ಕರ್ನಾಟಕ

ಬಿಡದಿ ಬಳಿಯ ಈಗಲ್​​ಟನ್​ ರೆಸಾರ್ಟ್​ನಲ್ಲಿ ಶಾಸಕರ ನಡುವೆ ಹೊಡೆದಾಟ, ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯ?

Pinterest LinkedIn Tumblr


ಬಿಡದಿ(ರಾಮನಗರ): ಕಾಂಗ್ರೆಸ್​ ಶಾಸಕರು ತಂಗಿರುವ ಬಿಡದಿ ಬಳಿಯ ಈಗಲ್​​ಟನ್​ ರೆಸಾರ್ಟ್​ನಲ್ಲಿ ಶನಿವಾರ ರಾತ್ರಿ ಕೆಲವು ನಾಟಕೀಯ ಬೆಳವಣಿಗೆಗಳು ನಡೆದಿವೆ ಎಂದು ಗೊತ್ತಾಗಿದೆ.

ಕೆಲ ಕಾಂಗ್ರೆಸ್​ ಶಾಸಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಹಲವು ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬಲ್ಲ ಮೂಲಗಳು ಮಾಹಿತಿ ನೀಡಿವೆ.

ಆಪರೇಷನ್​ ಕಮಲ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಬಳ್ಳಾರಿಯ ಶಾಸಕರಾದ ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಆನಂದ್ ಸಿಂಗ್ ಅವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಹೇಳಲಾಗುತ್ತಿದೆ.

ಸಿಎಂ ರಾಜೀನಾಮೆಗೆ ಒತ್ತಾಯ?
ಇದೇ ಸಭೆಯಲ್ಲೇ, ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಗೆ ಕೆಲವು ಶಾಸಕರು ಒತ್ತಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರ ಎದುರೇ ಶಾಸಕರು ಈ ಆಗ್ರಹ ಮಾಡಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಹೊಡೆದಾಟಕ್ಕೆ ಡಿಕೆಶಿ ಸ್ಪಷ್ಟನೆ
ಇನ್ನು ಶಾಸಕರ ಹೊಡೆದಾಟದ ಕುರಿತು ಸಷ್ಟನೆ ನೀಡಿರುವ ಸಚಿವ ಡಿ.ಕೆ.ಶಿವಕುಮಾರ್ ಅವರಿಬ್ಬರ ನಡುವೆ ಯಾವ ಗಲಾಟೆ ನಡೆದಿಲ್ಲ. ಆನಂದ್​ಸಿಂಗ್, ಗಣೇಶ್ ಇಬ್ಬರೂ ರೂಮ್​ನಲ್ಲಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಅವರೇ ಬಂದು ಮಾತನಾಡುತ್ತಾರೆ. ಬಳ್ಳಾರಿಗೆ ಸಿಗಬೇಕಾದ ಅನುದಾನದ ಬಗ್ಗೆ ಚರ್ಚೆಯಾಗಿದೆ. ಇಂದು ಶಾಸಕರ ಜತೆ ವೇಣುಗೋಪಾಲ್ ಸಭೆ ನಡೆಸಲಿದ್ದಾರೆ. ಶಾಸಕರು ಅವರ ಕ್ಷೇತ್ರಕ್ಕೆ ತೆರಳುವ ಬಗ್ಗೆ ಶೀಘ್ರದಲ್ಲೇ ತೀರ್ಮಾನಿಸಲಾಗುವುದು ಎಂದು ಹೇಳಿದರು.

Comments are closed.