ಕರ್ನಾಟಕ

ಪುಟ್ಟರಾಜು ನಮಗಿಂತ ಒಳ್ಳೆಯ ಕಲಾವಿದ. ನಾನು ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದನ್ನು ಕಾದು ನೋಡೋಣ: ಸುಮಲತಾ

Pinterest LinkedIn Tumblr


ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡಿದೆ. ಸದ್ಯ ಎಲ್ಲರೂ ವಿಶ್ರಾಂತಿ ಮೂಡ್​ನಲ್ಲಿದ್ದು, ಮತ ಎಣಿಕೆಯ ದಿನಕ್ಕಾಗಿ ಕಾಯುತ್ತಿದ್ದಾರೆ. ಇಷ್ಟು ದಿನ ಭಾರಿ ಪ್ರಚಾರ ನಡೆಸಿದ್ದ ಸುಮಲತಾ ಕೂಡ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ, ಬೆದರಿಕೆ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಮಲತಾ ಆಗ್ರಹಿಸಿದ್ದಾರೆ.

ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಭರವಸೆ ಸುಮಲತಾ ಅವರಿಗೆ ಸಿಕ್ಕಿತ್ತು. ಇದು ಕೇವಲ ಆಶ್ವಾಸನೆಯಾಗಬಾರದು ಎಂಬುದು ಸುಮಲತಾ ಆಗ್ರಹ. “ಅವರು ಮಾತು ಕೊಟ್ಟರೆ ಸಮಾಧಾನವಾಗುವುದಿಲ್ಲ. ಧಮ್ಕಿ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ನಮಗೆ ಭರವಸೆ ಬೇಡ,” ಎಂದು ಹೇಳಿದ್ದಾರೆ.

ಬೆದರಿಕೆ ಹಾಕಿದವರು ತುಂಬಾನೇ ಅಪಾಯಕಾರಿ ಎಂದಿರುವ ಸುಮಲತಾ, “ಬೆದರಿಕೆ ಹಾಕಿರುವವರು ರೌಡಿ ಶೀಟರ್​ಗಳು. ಮಲಗಿದ್ದ ವೇಳೆ ವ್ಯಕ್ತಿಯನ್ನು ಕತ್ತರಿಸಿ ಕೊಲೆ ಮಾಡಿದವರು ಎಂದು ಕೆಲವರು ಹೇಳಿದ್ದಾರೆ. ಇಂಥವರು ಧಮ್ಕಿ ಹಾಕಿರುವುದು ಒಂದು ಗಂಭೀರ ವಿಚಾರ. ನಾನು ಕೂಡ ದೂರು ದಾಖಲು ಮಾಡುತ್ತೇನೆ. ಈ ವಿಚಾರವನ್ನು ಹಗುರವಾಗಿ ಪರಿಗಣಿಸುವುದಿಲ್ಲ,” ಎಂದಿದ್ದಾರೆ ಸುಮಲತಾ.

ಈ ಮೊದಲು ಸುಮಲತಾ, ದರ್ಶನ್​ ಹಾಗು ಯಶ್​ಗೆ ಬೆದರಿಕೆಗಳು ಬಂದಿದ್ದವು. ಸುಮಲತಾ ಬೆಂಬಲಕ್ಕೆ ನಿಲ್ಲದಂತೆ ದರ್ಶನ್​,ಯಶ್​ಗೆ ಆಗ್ರಹಿಸಲಾಗಿತ್ತು.

ಪುಟ್ಟರಾಜು ವಿರುದ್ಧ ವಾಗ್ದಾಳಿ:

ಸುಮಲತಾ ಸಿನಿಮಾದಲ್ಲಿ ಅಷ್ಟು ಚೆನ್ನಾಗಿ ನಟಿಸಿಲ್ಲ ಎನ್ನುವ ಸಚಿವ ಪುಟ್ಟರಾಜು ಹೇಳಿಕೆಗೆ ಸಂಬಂಧಿಸಿ ಸುಮಲತಾ ಪ್ರತಿಕ್ರಿಯಿಸಿದ್ದು, “ಪುಟ್ಟರಾಜು ನಮಗಿಂತ ಒಳ್ಳೆಯ ಕಲಾವಿದ. ಸುಮಲತಾ ಗೆದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಅವರು ಹೇಳಿದ್ದಾರೆ. ಏನಾಗುತ್ತದೆ ಎಂದು ಆ ದಿನಕ್ಕೆ ನೋಡೋಣ,” ಎಂದಿದ್ದಾರೆ ಅವರು.

Comments are closed.