ಬೆಂಗಳೂರು: ಶಿಕ್ಷಣ, ಆಸ್ಪತ್ರೆ ಮತ್ತಿತರ ಸೇವೆಯಾಧಾರಿತ ಉದ್ಯಮಗಳು ಜನರ ಹಣವನ್ನು ಪೀಕುವ ಮಶಿನ್ಗಳಾಗಿ ಬದಲಾಗಿ ದಶಕಗಳೇ ಕಳೆದಿವೆ. ಅದರ ಮುಂದುವರಿದ ಭಾಗದಂತೆ, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದು ಸಾಮಾನ್ಯ ಹೊಟ್ಟೆ ನೋವಿಗೆ ಪರಿಹಾರ ಕೋರಿ ಬಂದ ಪೇಶೆಂಟ್ ಒಬ್ಬರನ್ನು ನಿರ್ಲಕ್ಷ ತೋರಿ ಕೋಮಾಗೆ ಕಳಿಸಿದ್ದಲ್ಲದೇ ನಾಲ್ಕು ಕೋಟಿ ರೂಪಾಯಿ ಬಿಲ್ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಖುದ್ದು ರೋಗಿಯ ಗಂಡ ಈ ಆರೋಪವನ್ನು ಮಾಡಿದ್ದಾರೆ. ಕೋಮಾ ಸ್ಥಿತಿಯಲ್ಲಿರುವ ರೋಗಿಯ ಹೆಸರು ಪೂನಂ ರಾಣಾ.
ಸಾಫ್ಟ್ವೇರ್ ಇಂಜಿನಿಯರ್ ಪೂನಂ ರಾಣಾ:
ಮೂಲತಃ ದೆಹಲಿ ಮೂಲದ ಪೂನಂ ರಾಣಾ ಹಾಗೂ ಕೇರಳ ಮೂಲದ ರೇಜಿಶ್ ನಾಯಕ್ ಬೆಂಗಳೂರಿಗೆ ಬಂದು ಖಾಸಗಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪರಿಚಯದ ಬಳಿಕ ಇಬ್ಬರು ಪರಸ್ಪರ ಪ್ರೀತಿಸಿ ನಂತರ ಮದುವೆ ಕೂಡ ಆಗಿದ್ದರು. ಮೂರು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ ಯುವ ಜೋಡಿ, ಎಲ್ಲರಂತೆ ಭವಿಷ್ಯದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು.
ಆದರೆ ಅದೊಂದು ದಿನ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೊಟ್ಟೆ ನೋವು ಪದೇ ಪದೇ ಮರುಕಳಿಸಿದಾಗ, ಭಯದಿಂದ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿದರು. ಅದಾಗಿ 3.5 ವರ್ಷಗಳೇ ಕಳೆದು ಹೋಗಿವೆ. 2015ರ ಅಕ್ಟೋಬರ್ 3ರಂದು ಪೂನಂರನ್ನು ಗಂಡ ನಾಯಕ್ ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಮಣಿಪಾಲ್ ಆಸ್ಪತ್ರೆಗೆ ಪೂನಂ ಬರುತ್ತಿದ್ದಂತೆ ಚೆಕ್ ಮಾಡಿದ್ದ ವೈದ್ಯರು ಹೊಟ್ಟೆ ನೋವಿಗೆ ಅದು ಕಾರಣ, ಇದು ಕಾರಣ ಅಂತ ಮೊದಮೊದಲು ಕಾರಣಗಳನ್ನು ನೀಡಿದರು. ಆದರೆ ಕೊನೆಗೆ ಮಲ ವಿಸರ್ಜನೆಯಲ್ಲಿ ಸಮಸ್ಯೆಯಿದೆ ಅಂದಿದ್ದರು. ಆಪರೇಷನ್ ಮಾಡಬೇಕು 3.5 ಲಕ್ಷ ಪ್ಯಾಕೇಜ್ ಆಗುತ್ತೆ ಅಂತ ಪ್ಯಾಕೇಜ್ ಕೂಡ ರೇಜಿಶ್ಗೆ ನೀಡಿದ್ದರು. ಹಣಕ್ಕಿಂತ ಹೆಂಡತಿ ಮುಖ್ಯ ಎಂದು ನಿರ್ಧರಿಸಿದ ರೇಜಿಶ್ಆಪರೇಷನ್ ಮಾಡಿ ಅಂತ ವೈದ್ಯರಿಗೆ ಹೇಳಿದ್ದರು.
Comments are closed.