ಬಳ್ಳಾರಿ: ಈಗಲ್ಟನ್ ರೆಸಾರ್ಟ್ನಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಜಲ್ಲೆ ನಡೆಸಿದ್ದ ಆರೋಪದಲ್ಲಿ ಜೈಲು ಸೇರಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಎರಡು ದಿನಗಳ ಹಿಂದೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಅನಾರೋಗ್ಯದಿಂದ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ.
ನಿನ್ನೆಯಷ್ಟೇ ಬಿಡುಗಡೆಗೊಂಡಿರುವ ಕಂಪ್ಲಿ ಗಣೇಶ್ ಇಂದು 3 ತಿಂಗಳ ನಂತರ ಸ್ವಕ್ಷೇತ್ರ ಹೊಸಪೇಟೆಗೆ ಧಾವಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಈಗಲೂ ಆನಂದ್ ಸಿಂಗ್ ನನಗೆ ಅಣ್ಣನೇ. 15 ವರ್ಷದಿಂದ ನನ್ನ ಕಷ್ಟಸುಖದ ಬಗ್ಗೆ ಅವರಿಗೆಲ್ಲ ಗೊತ್ತಿದೆ. ನಾನು ಏನು ಎಂಬುದು ಆನಂದ್ ಸಿಂಗ್ಗೆ ಚೆನ್ನಾಗಿ ಗೊತ್ತಿದೆ. ಅವರು ಈಗಲೂ ನನ್ನ ಬೆಂಬಲಕ್ಕಿದ್ದಾರೆ. ಅವರೇ ಬೇಡವೆಂದರೂ ನಾನು ಆನಂದ್ ಸಿಂಗ್ಗೆ ತಮ್ಮನಾಗಿಯೇ ಇರುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
3 ತಿಂಗಳು ನಾನು ಕ್ಷೇತ್ರದಲ್ಲಿರಲಿಲ್ಲ. ಈ ಅವಧಿಯಲ್ಲಿ ಏನೆಲ್ಲಾ ಘಟನೆಗಳು ನಡೆದಿದೆ ಎಂಬುದು ನನಗೆ ಗೊತ್ತಿದೆ. ಲೋಕಸಭಾ ಚುನಾವಣೆಯಲ್ಲಿ ನಾನು ಇಲ್ಲದ್ದಕ್ಕೆ ಬಹಳ ನೋವಿದೆ. ಸಣ್ಣದಾಗಿದ್ದ ಈ ಘಟನೆ ದೊಡ್ಡದಾಗಿದ್ದೇ ಅಚ್ಚರಿ. ನನ್ನ ತಪ್ಪನ್ನು ನಾನು ತಿದ್ದಿಕೊಳ್ಳುತ್ತೇನೆ. ರೆಸಾರ್ಟ್ನಲ್ಲಿ ನಡೆದ ಘಟನೆಯ ಬಗ್ಗೆ ಹೆಚ್ಚಾಗಿ ಏನೂ ಹೇಳುವುದಿಲ್ಲ ಎಂದಿದ್ದಾರೆ.
ಇದೇವೇಳೆ ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡಿರುವ ಕಂಪ್ಲಿ ಗಣೇಶ್, ರಮೇಶ್ ಜಾರಕಿಹೊಳಿ ನಮ್ಮ ಸಮಾಜದ ಮುಖಂಡರು. ಅವರು ರಾಜೀನಾಮೆ ಕೊಡುವುದಿಲ್ಲ. ಆ ರೀತಿ ಆಗಲು ಸಾಧ್ಯವೇ ಇಲ್ಲ. 5 ವರ್ಷ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಸರ್ಕಾರ ಸುಭದ್ರವಾಗಿರುತ್ತದೆ. ಕಾಂಗ್ರೆಸ್ ಪಕ್ಷ ನನ್ನ ಅಮಾನತು ಆದೇಶವನ್ನು ವಾಪಾಸ್ ಪಡೆಯುತ್ತದೆ ಎಂಬ ವಿಶ್ವಾಸವಿದೆ. ಎಂತೆಂಥವರೋ ಏನೋ ಮಾಡಿದ್ದಾರೆ. ನಾನು ಮಾಡಿದ್ದೊಂದು ಸಣ್ಣ ತಪ್ಪು. ಆದರೆ, ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Comments are closed.