ಕರ್ನಾಟಕ

ಅತೃಪ್ತ ಕಾಂಗ್ರೆಸ್ ಶಾಸಕ ಜಾಧವ್‌ ಇಂದು ರಾಜೀನಾಮೆ?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಸತತ ಗೈರು ಹಾಜರಾಗುವುದರ ಜತೆಗೆ ಬಜೆಟ್‌ ಅಧಿವೇಶನಕ್ಕೂ ಬೆನ್ನು ಹಾಕಿರುವ ಚಿಂಚೋಳಿ ಶಾಸಕ ಡಾ.ಉಮೇಶ್‌ ಜಾಧವ್‌ ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ.

ಕಾಂಗ್ರೆಸ್‌ನಿಂದ ಅಧಿಕೃತವಾಗಿ ಹೊರಬರಲು ನಿರ್ಧರಿಸಿರುವ ಜಾಧವ್‌, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಅತೃಪ್ತ ಶಾಸಕರ ರಾಜೀನಾಮೆ ಪರ್ವವೂ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಸರಕಾರ ರಚನೆಯನ್ನು ನಿರೀಕ್ಷಿಸಿ ಜಾಧವ್‌, ಕಾಂಗ್ರೆಸ್‌ನಿಂದ ದೂರವಾಗಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಸರಕಾರ ರಚನೆಯ ಲಕ್ಷಣ ಕಾಣಿಸುತ್ತಿಲ್ಲ. ಈ ನಡುವೆಯೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಜಾಧವ್‌, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಬಿಜೆಪಿಯಿಂದ ಕಲಬುರ್ಗಿ ಕ್ಷೇತ್ರದಿಂದ ಅವರಿಗೆ ಟಿಕೆಟ್‌ ನೀಡುವ ಭರವಸೆ ಕೊಡಲಾಗಿದೆ ಎನ್ನಲಾಗಿದೆ.

ಅತೃಪ್ತರಿಗೆ ಕಡೆಯ ಅವಕಾಶ
ಈ ಮಧ್ಯೆ ಶಾಸಕರಾದ ರಮೇಶ್‌ ಜಾರಕಿಹೊಳಿ, ಡಾ.ಉಮೇಶ್‌ ಜಾಧವ್‌, ಬಿ.ನಾಗೇಂದ್ರ, ಮಹೇಶ್‌ ಕುಮಠಳ್ಳಿ ಅವರನ್ನು ಶಾಸನಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಿ ಕಾಂಗ್ರೆಸ್‌ ನಾಯಕರು ಸ್ಪೀಕರ್‌ ಅವರಿಗೆ ದೂರು ಸಲ್ಲಿಸಿದ್ದಾರೆ. ಆದರೆ, ಅತೃಪ್ತರಿಗೆ ಮತ್ತೊಂದು ಅವಕಾಶ ನೀಡಲು ಉದ್ದೇಶಿಸಿರುವ ಕಾಂಗ್ರೆಸ್‌ ನಾಯಕರು, ಬಜೆಟ್‌ ಅಧಿವೇಶನಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅತೃಪ್ತರನ್ನು ಸಂಪರ್ಕಿಸಿ ಈ ಸೂಚನೆ ನೀಡಿದ್ದಾರೆ. ಭಿನ್ನಮತದ ಚಟುವಟಿಕೆ ಬಿಟ್ಟು ವಾಪಸ್‌ ಬಂದರೆ ನಿಗಮ ಮಂಡಳಿಗಳಲ್ಲಿ ಪ್ರಾತಿನಿಧ್ಯ ನೀಡಲಾಗುವುದು. ಮುಂದಿನ ಸಂಪುಟ ಪುನಾರಚನೆ ವೇಳೆ ಮಂತ್ರಿ ಸ್ಥಾನವನ್ನೂ ನೀಡುವ ಭರವಸೆ ಕೊಟ್ಟಿದ್ದಾರೆ. ಆದರೆ, ಅತೃಪ್ತರು ಮನಸ್ಸು ಬದಲಿಸಲು ತಯಾರಾಗಿಲ್ಲ ಎಂದು ತಿಳಿದು ಬಂದಿದೆ.

Comments are closed.