ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಈಗ ಫನಿ ಚಂಡಮಾರುತ ಪ್ರಭಾವ ಹೆಚ್ಚಾಗಿದ್ದು, ಪುದುಚೇರಿ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ತೀರ ಪ್ರದೇಶಗಳಲ್ಲಿ ಭಾರೀ ಮಳೆಯ ಆತಂಕ ಸೃಷ್ಟಿಸಿದೆ. ಹಿಂದೂ ಮಹಾಸಾಗರ-ಬಂಗಾಳಕೊಲ್ಲಿಯ ಸಮನಾಂತರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಫನಿ ಚಂಡಮಾರುತ ಈಗ ಶ್ರೀಲಂಕಾದ ಟ್ರಿಂಕೋಮಲಿಯಿಂದ 550 ಕಿ.ಮೀ. ದೂರಕ್ಕೂ ಚೆನ್ನೈನ ಆಗ್ನೇಯ ದಿಕ್ಕಿನಿಂದ 820 ಕಿ.ಮೀ. ದೂರದಲ್ಲಿ ಬರುತ್ತಿದೆ.
ಫನಿ ಚಂಡಮಾರುತ ಆರಂಭವಾದಾಗ ಅಂದರೆ ಏಪ್ರಿಲ್ 25ರ ಆಸುಪಾಸಿನಲ್ಲಿ ಶ್ರೀಲಂಕಾದ ಅರ್ಧ ಉತ್ತರಭಾಗವನ್ನು ಆಕ್ರಮಿಸಿ, ಅಲ್ಲಿಂದ ಪುದುಚೇರಿ, ತಮಿಳುನಾಡಿನ ದಕ್ಷಿಣಭಾಗ ಸೇರಿ ಚೆನ್ನೈ ಆಂಧ್ರ ಪ್ರದೇಶದ ಮಚಿಲಿಪಟ್ಟಣದ ಮಧ್ಯೆ ಭರ್ಜರಿಯಾಗಿ ಅಪ್ಪಳಿಸುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗ, ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತೆ ಎಂದು ಅಂದಾಜಿಸಲಾಗಿತ್ತು. ಆದರೆ ಏಪ್ರಿಲ್ 27ರ ಮಧ್ಯಭಾಗದಿಂದ ಚಂಡಮಾರುತ ದಿಕ್ಕು ಬದಲಿಸುತ್ತಿದ್ದು, ತಿರುವು ಪಡೆದು ದಕ್ಷಿಣದ ಚೆನ್ನೈನಿಂದ ಉತ್ತರದ ಕಡೆ ಅಂದರೆ ಆಂಧ್ರ ಪ್ರದೇಶದ ಮಚಲಿಪಟ್ಟಣ, ಉತ್ತರ ಕರಾವಳಿ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕಡೆ ಮುನ್ನುಗ್ತಿದೆ.
ಸದ್ಯದ ಮಾಹಿತಿ ಅನ್ವಯ ಆಂಧ್ರ-ಒಡಿಶಾದ ಮಧ್ಯ ಕರಾವಳಿ ಭಾಗದಲ್ಲಿ ಚಂಡಮಾರುತದ ಪ್ರಭಾವ ಬೀರುವ ಅವಕಾಶ ಹೆಚ್ಚಾಗಿದ್ದು, ಚಂಡಮಾರುತ ವೇಗ ಮತ್ತಷ್ಟು ಹೆಚ್ಚಾದರೆ ಖಂಡಿತಾ ಒಡಿಶಾದಲ್ಲಿ ಹೆಚ್ಚಿನ ಅವಘದ ಸಂಭವಿಸಲಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿದಂತೆ ಎಚ್ಚರಿಕೆ ನೀಡಲಾಗಿದೆ. ಎನ್ಡಿಆರ್ಎಫ್, ಕೋಸ್ಟ್ಗಾರ್ಡ್ಗೆ ಹೈ ಅಲರ್ಟ್ನಲ್ಲಿರುವಂತೆ ಸೂಚಿಸಲಾಗಿದೆ. ಒಡಿಶಾದ 28 ಜಿಲ್ಲೆಗಳ ಡಿಸಿಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಆಂಧ್ರ-ಒಡಿಶಾದ ಕರಾವಳಿ ಜನರನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು, ಕೇಂದ್ರ ಗೃಹ ಸಚಿವಾಲಯ ಹೆಚ್ಚಿನ ನಿಗಾ ವಹಿಸಿದೆ.
ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೆ ಕಡಿಮೆ ಪ್ರಮಾಣದಲ್ಲಿ ಆಗಲಿದ್ದು, ಇದಕ್ಕೆ ಪ್ರಮುಖ ಕಾರಣ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಫನಿ ಚಂಡಮಾರುತ ತನ್ನ ದಿಕ್ಕು ಬದಲಿಸಿದೆ. ಚೆನ್ನೈ ಮೇಲೆ ಮೋಡಗಳು ಆವರಿಸಿದರೆ ಬೆಂಗಳೂರು, ಮೈಸೂರು ಭಾಗದಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಕೇರಳದಲ್ಲೂ ಮಳೆ ಆಗುವ ಸಾಧ್ಯತೆ ಕಡಿಮೆ ಇದೆ. ಆದರೆ ಆಂಧ್ರದ ಉತ್ತರ ಭಾಗಕ್ಕೆ ಚಂಡಮಾರುತದ ಪ್ರಭಾವ ಶಿಫ್ಟ್ ಆಗುತ್ತಿರುವುವರಿಂದ ಉತ್ತರ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
Comments are closed.