ಬೆಂಗಳೂರು: ಭಾರತ ಮತ್ತು ನೆರೆಯ ರಾಷ್ಟ್ರ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಗಡಿಭಾಗದಲ್ಲಿ ಬಿಗುವಿನ ವಾತಾರವಣ ನಿರ್ಮಾಣವಾಗಿದೆ. ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದ ಭಾರತಕ್ಕೆ ತಿರುಗೇಟು ನೀಡಿದ್ದ ಪಾಕಿಸ್ತಾನ ಭಾರತೀಯ ವಾಯುಸೇನೆಯ ಪೈಲಟ್ ಅನ್ನು ಜೀವಂತವಾಗಿ ಹಿಡಿದು ಬಂಧಿಸಿದ್ದೇವೆ ಎಂದು ಹೇಳಿಕೆ ನೀಡಿತ್ತು.
ಇದೀಗ ಪಾಕಿಸ್ತಾನದ ಅನೇಕ ಟ್ವಿಟ್ಟಿಗರು ವಿಡಿಯೋವೊಂದನ್ನು ಶೇರ್ ಮಾಡುತ್ತಿದ್ದು, ಕೆಳಗೆ ಬಿದ್ದಿರುವ ಪೈಲಟ್ ಅನ್ನು ನೋಡಲು ಸುತ್ತಲೂ ಜನರು ಜಮಾಯಿಸಿರುವ ವಿಡಿಯೋ ತುಣುಕು ಇದಾಗಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಪಾಕಿಸ್ತಾನಿಯರ ಟ್ವೀಟ್ಗಳು ಇದೀಗ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ. ಅಂದಹಾಗೆ, ಆ ವಿಡಿಯೋವನ್ನು ಭಾರತೀಯರೇ ಹೆಚ್ಚು ರೀಟ್ವೀಟ್ ಮಾಡುತ್ತಿದ್ದಾರೆ.
ಇದೇನಿದು? ನಮ್ಮ ದೇಶದ ಪೈಲಟ್ ಪಾಕಿಸ್ತಾನಿಯರ ವಶದಲ್ಲಿರುವ ಸುದ್ದಿಯನ್ನು ಭಾರತೀಯರೇ ಯಾಕೆ ಶೇರ್ ಮಾಡುತ್ತಿದ್ದಾರೆ? ಎಂದು ನಿಮಗೆ ಆಶ್ಚರ್ಯವಾಗಬಹುದು. ಇದೀಗ ಟ್ವಿಟ್ಟರ್ನಲ್ಲಿ ಓಡಾಡುತ್ತಿರುವ ಆ ವಿಡಿಯೋ ಫೇಕ್ ಆಗಿರುವುದರಿಂದ ಭಾರತೀಯರ ಆ ಟ್ವೀಟ್ ಅನ್ನು ಶೇರ್ ಮಾಡಿಕೊಂಡು ವಾಸ್ತವ ಏನೆಂದು ತಿಳಿಸುತ್ತಿದ್ದಾರೆ.
ಪಾಕಿಸ್ತಾನದ ಟ್ವಿಟ್ಟಿಗರು ಶೇರ್ ಮಾಡಿರುವ ಆ ವಿಡಿಯೋದಲ್ಲಿ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರನ್ನು ಸುತ್ತುವರಿದಿರುವ ಜನರು ಕನ್ನಡದಲ್ಲಿ ನೀರು ಬೇಕಾ ಸರ್? ಎಂದು ಕೇಳುತ್ತಿದ್ದಾರೆ. ಪಾಕಿಸ್ತಾನಿಯರಿಗೆ ಕನ್ನಡ ಎಂಬ ಭಾಷೆಯಿದೆ ಎಂಬುದು ಗೊತ್ತಿರುವುದೇ ಅನುಮಾನ. ಹೀಗಿರುವಾಗ ಕನ್ನಡದಲ್ಲಿ ಮಾತನಾಡಲು ಹೇಗೆ ಸಾಧ್ಯ? ಎಂದು ಟ್ವಿಟ್ಟಿಗರು ಗೇಲಿ ಮಾಡಿ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ಇಸ್ಲಮಾಬಾದ್ನ ವಾಖರ್ ರಿಜ್ವಿ ಎಂಬಾತ ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ‘ಭಾರತೀಯ ಪೈಲಟ್ ಅನ್ನು ಪಾಕಿಸ್ತಾನ ಜೀವಂತವಾಗಿ ಸೆರೆಹಿಡಿದಿದೆ. ಅದಕ್ಕೆ ಸಾಕ್ಷಿ ಈ ವಿಡಿಯೋ. ಇದು ಟ್ರೈಲರ್ ಅಷ್ಟೇ’ ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಅನ್ನು ಶೇರ್ ಮಾಡಿರುವ ಭಾರತೀಯರು ‘ನಿಮ್ಮ ದೇಶದಲ್ಲಿ ಯಾವಾಗಿಂದ ಕನ್ನಡ ಮಾತನಾಡಲು ಕಲಿತರು?’ ಎಂದು ಪ್ರಶ್ನಿಸಿದ್ದಾರೆ.
ಅಂದಹಾಗೆ, ಈ ವಿಡಿಯೋ ಯಲಹಂಕದ ವಾಯುನೆಲೆಯಲ್ಲಿ ಅವಘಡ ಸಂಭವಿಸಿದಾಗ ನಡೆದ ಘಟನೆಯಾಗಿದ್ದು, ತಾಲೀಮಿನಲ್ಲಿ ತೊಡಗಿದ್ದ ಸೂರ್ಯಕಿರಣ್ ಯುದ್ಧ ವಿಮಾನ ಪತನವಾಗಿ ಓರ್ವ ಪೈಲಟ್ ಸಾವನ್ನಪ್ಪಿದ್ದರು. ಕೆಳಗೆ ಬಿದ್ದ ಪೈಲಟ್ಗಳಾದ ತೇಜೇಶ್ವರ್ ಸಿಂಗ್ ಮತ್ತು ವಿಜಯ್ ಶೆಲ್ಕೆ ಅವರನ್ನು ಅಲ್ಲಿನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ನಂತರ ವಿಜಯ್ ಶೆಲ್ಕೆ ತನ್ನನ್ನು ರಕ್ಷಿಸಿದ ಯುವಕರನ್ನು ಆಸ್ಪತ್ರೆಗೆ ಕರೆಸಿಕೊಂಡು ಧನ್ಯವಾದ ತಿಳಿಸಿದ್ದರು. ಅದೇ ವಿಜಯ್ ಶೆಲ್ಕೆಯನ್ನು ಯುವಕರು ರಕ್ಷಿಸುತ್ತಿರುವ ವಿಡಿಯೋವನ್ನು ಪಾಕಿಸ್ತಾನಿ ಯುವಕ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿದ್ದ ಪೈಲಟ್ ಅನ್ನೇ ಪಾಕಿಸ್ತಾನ ಬಂಧಿಸಿದೆ ಎಂದು ಅಲ್ಲಿನವರು ಬಿಂಬಿಸುತ್ತಿದ್ದಾರೆ.
Comments are closed.