ಮಂಡ್ಯ: ಅಂಬರೀಷ್ ಅವರ ಪುಣ್ಯ ಸ್ಮರಣೆ ಹಾಗೂ ಶ್ರದ್ಧಾಂಜಲಿ ಅರ್ಪಿಸಲು ಶನಿವಾರ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ ಸಕ್ಕರೆ ನಗರಿಯಲ್ಲಿ ‘ಅಂಬಿ ನುಡಿ ನಮನ’ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ರಾಜಕೀಯ ಗಣ್ಯರು ಸೇರಿದಂತೆ ಚಲನಚಿತ್ರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಆದರೆ, ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಅವರ ಹಾಗೂ ದೇವೇಗೌಡರ ಗೈರು ಎದ್ದುಕಾಣುತ್ತಿತ್ತು. ಅವರ ಈ ನಡೆ ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಂಬರೀಶ್ ನಿಧನವಾದಾಗ ಅವರಿಗೆ ಸರ್ಕಾರದ ಸಕಲ ಗೌರವ ನೀಡಿ, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಕುಮಾರಸ್ವಾಮಿ ಇಂದು ಅಂಬರೀಶ್ ತವರು ಕ್ಷೇತ್ರದಲ್ಲಿ ನಡೆದ ಅಂಬಿ ಸ್ಮರಣೆಯ ಕಾರ್ಯಕ್ರಮಕ್ಕೆ ಗೈರಾಗಿರುವುದರಿಂದ ಹಿಂದೆ ರಾಜಕೀಯ ಲೆಕ್ಕಾಚಾರದ ಮಾತುಗಳು ಕೇಳಿ ಬರುತ್ತಿವೆ.
ಅಂಬರೀಷ್ ನಿಧನದಿಂದ ತೆರವಾಗಿರುವ ಮಂಡ್ಯ ನಾಯಕರ ಪಟ್ಟಕ್ಕೆ ಈಗಾಗಲೇ ಪೈಪೋಟಿ ಆರಂಭವಾಗಿದೆ. ಅಂಬರೀಷ್ ಮಗನೆ ಇಲ್ಲಿನ ಜನರ ನಾಯಕ. ಅಭಿಷೇಕ್ ರಾಜಕೀಯಕ್ಕೆ ಇಳಿಯಬೇಕು ನಾವು ಅವರ ಬೆನ್ನಿಗೆ ನಿಂತಿದ್ಧೇವೆ ಎಂದು ಇಲ್ಲಿನ ಜನರು ಈಗಾಗಲೇ ಬಹಿರಂಗವಾಗಿ ತಿಳಿಸಿದ್ದಾರೆ. ಅಲ್ಲದೇ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಕೂಡ ನಡೆಯುತ್ತಿದೆ. ಅಭಿಷೇಕ್ಗೆ ತೋರುತ್ತಿರುವ ಪ್ರೀತಿ ಈಗ ಜೆಡಿಎಸ್ ದಳಪತಿಗಳಲ್ಲಿ ಸಣ್ಣ ಕಂಪನವನ್ನು ಮೂಡಿಸಿದೆ.
ಮೊಮ್ಮಗನಿಗಾಗಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಜೆಡಿಎಸ್ ವರಿಷ್ಠ ದೇವೇಗೌಡ ಹಳೇ ಮೈಸೂರು ಭಾಗದಲ್ಲಿ ಹಿಡಿತವನ್ನು ಮತ್ತೊಮ್ಮೆ ಸಾಧಿಸಲು ಮಂಡ್ಯದಿಂದ ಕಣಕ್ಕೆ ಇಳಿಯುವ ಆಲೋಚನೆ ಮಾಡಿದ್ದಾರೆ. ಅಲ್ಲದೇ ಜೆಡಿಎಸ್ ನಾಯಕರು ಕೂಡ ಇಲ್ಲಿಂದ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸುವಂತೆ ಒತ್ತಾಯ ಹೇರುತ್ತಿದ್ದಾರೆ. ಒಂದು ವೇಳೆ ಅಭಿಷೇಕ್ ರಾಜಕೀಯವನ್ನು ಆಯ್ಕೆ ಮಾಡಿಕೊಂಡರೆ ಇದು ದೇವೇಗೌಡರ ರಾಜಕಾರಣಕ್ಕೆ ಭಾರೀ ಪೆಟ್ಟು ಬೀಳಲಿದೆ. ಇದರಿಂದಲೇ ಮುಖ್ಯಮಂತ್ರಿಗಳು ಹಾಗೂ ಮಾಜಿ ಪ್ರಧಾನಿಗಳು ಉದ್ದೇಶಪೂರ್ವಕವಾಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ನಾಯಕರ ಈ ಕಾರ್ಯವೈಖರಿ ಅರಿತ ಸುಮಲತಾ ಅಂಬರೀಷ್ ಕಾರ್ಯಕ್ರಮದಲ್ಲಿಯೇ ಈ ಬಗ್ಗೆ ತಿರುಗೇಟು ನೀಡಿದ್ದಾರೆ. ಯಾರು ಬರಲಿ, ಬಾರದಿರಲಿ ಮಂಡ್ಯ ಜನ ನಮ್ಮ ಜೊತೆ ಇದ್ದಾರೆ. ಅಷ್ಟೇ ಸಾಕು ಎಂದಿದ್ದಾರೆ.
ಇನ್ನು ತಮ್ಮ ತಂದೆ ಹಾಗೂ ಮಂಡ್ಯ ಜನರ ಬಗ್ಗೆ ಮಾತನಾಡಿದ ಅಭಿಷೇಕ್, ತಂದೆ ದಾರಿಯಲ್ಲೇ ನಡೆದರೆ, ಇಡೀ ಮಂಡ್ಯ ಜನ ನಮ್ಮ ಬೆನ್ನಿಗೆ ನಿಲ್ಲುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
Comments are closed.