ಬೆಂಗಳೂರು: ನಗರದ ಕುಖ್ಯಾತ ರೌಡಿಶೀಟರ್ ಲಕ್ಷ್ಮಣನನ್ನು ಮಾರಕಾಸ್ತ್ರಗಳಿಂದ ಕೊಚ್ಚಿಇಂದು ಮಧ್ಯಾಹ್ನ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಬೆಂಗಳೂರನ್ನು ಬೆಚ್ಚಿಬೀಳಿಸಿದೆ.
ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ ಬರ್ಬರ ಕೊಲೆ ನಡೆದಿದೆ. ಸುಂಕದಕಟ್ಟೆ ನಿವಾಸಿಯಾಗಿದ್ದ ರಾಮ-ಲಕ್ಷ್ಮಣ ಸಹೋದರರು ಕುಖ್ಯಾತ ರೌಡಿಗಳೆಂದು ಗುರುತಿಸಿಕೊಂಡಿದ್ದರು. ಮಹಾಲಕ್ಷ್ಮಿ ಲೇಔಟ್ನ ಇಸ್ಕಾನ್ ದೇವಸ್ಥಾನದ ಬಳಿ ಇರುವ ಸೋಪ್ ಫ್ಯಾಕ್ಟರಿ ಸಮೀಪದಲ್ಲಿ ಲಕ್ಷ್ಮಣ ಇನೋವಾ ಕಾರಿನಲ್ಲಿ ಹೋಗುತ್ತಿದ್ದಾಗ ಸ್ಕಾರ್ಫಿಯೋದಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.
ಇಂದು ಮಧ್ಯಾಹ್ನ 12.45ರ ಸುಮಾರಿಗೆ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿ ಬಂದು ಹತ್ಯೆ ಮಾಡಿದ್ದಾರೆ. ಲಕ್ಷ್ಮಣನ ಮೇಲೆ ಕೊಲೆ, ಕೊಲೆ ಯತ್ನ, ಧಮ್ಕಿ ಸೇರಿದಂತೆ 10ಕ್ಕೂ ಹೆಚ್ಚು ಕೇಸುಗಳು ದಾಖಲಾಗಿದ್ದವು. ಸುಬ್ರಹ್ಮಣ್ಯನಗರ ಪೊಲೀಸರು ಹತ್ಯೆ ನಡೆದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳೇ ವೈಷಮ್ಯದ ಕಾರಣದಿಂದ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಸಿಸಿಬಿ ರೌಡಿ ಪರೇಡ್ಗೆ ಲಕ್ಷ್ಮಣ ಹಾಜರಾಗಿದ್ದ. ಮಿರ್ಲೆ ವರದರಾಜ್ ನನ್ನ ಬಂಧಿಸಿದ ವೇಳೆ ಲಕ್ಷ್ಮಣನನ್ನು ವಿಚಾರಣೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು ರೌಡಿಸಂ ಬಿಟ್ಟು ಸುಮ್ಮನಿರುವಂತೆ ಲಕ್ಷ್ಮಣನಿಗೆ ಎಚ್ಚರಿಕೆ ನೀಡಿದ್ದರು.
ರೌಡಿಶೀಟರ್ ಲಕ್ಷ್ಮಣ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ 4 ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹತ್ಯೆ ನಡೆದ ಸಂದರ್ಭದಲ್ಲಿ ಲಕ್ಷ್ಮಣನ ಜೊತೆ ಡ್ರೈವರ್ ಇದ್ದರೂ ಲಕ್ಷ್ಮಣನನ್ನು ಮಾತ್ರ ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿದೆ. ಹೀಗಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಣನ ಡ್ರೈವರ್ ವಿಚಾರಣೆ ನಡೆಸಲಾಗುತ್ತದೆ.
ಹತ್ಯೆ ನಡೆದ ಸ್ಥಳಕ್ಕೆ ತೆರಳಿ ಸಿಸಿಬಿ ಪೊಲೀಸರು ಸುತ್ತಮುತ್ತಲಿನ ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಾವಳಿ, ಡಿವಿಆರ್ ವಶಕ್ಕೆ ಪಡೆದಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ಡಾಗ್ ಸ್ಕ್ವಾರ್ಡ್ ಪರೀಶೀಲನೆ ನಡೆಸುತ್ತಿದೆ. ರಸ್ತೆ ಮಾರ್ಗದ ಉದ್ದಕ್ಕೂ ಡಾಗ್ ಸ್ಕ್ವಾರ್ಡ್ನಿಂದ ಪರಿಶೀಲನೆ ನಡೆಸುತ್ತಿದೆ. 2008ರ ಸೆಪ್ಟೆಂಬರ್ನಲ್ಲಿ ನಡೆದಿದ್ದ ಮಚ್ಚನ ಮರ್ಡರ್ ಪ್ರಕರಣದ ಕೇಸ್ನಲ್ಲಿ ಲಕ್ಷ್ಮಣ ಭಾಗಿಯಾಗಿದ್ದ. 14 ವರ್ಷಗಳ ಹಿಂದಿನ ದ್ವೇಷಕ್ಕೆ ಇದೀಗ ಪ್ರತೀಕಾರ ಪಡೆದಿದ್ದಾರೆ ಎನ್ನಲಾಗಿದೆ. ಈ ಕೊಲೆಯ ಹಿಂದೆ ಸೈಕಲ್ ರವಿ ಸಹಚರರ ಹೆಸರು ಕೇಳಿಬರುತ್ತಿದೆ.
Comments are closed.