ಕರ್ನಾಟಕ

ರಣ ಬಿಸಿಲಿಗೆ ತತ್ತರಿಸಿದ ಬಳ್ಳಾರಿ ಜನತೆ!

Pinterest LinkedIn Tumblr

ಬಳ್ಳಾರಿ: ಗಣಿನಾಡು ಬಳ್ಳಾರಿ ಜನರು ಇದೀಗ ಸೂರ್ಯದೇವನ ಪ್ರತಾಪ ಕಂಡು ಅಕ್ಷರಶ ಕಂಗಾಲಾಗಿ ಹೋಗಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನವೇ ಬಳ್ಳಾರಿಯಲ್ಲೀಗ ಉಷ್ಟಾಂಶ 40 ಡಿಗ್ರಿ ಸೆಲಿಯಸ್ಸ್ ದಾಟಿದೆ. ಸೂರ್ಯ ಉದಯವಾಗುತ್ತಿದ್ದಂತೆ ರಣ ರಣ ಬಿಸಿಲಿನ ಕಾವು ಕಾವೇರುತ್ತಿದೆ. ಪ್ರತಿ ವರ್ಷ ಎಪ್ರಿಲ್, ಮೇ ತಿಂಗಳಿನಲ್ಲಿ ವಿಪರೀತವಾಗುತ್ತಿದ್ದ ಬಿಸಿಲು ಈ ಭಾರೀ ಮಾರ್ಚ್ ಆರಂಭದಲ್ಲೇ ಪ್ರಖರತೆಯನ್ನು ಪಡೆದುಕೊಂಡಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಜನರು ಇದೀಗ ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗಣಿ ನಾಡಿನಲ್ಲಿ ಸೂರ್ಯ ಉದಯಿಸುತ್ತಿದ್ದಂತೆ ಬಿರು ಬಿಸಿಲಿನ ಕಾವು ಕಾವೇರುತ್ತಿದೆ. ಹೀಗಾಗಿ ಸೂರ್ಯದೇವನ ಪ್ರತಾಪ ತಪ್ಪಿಸಿಕೊಳ್ಳಲು ಜನರು ಛತ್ರಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವರು ಟೋಪಿಗಳನ್ನ ಹಾಕಿಕೊಂಡು ಬಿಸಿಲಿನಿಂದ ತಪ್ಪಿಸಿಕೊಳ್ಳುತ್ತಿದ್ದರೆ, ಯುವತಿಯರಂತೂ ಮುಖಕ್ಕೆ, ಕೈಗೆ ಬಟ್ಟೆ ಕಟ್ಟಿಕೊಂಡು ಮನೆಯಿಂದ ಹೊರ ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸೂರ್ಯ ದೇವನ ಪ್ರತಾಪದಿಂದ ತಂಪಾಗಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಕಲ್ಲಂಡಗಿ, ಐಸ್ ಕ್ರೀಮ್, ಎಳನೀರು ಸೇರಿದಂತೆ ತಂಪು ಪಾನೀಯ ಮಾರಾಟ ಸಹ ಬಿರುಸಾಗಿ ಸಾಗಿದೆ. ಜೊತೆಗೆ ಕರೆಂಟ್ ಸಹ ಕಣ್ಣಾ ಮುಚ್ಚಾಲೆ ಆಡುತ್ತಿರುವುದರಿಂದ ಮನೆಯಲ್ಲಿ ಕುಳಿತುಕೊಳ್ಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ ನಲ್ಲಿಯೇ ಉಷ್ಣಾಂಶ ಈ ರೀತಿ ಎರಿಕೆಯಾದ್ರೆ ಮುಂದಿನ ತಿಂಗಳಿನಲ್ಲಿ ಬಿಸಿಲ ಬೇಗೆ ಹೇಗೆ ತಪ್ಪಿಸಿಕೊಳ್ಳೋದು ಅಂತಾ ಜನರು ಚಿಂತೆ ಮಾಡುವಂತಾಗಿದೆ.

Comments are closed.