ಕರ್ನಾಟಕ

ಮತ್ತೆ ‘ಆಪರೇಷನ್‌ ಕಮಲ’: ಬಜೆಟ್‌ ಮಂಡನೆಗೆ ಮುನ್ನ ಮುಖ್ಯಮಂತ್ರಿ ರಾಜೀನಾಮೆ ಎಂದ ಅಶೋಕ್‌

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರಕ್ಕೆ ಮತ್ತೆ ‘ಆಪರೇಷನ್‌ ಕಮಲ’ ದ ಗುಮ್ಮ ಶುರುವಾಗಿದೆ. ಇದೇ 6 ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನಕ್ಕೂ ಮುನ್ನವೇ ಕಾಂಗ್ರೆಸ್‌ನ ಡಜನ್‌ಗೂ ಹೆಚ್ಚು ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್‌ ವಲಯದಲ್ಲೇ ದಟ್ಟವಾಗಿ ಹರಿದಾಡುತ್ತಿದೆ. ಈ ಮಧ್ಯೆ ಸಿಎಂ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ ಮಂಡಿಸುವುದು ಅನುಮಾನ ಎಂಬ ಬಿಜೆಪಿ ನಾಯಕ ಆರ್‌.ಅಶೋಕ್‌ ಹೇಳಿಕೆ ಇದಕ್ಕೆ ಮತ್ತಷ್ಟು ಪುಷ್ಟಿನೀಡಿದೆ.

ಕಾಂಗ್ರೆಸ್‌ ಅತೃಪ್ತರ ಮನವೊಲಿಕೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಸಖ್ಯ ಬೆಳೆಸಿರುವ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಸರಣಿ ಮುಂದಿನ ವಾರದಿಂದ ಆರಂಭವಾಗಲಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ವಿಶೇಷವಾಗಿ ಕಾಂಗ್ರೆಸ್‌ ವಲಯದಲ್ಲೇ ಈ ಸುದ್ದಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಆದರೆ ಬಿಜೆಪಿ ವಲಯದಲ್ಲಿ ಮಾತ್ರ ಯಾವುದೇ ಸದ್ದುಗದ್ದಲವಿಲ್ಲ. ಒಂದೆಡೆ ಸಿಎಂ ಕುಮಾರಸ್ವಾಮಿ ಬಜೆಟ್‌ ಮಂಡನೆಗೆ ಸಿದ್ಧತೆ ನಡೆಸಿದ್ದರೆ ಬಜೆಟ್‌ ಮಂಡನೆಯೇ ಅನುಮಾನ ಎಂಬ ಬಿಜೆಪಿ ಹೇಳಿಕೆ ಈಗ ಸಾಕಷ್ಟು ರಾಜಕೀಯ ಚರ್ಚೆಗೆ ಗ್ರಾಸವೊದಗಿಸಿದೆ.

ಅಧಿವೇಶನಕ್ಕೂ ಮುನ್ನವೇ ರಾಜೀನಾಮೆ

ಈ ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಶೋಕ್‌ ಅವರು, ”ರಾಜ್ಯ ಬಜೆಟ್‌ಗೆ ಇನ್ನೂ ಕಾಲಾವಕಾಶವಿದೆ. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರ ಕಿತ್ತಾಟದಿಂದಾಗಿ ಸಮ್ಮಿಶ್ರ ಸರಕಾರ ಉಳಿಯುವುದು ಹಾಗೂ ಸಿಎಂ ಕುಮಾರಸ್ವಾಮಿ ಬಜೆಟ್‌ ಮಂಡನೆ ಮಾಡುವುದು ಅನುಮಾನವಾಗಿದೆ,” ಎಂದು ಹೇಳಿದರು.

”ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ 20 ಶಾಸಕರು ಅವರ ನಾಯಕರ ಸಂಪರ್ಕಕ್ಕೆ ಸಿಗದೆ ಓಡಾಡುತ್ತಿದ್ದು ಸಮ್ಮಿಶ್ರ ಸರಕಾರದ ಮೇಲೆ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದಾರೆ. ನಾವೇನು ರಾಜಕೀಯ ಸನ್ಯಾಸಿಗಳಲ್ಲ. ಒಟ್ಟು 104 ಇದ್ದ ಬಿಜೆಪಿ ಶಾಸಕರು ಈಗ 106 ಮಂದಿ ಆಗಿದ್ದೇವೆ. ವಿಧಾನಸಭೆ ಜಂಟಿ ಅಧಿವೇಶನಕ್ಕೂ ಮುನ್ನ ಸಮ್ಮಿಶ್ರ ಸರಕಾರದ 20 ಮಂದಿ ಶಾಸಕರು ರಾಜೀನಾಮೆ ನೀಡಿದರೆ, ಅಂತಹ ಸಂದರ್ಭ ಬಳಸಿಕೊಂಡು ಸರಕಾರ ರಚನೆ ಮಾಡುತ್ತೇವೆ,” ಎಂದರು.

”ನಾವು ರಾಜ್ಯ ಸರಕಾರವನ್ನು ಬೀಳಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ತಮ್ಮ ಶಾಸಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳದೆ ನಮ್ಮ ವಿರುದ್ಧ ‘ಆಪರೇಷನ್‌ ಕಮಲ’ ಎಂದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಅನಗತ್ಯ ಆರೋಪ ಮಾಡುತ್ತಿದ್ದಾರೆ. ರಾಜ್ಯ ಸರಕಾರದ ಆಡಳಿತ ವೈಖರಿ ಬಗ್ಗೆ ಜನರು ಸಹ ಗೊಂದಲಕ್ಕೀಡಾಗಿದ್ದಾರೆ. ಕಳೆದ ಏಳು ತಿಂಗಳಿಂದ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದೇ ಜನರಿಗೆ ಅರ್ಥವಾಗುತ್ತಿಲ್ಲ ,”ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂಬರುವ ಲೋಕಸಬೆ ಚುನಾವಣೆ ವೇಳೆ ನಟ ಅಂಬರೀಶ್‌ ಅವರ ಪತ್ನಿ ಸುಮಲತಾ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಕೊಡಲಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ”ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಕುರಿತು ಜೆಡಿಎಸ್‌ ಮತ್ತು ಕಾಂಗ್ರೆಸ್‌ನಲ್ಲೇ ಗೊಂದಲವಿದೆ. ಸುಮಲತಾ ಅವರು ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂಬ ಬಗ್ಗೆ ನಿರ್ಧಾರ ಮಾಡಿಲ್ಲ. ರಾಜಕಾರಣದಲ್ಲಿ ಯಾವುದೂ ನಿಂತ ನೀರಲ್ಲ. ಮಂಡ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಸಮರ್ಥ ಅಭ್ಯರ್ಥಿ ಬೇಕು. ಚುನಾವಣೆ ಬಂದಾಗ ಪಕ್ಷ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ,” ಎಂದು ಅಶೋಕ್‌ ತಿಳಿಸಿದರು.

Comments are closed.