ಮಂಡ್ಯ: ಮಂಡ್ಯದಲ್ಲೀಗ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಅತ್ತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರು ಅಂತಿಮವಾಗಿದೆ. ಇತ್ತ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ನಿಂದ ಟಿಕೆಟ್ಗಾಗಿ ಕಾಯುತ್ತಿದ್ದರೂ ಸ್ಪರ್ಧೆ ಮಾತ್ರ ಖಚಿತ ಎನ್ನಲಾಗುತ್ತಿದೆ. ಈ ಹಿಂದೆಯೇ ತಾನು ಮಂಡ್ಯದ ಜನತೆ ಇಚ್ಚೆಯಂತೆಯೇ ಕಣಕ್ಕಿಳಿಯುವುದಾಗಿ ಹೇಳಿದ್ದರು. ಇದೀಗ ಮತ್ತೆ ಸುದ್ದಿಗೋಷ್ಠಿ ನಡೆಸಿರುವ ಸುಮಲತಾ ಅಂಬರೀಶ್ ಅವರು ಸ್ಪರ್ಧೆಗೆ ಸಿದ್ದ ಎಂದು ಘೋಷಿಸಿದ್ದಾರೆ.
ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಅವರ ಮನೆಗೆ ಇಂದು ಸುಮಲತಾ ಅಂಬರೀಶ್ ಅವರು ಭೇಟಿ ನೀಡಿದ್ದರು. ಈ ವೇಳೆ ಗುರು ಕುಟುಂಬಕ್ಕೆ ಜಮೀನು ಹಸ್ತಾಂತರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ, “ಅಂಬಿ ಅಭಿಮಾನಿಗಳ ಆಸೆಗೆ ಸ್ಪಂದಿಸಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಚುನಾವಣೆಯಲ್ಲಿ ಸೋಲು-ಗೆಲುವಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮೊದಲು ಕಾಂಗ್ರೆಸ್ಸಿನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ” ಎಂದಿದ್ದಾರೆ.
ಚುನಾವಣೆಗೆ ನಿಲ್ಲುವ ಧೃಡ ನಿರ್ಧಾರಕ್ಕೆ ಬಂದಿರುವ ಸುಮಲತಾ ಮಂಡ್ಯ ಜಿಲ್ಲೆಯಲ್ಲಿ ತುಂಬಾ ಸಕ್ರಿಯ ಓಡಾಟ ನಡೆಸುತ್ತಿದ್ದಾರೆ. ಇಂದು ಕೂಡ ಮಂಡ್ಯದ ಹಲವು ಕಾಂಗ್ರೆಸ್ ನಾಯಕರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಚುನಾವಣೆಯಲ್ಲಿ ಯಾರನ್ನು ಎದುರಿಸಬೇಕಾಗಿದೆ ಎಂದು ನಿಮಗೆ ಗೊತ್ತಿದೆ. ಇದಕ್ಕಾಗಿ ನಿಮ್ಮ ಬೆಂಬಲ ಅತ್ಯವಶ್ಯಕ. ಒಳ್ಳೆಯ ನಿರ್ಧಾರ ಜತೆಗೆ ಮತ್ತೆ ಬರುತ್ತೇನೆ. ನೀವು ನನಗೆ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ತಾವು ಕಾಂಗ್ರೆಸ್ಸಿನಿಂದ ಅಲ್ಲದೇ ಹೋದರೂ, ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಅಖಾಡಕ್ಕಿಳಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬೆನ್ನಲ್ಲೇ ಸುಮಲತಾ ಅವರ ಮನವಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಜಿಲ್ಲಾ ಕುರುಬ ಸಮುದಾಯದ ಮುಖಂಡರು ಸ್ಪಂದಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಹಾಸನ ಅಭ್ಯರ್ಥಿಗೆ ತಮ್ಮ ಬೆಂಬಲವಿಲ್ಲ. ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ಅಂಬರೀಶ್ ಇದ್ದಾಗಲೂ ಜಿಲ್ಲೆಗೆ ಸಾಕಷ್ಟು ಕೆಲಸ ಆಗಿವೆ. ಸುಮಲತಾ ಕೂಡ ಅವರದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಮಂಡ್ಯ ಜನ ಜಿಲ್ಲೆಯವರಿಗೆ ಬಿಟ್ಟು ಹೊರಗಿನವರಿಗೆ ಮತ ಹಾಕಲ್ಲ ಎನ್ನುವ ಮೂಲಕ ಪರೋಕ್ಷವಾಗಿ ನಿಖಿಲ್ಗೆ ತಮ್ಮ ಬೆಂಬಲವಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ಸಿಗರು ಹೇಳಿದ್ದಾರೆ.
ಒಟ್ಟಾರೆ ಸುಮಲತಾ ಅಂಬರೀಶ್ ಅವರ ರಾಜಕೀಯ ಪ್ರವೇಶದಿಂದ ಮಂಡ್ಯದಲ್ಲೀಗ ಜೆಡಿಎಸ್ಗೆ ಭಾರೀ ನಡುಕ ಶುರುವಾಗಿದೆ. ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಮಗನ ಎದುರು ಅಂಬರೀಶ್ ಪತ್ನಿ ಸುಮಲತಾ ಅವರನ್ನು ಮಂಡ್ಯ ಜನತೆ ಕೈ ಹಿಡಿಯುತ್ತಾರಾ, ಇಲ್ಲವೇ ಎಂದು ಕಾದು ನೋಡಬೇಕಿದೆ.
Comments are closed.