ಹಾವೇರಿ: ಹಾವೇರಿ-ಗದಗ ಲೋಕಸಭಾ ಕಣ ರಂಗೇರಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಸಹೋದರ ಡಿ.ಆರ್. ಪಾಟೀಲ್ ಕಣಕಿಳಿದಿದ್ದು, ಎದುರಾಳಿಯಾಗಿ ಬಿಜೆಪಿಯ ಹಾಲಿ ಸಂಸದ ಶಿವಕುಮಾರ್ ಉದಾಸಿ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಈ ಚುನಾವಣೆ ಎರಡು ಪಕ್ಷಗಳಿಗೆ ಪ್ರತಿಷ್ಠೆ ಕಣವಾಗಿದ್ದು, ಶತಾಯಗತಾಯ ಸಹೋದರನನ್ನು ಗೆಲ್ಲಿಸಲು ಎಚ್.ಕೆ ಪಾಟೀಲ್ ಭಾರೀ ರಣತಂತ್ರ ಹೆಣೆದಿದ್ದಾರೆ. ಹೀಗಾಗಿಯೇ ತಮ್ಮದೇ ಸಮುದಾಯದ ಗೌಡನನ್ನು ಗೆಲ್ಲಿಸಲು ಗೌಡ್ತಿಯರನ್ನು ಪ್ರಚಾರದ ಅಖಾಡಕ್ಕಿಳಿಸಿದ್ಧಾರೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ್ರನ್ನು ಗೆಲ್ಲಿಸಲು ಗೌಡ್ತಿಯರೇ ಅಖಾಡಕ್ಕಿಳಿದ್ದಿದ್ದಾರೆ. ಬರದನಾಡಿಗೆ ನೀರು ಕೊಟ್ಟ ನಾಯಕನನ್ನು ಗೆಲ್ಲಿಸಿ ಎಂದು ಮನೆ ಮನೆಗೆ ಹೋಗಿ ಪ್ರಚಾರ ನಡೆಸಿದ್ದಾರೆ. ಹೀಗಾಗಿಯೇ ಕ್ಷೇತ್ರದಲ್ಲಿ ದಿನೇ ದಿನೇ ಚುನಾವಣಾ ಕಾವು ಬಿಸಿಲಿನಂತೆ ಏರತೊಡಗಿದೆ.
ಈ ಹಿಂದೆಯೂ ಅಭಿವೃದ್ಧಿ ಕುರಿತು ಚರ್ಚೆಗೆ ಬರುವಂತೆ ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಅಭ್ಯರ್ಥಿ ಪಂಥಾಹ್ವಾನ ನೀಡಿದ್ದಾರೆ. ಈ ಆಹ್ವಾನ ಸ್ವೀಕರಿಸಿರೋ ಬಿಜೆಪಿ ಅಭ್ಯರ್ಥಿ, ತಾವು ಅಭಿವೃದ್ಧಿ ಕುರಿತು ಚರ್ಚೆ ಮಾಡಲು ಮುಂದಾಗಿದ್ದರು. ಅಲ್ಲದೇ ನಾನು ಚರ್ಚೆ ಮಾಡುತ್ತೇನೆ, ಜತೆಗೆ ನೀವು ಮಾಡರೋ ಅಭಿವೃದ್ಧಿ ಕುರಿತು ಬಗ್ಗೆಯೂ ಮಾತಾಡೋಣ ಎಂದು ತಿರುಗೇಟು ನೀಡಿದ್ದರು.
ಇನ್ನು 40 ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹಾವೇರಿ-ಗದಗ ಕ್ಷೇತ್ರ ಸದ್ಯ ಕೇಸರಿ ಪಾಲಾಗಿದೆ. ಹೀಗಾಗಿ ಈ ಬಾರಿ ಕೇಸರಿ ಕೋಟೆ ಕೆಡವಿ ಕೈ ಕೋಟೆ ಕಟ್ಟಲು ಕಾಂಗ್ರೆಸ್ ನಾಯಕರು ತಂತ್ರ ರೂಪಿಸಿದ್ಧಾರೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಗೌಡ್ತಿಯರೇ ಪ್ರಚಾರಕ್ಕೆ ಮುಂದಾಗಿದ್ದು, ಜಿಲ್ಲಾದ್ಯಂತ ಮನೆ ಮನೆಗೆ ತೆರಳಿ ಮಹಿಳೆಯರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಇನ್ನು ಎಚ್.ಕೆ ಪಾಟೀಲರ ಈ ತಂತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದರಿಂದಲೇ ಜಿಲ್ಲೆಯ ಜನತೆಯಲ್ಲಿ ಈ ಬಾರಿ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಗೌಡ್ತಿಯರು ಕೇವಲ ಮತ ಕೇಳದೆ ಸ್ಥಳೀಯ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಿದ್ಧಾರೆ. ನಿಮ್ಮ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತೇವೆ ಎಂದು ಹೇಳುತ್ತಿದ್ಧಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಏನೋ ಮಾಡುತ್ತಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಮತದಾರ ಪ್ರಭು ಯಾರಿಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂದು ಕಾದು ನೋಡಬೇಕಿದೆ.
Comments are closed.