ಹಾಸನ: ದೇವೇಗೌಡರ ತವರು ಕ್ಷೇತ್ರದಲ್ಲಿ ಆಪರೇಷನ್ ಕಮಲ ಮುಂದುವರೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಮಾಜಿ ಶಾಸಕ ಪುಟ್ಟೇಗೌಡ ಅವರ ಮನೆಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಕಾಂಗ್ರೆಸ್ನ ನಿಷ್ಠಾವಂತ ಮುಖಂಡರಾಗಿರುವ ಮಾಜಿ ಶಾಸಕ ಪುಟ್ಟೇಗೌಡ ಅವರಿಗೂ ಹಾಗೂ ದೇವೇಗೌಡ ಅವರಿಗೂ ದಶಕದ ವೈರತ್ವವಿದೆ. ರಾಜಕೀಯ ಆರಂಭದಲ್ಲಿ ಜೆಡಿಎಸ್ನಲ್ಲಿದ್ದ ಪುಟ್ಟೇಗೌಡ ಅವರು 2013ರಲ್ಲಿ ದೇವೇಗೌಡರ ಪಾಳೆಯ ತೊರೆದು ಕಾಂಗ್ರೆಸ್ ಸೇರಿದ್ದರು. ಇವರ ನಡುವಿನ ಮುನಿಸನ್ನು ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಯಡಿಯೂರಪ್ಪ, ಪುಟ್ಟೇಗೌಡರನ್ನು ಪಕ್ಷಕ್ಕೆ ಸೆಳೆಯುವ ಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ನಾಯಕರ ಅಸಮಾಧಾನವನ್ನು ಅರಿತಿರುವ ಬಿಜೆಪಿ, ಜೆಡಿಎಸ್ ಭದ್ರಕೋಟೆಯಲ್ಲಿ ಅವರಿಗೆ ಟಾಂಗ್ ನೀಡಲು ಮುಂದಾಗಿದೆ. ಈಗಾಗಲೇ ಎ ಮಂಜು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿದ್ದು, ಇನ್ನುಳಿದ ಅಸಮಾಧಾನಿತ ನಾಯಕರ ಮೇಲೆ ಕಣ್ಣು ಹಾಕಿದೆ.
ಮೈತ್ರಿ ಅಭ್ಯರ್ಥಿ ವಿರುದ್ಧ ಇರುವ ಒಳಬೇಗುದಿ ಗಮನಿಸಿದ ಯಡಿಯೂರಪ್ಪ, ಬಿಜೆಪಿಗೆ ಆಂತರಿಕ ಬೆಂಬಲ ನೀಡುವಂತೆ ಪುಟ್ಟೇಗೌಡರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಬಿಜೆಪಿಗೆ ಸೇರುವಂತೆ ಆಹ್ವಾನಿಸಿದ್ದರು. ಆದರೆ ಈ ಆಹ್ವಾನವನ್ನು ಮಾಜಿ ಶಾಸಕರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ತಮ್ಮ ಬಗ್ಗೆ ಇರುವ ಅಸಮಾಧಾನವನ್ನು ಅರಿತ ಪ್ರಜ್ವಲ್ ರೇವಣ್ಣ ಬ್ರೇಕ್ ಫಾಸ್ಟ್ ರಾಜಕೀಯಕ್ಕೆ ಮುಂದಾಗಿದ್ದರು. ಪುಟ್ಟೇಗೌಡ, ಶಿವರಾಂ ಸೇರಿದಂತೆ ಹಲವರ ಮನೆಗೆ ತೆರಳಿದ್ದ ರೇವಣ್ಣ, ತಮ್ಮ ಮಗನಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಮೂಲಕ ಮೈತ್ರಿ ಪಕ್ಷದ ನಾಯಕರ ಮನವೊಲಿಕೆ ಮಾಡಿದ್ದರು.
ಚನ್ನರಾಯಪಟ್ಟಣದ ಪುಟ್ಟೇಗೌಡ ಕೂಡ ರೇವಣ್ಣ ಅವರ ಮಾತಿಗೆ ಒಪ್ಪಿ ಪ್ರಜ್ವಲ್ಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಆದರೆ, ಈಗ ಪುಟ್ಟೇಗೌಡ ಮನೆಯಲ್ಲಿ ಯಡಿಯೂರಪ್ಪ ಕಾಣಿಸಿಕೊಳ್ಳುವ ಮೂಲಕ ದೇವೇಗೌಡರ ಮೊಮ್ಮಗನನ್ನು ಮಣಿಸಲು ರಣತಂತ್ರ ರೂಪಿಸಲು ಮುಂದಾಗಿದ್ದಾರೆ.
Comments are closed.