ ಇಂಜಿನಿಯರ್ ಅವರನ್ನ ಕೂಡ ಶಿವಮೊಗ್ಗಕ್ಕೆ ಹಾಕಿದ್ದೀನಿ. ಬೇಕಿದ್ದರೇ ಇವರನ್ನೆಲ್ಲಾ 24 ಗಂಟೆಯೊಳಗೆ ನಾನು ವರ್ಗಾವಣೆ ಮಾಡಬಹುದಿತ್ತಲ್ಲವೇ. ಅವರನ್ನೇ ಕೇಳಿ ಯಾರಿಗೆ ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಟ್ಟಿದ್ದಾರೆ” ಎನ್ನುವ ಮೂಲಕ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣನವರು ಬಿಎಸ್ವೈಗೆ ತಿರುಗೇಟು ನೀಡಿದ್ದಾರೆ.
ಇನ್ನು ನನ್ನ ಬಗ್ಗೆ ಮಾತಾಡದೇ ಹೋದರೇ ಬಿಜೆಪಿ ನಾಯಕರಿಗೆ ದಿನ ಕಳೆಯೋದಿಲ್ಲ. ಬಿ.ಎಸ್ ಯಡಿಯೂರಪ್ಪ ತುಂಬಾ ದೊಡ್ಡವರು. ನಾನು ಇವರ ಬಗ್ಗೆ ಮಾತಾಡೋದಿಲ್ಲ. ನನ್ನ ಕ್ಷೇತ್ರದ ಬಗ್ಗೆ ಮಾಧ್ಯಮದವರು ಹೆಚ್ಚಿನ ಪ್ರಚಾರ ಮಾಡುತ್ತಿದ್ದೀರಿ. ಹಣ ನೀಡದೆಯೇ ಪ್ರಚಾರ ನೀಡುತ್ತಿರುವುದಕ್ಕೆ ನಿಮಗೆ ಧನ್ಯವಾದ. ಪ್ರಜ್ವಲ್ ರೇವಣ್ಣ ದೆಹಲಿಗೆ ಹೋಗುತ್ತಾರೆ. ಈ ಬಗ್ಗೆ ಚಿಂತೆ ಬಿಡಿ ಎಂದು ಮಾಧ್ಯಮದವರಿಗೆ ಸಚಿವ ಎಚ್.ಡಿ ರೇವಣ್ಣ ಕುಟುಕಿದರು.
ಪಾಪ ಯಡಿಯೂರಪ್ಪನಿಗೆ ವಯಸ್ಸಾಗಿದೆ. ಅರಳು ಮರಳು ಶುರುವಾಗಿದೆ. ಇವರ ಬಗ್ಗೆ ನಾನೇನು ಮಾತಾಡಲಿ. ಮೈತ್ರಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇ. ಜೆಡಿಎಸ್ 7ಕ್ಕೆ ಏಳು ಸ್ಥಾನ ಗೆದ್ದರೂ ಯಾವುದೇ ಅಚ್ಚರಿ ಪಡಬೇಕಿಲ್ಲ. ಬಿಜೆಪಿಗೆ ಲೆಕ್ಕ ಮಾಡೋಕೆ ಬರಲ್ಲ. ಸುಮ್ಮನೆ 20 ಕ್ಷೇತ್ರದಲ್ಲಿ ಗೆಲ್ತೀವಿ ಎನ್ನುತ್ತಾರೆ. ಇವರಿಗೆ ತಲೆ ಕೆಟ್ಟೋಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು, ನಮ್ಮ ಕಣ್ಮುಂದೆ ಇಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತಾಡಿದ್ದು ಸರಿಯಲ್ಲ. ಹಾಗೇ ಮಾತಾಡಿರೋದು ಅವರಿಗೆ ಬಿಟ್ಟ ವಿಚಾರ. ರಾಜ್ಯಕ್ಕೆ ರಾಜೀವ್ ಗಾಂಧಿಯವರ ಕೊಡುಗೆ ತುಂಬಾಯಿದೆ. ಇದು ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತಿದೆ ಎಂದು ತಿಳಿಸಿದರು.
Comments are closed.