ಕರ್ನಾಟಕ

ಬಿಜೆಪಿಯ ಐವರು ಶಾಸಕರಿಗೆ ಕಾಂಗ್ರೆಸ್​ ಗಾಳ; ಹೆಚ್ಚು ಕಡಿಮೆಯಾದರೂ ಇಂದು ಕಾಂಗ್ರೆಸ್​ ಸೇರ್ಪಡೆ?

Pinterest LinkedIn Tumblr


ರಾಜ್ಯ ರಾಜಕಾರಣದಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿವೆ. ಬಿಜೆಪಿ ಶಾಸಕರ ದೆಹಲಿ ಸಭೆ, ಕಾಂಗ್ರೆಸ್​ ಅತೃಪ್ತರ ಮುಂಬೈ ಪ್ರವಾಸ ಹಾಗೂ ಉಪಾಹಾರ ಕೂಟದ ನೆಪದಲ್ಲಿ ಕಾಂಗ್ರೆಸ್ ನಾಯಕರ ಸಭೆ ಎಲ್ಲವನ್ನೂ ಗಮನಿಸಿದರೆ ಸಂಕ್ರಾಂತಿ ಸಂಭ್ರಮದ ಸಮಯದಲ್ಲಿ ಕ್ರಾಂತಿ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ, ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಮಾಹಿತಿ ದೋಸ್ತಿ ನಾಯಕರಿಗೂ ಇದ್ದರೂ, ಸರ್ಕಾರ ಮಾತ್ರ ಸೇಫ್​ ಎಂಬ ಭಾವದಲ್ಲಿ ನಿರಾಳರಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅತೃಪ್ತ ಶಾಸಕರು ಬಿಜೆಪಿ ಸೇರಿದರೆ, ಬಿಜೆಪಿಯ ಐವರು ಶಾಸಕರಿಗೆ ಕಾಂಗ್ರೆಸ್​ ಗಾಳ ಹಾಕಿದೆ ಎನ್ನಲಾಗಿದೆ.

ಬಿಜೆಪಿಯವರು ಕಾಂಗ್ರೆಸ್​ ಅತೃಪ್ತ ಶಾಸಕರ ಸಂಪರ್ಕ ಸಾಧಿಸಿದ್ದರೆ, ಕಾಂಗ್ರೆಸ್, ಬಿಜೆಪಿಯ ಐವರು ಶಾಸಕರ ಸಂಪರ್ಕ ಹೊಂದಿದೆ. ಒಂದು ವೇಳೆ ಕಾಂಗ್ರೆಸ್​ನ ಅತೃಪ್ತರು ರಾಜೀನಾಮೆ ನೀಡಿ, ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ನಡೆಸಿದರೆ, ನಾಳೆಯೇ ಬಿಜೆಪಿಯ ಐವರು ಶಾಸಕರನ್ನು ಕಾಂಗ್ರೆಸ್​ಗೆ ಸೇರಿಸಿಕೊಂಡು, ಬಹುಮತ ಸಾಬೀತಿಗೆ ಬೇಕಾದ ನಂಬರ್ ಸಿಗದಂತೆ ಮಾಡಬೇಕಾಗುತ್ತದೆ ಎಂದು ಎಐಸಿಸಿ ಉನ್ನತ ಮೂಲಗಳು ತಿಳಿಸಿವೆ.

ಆಪರೇಷನ್ ಕಮಲ ಬಗ್ಗೆ ಮಂಡ್ಯದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಆಪರೇಷನ್​ ಕಮಲ ನಡೆಯುತ್ತಿರುವುದು ನಿಜ. ನನಗೆ ಈ ಬಗ್ಗೆ ಎಲ್ಲಾ ಗೊತ್ತಿದೆ. ಯಾರೆಲ್ಲರನ್ನು ಸಂಪರ್ಕಿಸಿದ್ದಾರೆಂಬುದು ಗೊತ್ತಿದೆ. ಯಾವ ಶಾಸಕರಿಗೆ ಯಾವೆಲ್ಲಾ ಉಡುಗೊರೆ ಆಮಿಷ ಒಡ್ಡಿದ್ದಾರೆ ಎಂಬುದು ತಿಳಿದಿದೆ. ಎಲ್ಲವನ್ನು ನಾನು ಗಮನಿಸುತ್ತಿದ್ದೇನೆ. ಆದರೆ ಆ ಯಾವ ಯತ್ನವೂ ಸಫಲವಾಗುವುದಿಲ್ಲ ಎಂದು ವಿಶ್ವಾಸ ನಮಗಿದೆ. ಸರ್ಕಾರ ಬೀಳುವ ರೀತಿ ಇದಿದ್ದರೆ ನಾನೂ‌ ಇಷ್ಟು ಕೂಲಾಗಿ ಇರುತ್ತಿದ್ದೇನಾ. ಸರ್ಕಾರ ಸುಭದ್ರವಾಗಿದೆ. ಯಾವುದೇ ಆತಂಕವಿಲ್ಲ. ಈ ಬಗ್ಗೆ ಜನರಲ್ಲಿಯೂ ಗೊಂದಲ ಬೇಡ ಎಂದು ಹೇಳಿದ್ದಾರೆ.

ಇನ್ನು ಬಿಜೆಪಿ ಸಂಕ್ರಾಂತಿ ಡೆಡ್ ಲೈನ್ ವಿಚಾರವಾಗಿ ಮಾತನಾಡಿರುವ ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು, ಪಾಪ ಅವರು ಪ್ರತಿ ಸಲ ಇದನ್ನೇ ಹೇಳ್ತಾ ಹೋಗ್ತಿದ್ದಾರೆ. ಹೀಗೆ ಹೇಳಿ ನಾಲ್ಕೈ ದು ತಿಂಗಳೇ ಆಗಿದೆ. ಸಂಕ್ರಾಂತಿಗೆ ಕ್ರಾಂತಿಯೇನು ಆಗಲ್ಲ. ಬಿಜೆಪಿಯವರು ಸಂಕ್ರಾಂತಿ ಹಬ್ಬ ಮಾಡ್ತಾರೆ. ಅವರ ಮನೆಯಲ್ಲಿ ಹಬ್ಬ ಮಾಡಬಹುದು. ಆದರೆ ಅವರು ಹೇಳುವಂತೆ ಯಾವುದೇ ಕ್ರಾಂತಿ ಆಗುವುದಿಲ್ಲ. ಯಾರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ. ತತ್ವ,ನೀತಿಗೆ ಅನುಗುಣವಾಗಿ ಸರ್ಕಾರ ನಡೆಯುತ್ತಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಅದೆಲ್ಲವನ್ನೂ ರಾಜ್ಯದ ನಾಯಕರು ಬಗೆಹರಿಸುತ್ತಾರೆ. ಬಿಜೆಪಿ ಪಕ್ಷದಲ್ಲೇ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮೊದಲು ಅವರು ಅದನ್ನು ಸರಿಪಡಿಸಿಕೊಳ್ಳಲಿ ಎಂದು ಬಿಜೆಪಿ ನಾಯಕರಿಗೆ ಖರ್ಗೆ ಟಾಂಗ್ ಕೊಟ್ಟರು.

ಇನ್ನು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಪಾಲ್ಗೊಂಡು ನಂತರ ಪ್ರತಿಕ್ರಿಯಿಸಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಆಪರೇಶನ್​ಗೆ ಅವಕಾಶ ಬೇಡ. ದೋಸ್ತಿ ಸರ್ಕಾರದ ರಕ್ಷಣೆಗೆ ಎಲ್ಲರೂ ಬದ್ಧರಾಗಿರಬೇಕು. ಲೋಕಸಭೆ ಚುನಾವಣೆಯೇ ನಮಗೆ ಪ್ರಮುಖ. ಆವರೆಗೂ ಹೆಚ್ಚು ಅಲರ್ಟ್ ಆಗಿರೋದು ಉತ್ತಮ. ನಿಮ್ಮ ನಿಮ್ಮ ಜಿಲ್ಲೆಯ ಶಾಸಕರ ರಕ್ಷಣೆ ಹೊಣೆ ನಿಮ್ಮದು ಎಂದು ಅವರಿಗೆ ಸೂಚನೆ ನೀಡಿದ್ದಾರೆ. ಮೂವರು ಕಾಂಗ್ರೆಸ್​ ಶಾಸಕರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದು, ಅಪರೇಷನ್​ ಕಮಲಕ್ಕೆ ಬಿಜೆಪಿ ಸಿದ್ದವಾಗಿದೆ ಎಂದು ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ತಿಳಿಸಿದ್ದರು. ಇನ್ನು ಈ ಕುರಿತು ಗುಪ್ತಚಾರ ಇಲಾಖೆ ಕೂಡ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ

Comments are closed.