ಕರ್ನಾಟಕ

ಮಾರಮ್ಮನ ಪ್ರಸಾದಕ್ಕೆ 50ಕ್ಕೂ ಹೆಚ್ಚು ಪಕ್ಷಿಗಳು ಕೂಡ ಬಲಿ!

Pinterest LinkedIn Tumblr


ಚಾಮರಾಜನಗರ: ಮನುಷ್ಯ ತನಗೆ ಆಗುವ ನೋವನ್ನು ವ್ಯಕ್ತಪಡಿಸಿ ಚಿಕಿತ್ಸೆ ಪಡೆಯುತ್ತಾನೆ. ಆದರೆ ಪಕ್ಷಿಗಳು ಹಾಗೂ ಪ್ರಾಣಿಗಳು ಮೂಕ ವೇದನೆಯಲ್ಲಿಯೇ ಪ್ರಾಣ ಬಿಡುತ್ತವೆ. ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಘಟನೆ ಇದಕ್ಕೆ ಸಾಕ್ಷಿಯಾಗಿದೆ.

ವಿಷ ಬೆರೆಸಿದ್ದ ಆಹಾರ ಸೇವನೆ ಮಾಡಿದ್ದ 80ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ವಿಷಯುಕ್ತ ಆಹಾರ ಸೇವಿಸಿದ ಪಕ್ಷಿಗಳ ಸಾವಿನ ಸಂಖ್ಯೆ 50ರ ಗಡಿ ದಾಟುತ್ತಿದೆ. ಅವುಗಳು ನರಳಿ ನರಳಿ ಪ್ರಾಣಬಿಟ್ಟ ದೃಶ್ಯ ಮನಕಲಕುವಂತಿದೆ.

ರಾಸಾಯನಿಕ ಅಥವಾ ಕ್ರಿಮಿನಾಶಕದ ವಾಸನೆ ಬಂದಿದ್ದರಿಂದ ಕೆಲವರು ಅಲ್ಲಿಯೇ ಪ್ರಸಾದ (ರೈಸ್‍ಬಾತ್) ಬೀಸಾಡಿದ್ದಾರೆ. ಪರಿಣಾಮ ಅದನ್ನು ತಿಂದ ಪಕ್ಷಿಗಳು ಕೂಡ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟಿವೆ. ಕಾಗೆ, ಗೊರವಂಕಗಳು ಸೇರಿದಂತೆ ವಿವಿಧ ಪಕ್ಷಿಗಳ ಸಾವಿನ ಸಂಖ್ಯೆ 50ರ ಗಡಿ ದಾಟುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅನೇಕ ಪಕ್ಷಿಗಳು ದೇವಸ್ಥಾನ ಹೊರಗಿನ ಆವರಣದಲ್ಲಿ, ಮರದ ಕೆಳಗೆ, ಪೊದೆಯ ಒಳಗೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಬಿದ್ದು ಪ್ರಾಣ ಬಿಟ್ಟಿವೆ. ಪ್ರಸಾದದಲ್ಲಿ ವಿಷ ಬೆರೆಸಿರುವುದು ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪಕ್ಷಿಗಳು ತಟ್ಟಿದೆ. ಪಕ್ಷಿಗಳ ಸಾವಿನ ಸಂಖ್ಯೆ ಹೆಚ್ಚುವುದಕ್ಕೂ ಮುನ್ನ ದೇವಸ್ಥಾನದ ಸುತ್ತಲೂ ಬಿದ್ದಿರುವ ವಿಷಯುಕ್ತ ಆಹಾರವನ್ನು ತೆರವು ಮಾಡುವ ಕೆಲಸ ಆಗಬೇಕಾಗಿದೆ.

ವಿಷ ಬೆರೆಸಿದ್ದ ಆಹಾರವನ್ನು ತೆಗೆದು ಹಾಕದೇ ಇದ್ದರೆ ಮತ್ತಷ್ಟು ಪಕ್ಷಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆಗಳಿದೆ. ಹೀಗಾಗಿ ಸ್ಥಳೀಯ ಆಡಳಿತಾಧಿಕಾರಿಗಳು, ನಾಯಕರು ದೇವಸ್ಥಾನದ ಸುತ್ತಮುತ್ತ ಬಿದ್ದಿರುವ ವಿಷಯುಕ್ತ ಆಹಾರವನ್ನು ತೆಗೆದು ಹಾಕಲು ಮುಂದಾಗಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

Comments are closed.