ಬೆಂಗಳೂರು: ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ಕಾಂಗ್ರೆಸ್ ಶಾಸಕರ ಬಡಿದಾಟ ಪ್ರಕರಣದಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಂದ ಏಟು ತಿಂದಿದ್ದ ಆನಂದ್ ಸಿಂಗ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಂಪ್ಲಿ ಗಣೇಶ್ ನಡೆಸಿದ್ದ ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆನಂದ್ ಸಿಂಗ್ ಅವರ ಕಣ್ಣು, ತಲೆಗೆ ತೀವ್ರ ಗಾಯಗಳಾಗಿತ್ತು. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಪತ್ನಿ ಮತ್ತು ಮಗ ಕಂಪ್ಲಿ ಗಣೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ನಡೆದ ಬಳಿಕ, ಕಾಂಗ್ರೆಸ್ನಿಂದ ಕೂಡ ಕಂಪ್ಲಿ ಗಣೇಶ್ ಅವರನ್ನು ಅಮಾನತು ಮಾಡಲಾಗಿತ್ತು.
ಪೊಲೀಸರು ತಮಗೆ ಸಿಕ್ಕ ಸುಳಿವಿನ ಆಧಾರದಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದರೂ ಕಂಪ್ಲಿ ಗಣೇಶ್ ಪತ್ತೆಯಾಗಿರಲಿಲ್ಲ. ಈ ನಡುವೆ ಗೃಹ ಸಚಿವರು, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳು ಕೂಡ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ಅವರಿಗೆ ಶಿಕ್ಷೆ ಕೊಟ್ಟೇ ಕೊಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಹಾಗೇ, ಆನಂದ್ ಸಿಂಗ್ ಕುಟುಂಬಸ್ಥರೊಂದಿಗೆ ಕಂಪ್ಲಿ ಗಣೇಶ್ ಮನೆಯವರು ಸಂಧಾನ ನಡೆಸಲು ಮುಂದಾಗಿದ್ದರು. ಆದರೆ, ಸಂಧಾನದ ಪ್ರಶ್ನೆಯೇ ಇಲ್ಲ, ಈ ರೀತಿಯ ಹಲ್ಲೆ ನಡೆಸಿದವರಿಗೆ ಶಿಕ್ಷೆ ಕೊಡಿಸಿಯೇ ಸಿದ್ಧ ಎಂದು ಆನಂದ್ ಸಿಂಗ್ ಕುಟುಂಬದವರು ಹಠ ಹಿಡಿದಿದ್ದರು.
ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಾಸಕ ಆನಂದ್ ಸಿಂಗ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಆನಂದ್ ಸಿಂಗ್ ಅವರ ಕಣ್ಣಿಗೆ ಪೆಟ್ಟಾಗಿ ಊತ ಉಂಟಾಗಿತ್ತು. ತಲೆ ಮತ್ತು ಎದೆಯ ಭಾಗಕ್ಕೆ ಪೆಟ್ಟಾಗಿತ್ತು. ಇಂದು ರಾತ್ರಿ 8.30ರ ಸುಮಾರಿಗೆ ಆನಂದ್ ಸಿಂಗ್ ತರಾತುರಿಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಕೆಲ ಸಮಯ ವಿಶ್ರಾಂತಿಯ ಅಗತ್ಯತೆ ಇದ್ದು, ಸದ್ಯಕ್ಕೆ ಆಸ್ಪತ್ರೆ ವಾಸ ಮುಗಿದಿದೆ.
Comments are closed.