ಕರ್ನಾಟಕ

ಅನಾಥ ಮಗುವಿಗೆ ಎದೆ ಹಾಲುಣಿಸಿದ ಮಹಿಳಾ ಪೇದೆ

Pinterest LinkedIn Tumblr


ಬೆಂಗಳೂರು: ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಅನಾಥ ಮಗುವಿಗೆ ಎದೆ ಹಾಲುಣಿಸುವ ಮೂಲಕ ಮಹಿಳಾ ಪೊಲೀಸ್ ಪೇದೆ ಹೃದಯ ವೈಶಾಲ್ಯತೆ ಮೆರೆದಿದ್ದಾಳೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಸಂಗೀತ ಹಳಿಮನಿ ಮಹಿಳಾ ಪೇದೆಯಾಗಿದ್ದು ಹಸುಳೆಗೆ ಎದೆಹಾಲುಣಿಸಿದ ಮಹಾನ್ ತಾಯಿ

ನಿನ್ನೆ ಸಂಜೆ ಯಲಹಂಕದ ಜಿಕೆವಿಕೆ ಉದ್ಯಾನವನದ ಬಳಿ ಆಗ ತಾನೇ ಜನಿಸಿದ ಮಗುವನ್ನ ಯಾರೋ ಕಸದ ತೊಟ್ಟಿಗೆ ಎಸೆದಿದ್ದಾರೆ. ಆ ಅನಾಥ ಕಂದಮ್ಮ ಹಸಿವು ತಾಳಲಾರದೆ ಚೀರಾಡತೊಡಗಿದೆ. ಹಸು ಕಂದಮ್ಮ ಅಳುವಿನ ಆರ್ಥನಾದ ಕೇಳಿದ ಅಲ್ಲೆ ಇದ್ದ ಸಿವಿಲ್ ಡಿಫೆನ್ಸ್ ಕಾರ್ಯಕರ್ತರು ಮಗುವನ್ನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹಾಲು ಗ್ಲೂಕೋಸ್ ಇಲ್ಲದೆ ಆ ಮುಗ್ಧ ಕಂದಮ್ಮನ ಅಳುವಿಗೆ ಸ್ಥಳದಲ್ಲೇ ಇದ್ದ ಸಂಗೀತಾ ಮನ ಮಿಡಿದಿದೆ. ಕೂಡಲೇ ಆ ಹಸುಳೆಗೆ ಈ ಮಹಾನ್ ತಾಯಿ ತನ್ನ ಎದೆಹಾಲನ್ನ ಧಾರೆ ಎರೆದು ತಾಯ್ತನವನ್ನ ತೋರ್ಪಡಿಸಿದ್ದಾರೆ

ಸದ್ಯ ಮಗುವನ್ನ ಪೊಲೀಸರು ವಾಣಿವಿಲಾಸ ಅಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಯಲಹಂಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮಗುವಿನ ಪೋಷಕರಿಗೆ ಹುಡುಕಾಟ ನಡೆಸಿದ್ದಾರೆ.

ಇದೇ ರೀತಿ ಆರು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡತೊಗೂರಿನ ತೊಟ್ಟಿ ಬಳಿ ಎಸೆದಿದ್ದ ಅನಾಥ ಮಗುವಿಗೆ ಮಹಿಳಾ ಪೇದೆಯೊಬ್ಬರು ಎದೆ ಹಾಲುಣಿಸಿ ಮಾನವೀಯತೆ ಮೆರೆದಿದ್ದರು. ಅನಾಥ ಮಗುವಿಗೆ ಹೊಯ್ಸಳ ವಾಹನದಲ್ಲಿದ್ದ ಪೇದೆ ಅರ್ಚನಾ ಠಾಣೆಗೆ ತಂದು, ಮಗುವಿನ ಅಳು ನೋಡಲಾರದೇ ಹಾಲುಣಿಸಿದ್ದಾರೆ. ಹೆರಿಗೆ ರಜೆ ಮುಗಿಸಿ ವಾರದ ಹಿಂದಷ್ಟೇ ಠಾಣೆಗೆ ಬಂದಿದ್ದ ಅರ್ಚನಾ, ಅನಾಥ ಮಗುವಿಗೆ ಹಾಲುಣಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ಅನಾಥ ಗಂಡು ಮಗುವಿಗೆ ಪೊಲೀಸರೆಲ್ಲ ಸೇರಿ ಕುಮಾರಸ್ವಾಮಿ ಎಂದು ನಾಮಕರಣ ಮಾಡಿದ್ದರು.

ಇನ್ನೂ ಈ ಬಗ್ಗೆ ನ್ಯೂಸ್ 18 ಕನ್ಜಡದ ಜೊತೆ ಮಾತನಾಡಿದ ಪೇದೆ ಸಂಗೀತಾ, ಒಂದು ದಿನದ ಮಟ್ಟಿಗೆ ಅನಾಥ ಮಗುವಿಗೆ ತಾಯಿ ಆಗಿರುವುದು ಖುಷಿಯಾಗಿದೆ. ಮಗುವಿಗೆ ಆಸ್ಪತ್ರೆಯಲ್ಲಿ ವೈದ್ಯರು ಗ್ಲೂಕೋಸ್ ಹಾಕುತ್ತಿದ್ದರು. ಅದನ್ನು ನೋಡಿದ ನಾನು ಕೂಡ ಒಂದು ಮಗುವಿನ ತಾಯಿ ಎಂದು ಮಗುವಿಗೆ ನಾನು ಹಾಲುಣಿಸಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

ಪೇದೆ ಸಂಗೀತಾ ಕಳೆದ ಮೂರು ವರ್ಷದಿಂದ ಯಲಹಂಕ ಪೊಲೀಸ್ ಠಾಣೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Comments are closed.