ಬೆಂಗಳೂರು: 2018-19ನೇ ಸಾಲಿನ ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಶೇ. 73.70ರಷ್ಟು ಫಲಿತಾಂಶ ಲಭ್ಯವಾಗಿದೆ. ಈ ಬಾರಿ ಸರ್ಕಾರಿ ಶಾಲೆಗಳು ಅತ್ಯುತ್ತಮ ಫಲಿತಾಂಶ ನೀಡಿದ್ದು, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೆ ತನ್ನ ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದಂತಾಗಿದೆ.
ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 46 ಶಾಲೆಗಳಿಗೆ ಶೂನ್ಯ ಫಲಿತಾಂಶ ಲಭಿಸಿದೆ. ಈ 46 ಶಾಲೆಗಳೂ ಖಾಸಗಿ ಶಾಲೆಗಳಾಗಿವೆ. ಯಾವುದೇ ಸರ್ಕಾರಿ ಶಾಲೆಗೆ ಶೂನ್ಯ ಫಲಿತಾಂಶ ಲಭಿಸಿಲ್ಲ. 46ರಲ್ಲಿ 9 ಅನುದಾನಿತ ಮತ್ತು 36 ಅನುದಾನರಹಿತ ಶಾಲೆಗಳಾಗಿವೆ. ಪ್ರಸಕ್ತ ಫಲಿತಾಂಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದು, ಸರ್ಕಾರಿ ಶಾಲೆಗಳ ಶೇ. 77.74ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು, ತೇರ್ಗಡೆಯಾದವರ ಪೈಕಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಿದೆ. ಶೇ. 79.51ರಷ್ಟು ಹೆಣ್ಣುಮಕ್ಕಳು ತೇರ್ಗಡೆಯಾಗಿದ್ದಾರೆ. ತೇರ್ಗಡೆಯಾದ ಹುಡುಗರ ಪ್ರಮಾಣ ಶೇ. 68.46.
ಇದೇ ಮೊದಲ ಬಾರಿಗೆ ಹಾಸನ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದ್ದು, ರಾಮನಗರ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಕಾಯ್ದುಕೊಂಡಿದೆ. ಒಟ್ಟು 1626 ಶಾಲೆಗಳು 100ಕ್ಕೆ 100 ಫಲಿತಾಂಶ ಪಡೆದಿವೆ. ಬೆಂಗಳೂರಿನ ಅತ್ತಿಬೆಲೆಯ ಡಿ. ಸೃಜನಾ ಮತ್ತು ಕುಮಟಾದ ನಾಗಾಂಜಲಿ 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. 11 ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ.
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ಸೈಟ್ಗಳಾದ www.kaceb.kar.nic.in ಮತ್ತು www.karresults.nic.inನಲ್ಲಿಈಗಾಗಲೇ ಫಲಿತಾಂಶ ಪ್ರಕಟವಾಗಿದೆ. ಅಲ್ಲದೆ, ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶ ಕಳುಹಿಸುವ ವ್ಯವಸ್ಥೆಯನ್ನೂ ಮಂಡಳಿ ಮಾಡಿಕೊಂಡಿದೆ.
Comments are closed.