ಕರ್ನಾಟಕ

1 ಲಕ್ಷ ರೂ.ನಲ್ಲಿ ಯಶ್ ಮಗಳ ತೊಟ್ಟಿಲು ಸಿದ್ಧತೆ

Pinterest LinkedIn Tumblr


ಬೆಳಗಾವಿ: ರೆಬಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಆಸೆಯಂತೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಅವರ ಮಗಳಿಗೆ ಉಡುಗೊರೆ ನೀಡುವ ತೊಟ್ಟಿಲು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ತಯಾರಾಗುತ್ತಿದೆ.

ಅಂಬರೀಶ್ ಅವರು ಯಶ್, ರಾಧಿಕಾ ಮಗುವಿಗಾಗಿ ಸ್ವತಃ ಫೋನ್ ಮಾಡಿ ತೊಟ್ಟಿಲು ಆರ್ಡರ್ ಮಾಡಿದ್ದರು. ತೊಟ್ಟಿಲು ತಯಾರಿಸಿ ಕೊಡುವಂತೆ ಬೆಳಗಾವಿ ಮೂಲದ ನಾರಾಯಣ್ ಕಲಾಲ ಅವರ ಜೊತೆ ಅಂಬಿ ಮಾತನಾಡಿದ್ದರು. ನಾರಾಯಣ್ ಕಲಾಲ ಅವರು ಕಲಘಟಗಿಯ ಮೂಲದ ಶ್ರೀಧರ್ ಸಾವುಕಾರ್ ಅವರಲ್ಲಿ ತೊಟ್ಟಿಲಿಗೆ ಆರ್ಡರ್ ಮಾಡಿದ್ದರು. ಆದರೆ ಶ್ರೀಧರ್ ಅವರಿಗೆ ಈ ವಿಷಯ ಗೊತ್ತಿರಲಿಲ್ಲ. ಅಂಬಿ ನಿಧನದ ಬಳಿಕ ಈ ವಿಷಯ ಗೊತ್ತಾಗಿದೆ.

ಈ ಬಗ್ಗೆ ನಾರಾಯಣ್ ಕಲಾಲ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಅಂಬರೀಶ್ ನಿಧನರಾಗುವ 8-9 ದಿನಗಳ ಹಿಂದೆ ಅವರು ನನ್ನ ಬಳಿ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿಯಲ್ಲಿ ತೊಟ್ಟಿಲು ಮಾಡುತ್ತಾರಂತೆ ಅದು ಎಲ್ಲೋ ಎಂದು ಕೇಳಿದರು. ನನಗೂ ಇದರ ಬಗ್ಗೆ ವಿಶೇಷವಾಗಿ ಏನೂ ಗೊತ್ತಿರಲಿಲ್ಲ. ಹೌದು ಎಂದು ಹೇಳಿ ಬಳಿಕ ಬೇರೆಯವರ ಬಗ್ಗೆ ಕೇಳಿಕೊಳ್ಳೊಣ ಎಂದುಕೊಂಡೆ. ಆಗ ಅವರು ಯಶ್- ರಾಧಿಕಾಗೆ ಮಗು ಆಗುತ್ತೆ. ಹಾಗಾಗಿ ನಾನು ಒಂದು ತೊಟ್ಟಿಲು ಮಾಡಿಸಬೇಕು ಎಂದು ಹೇಳಿದರು. ನಾನು ಸರಿ ಅಣ್ಣ ಎಂದು ಹೇಳಿದೆ. ನಾನು ಕಲಘಟಗಿಯಲ್ಲಿ ತೊಟ್ಟಿಲಿನ ವಿಷಯದ ಬಗ್ಗೆ ಕೇಳಿಕೊಂಡು ಅವರಿಗೆ ಕರೆ ಮಾಡಿದ್ದಾಗ ಆರ್ಡರ್ ಮಾಡು ಎಂದು ಹೇಳಿದರು.

ಹೆಣ್ಣು ಮಕ್ಕಳಿಗೆ ಮೊದಲ ಮಗುವಾದಾಗ ತವರು ಮನೆಯವರು ತೊಟ್ಟಿಲು ನೀಡುವ ಸಂಪ್ರದಾಯವಿದೆ. ಇದು ಅಂಬರೀಶ್ ಅವರಿಗೂ ಗೊತ್ತು. ಕೆಲವರ ಮನೆಯಲ್ಲಿ ಈ ಸಂಪ್ರದಾಯವಿರುತ್ತದೆ. ಕೆಲವರ ಮನೆಯಲ್ಲಿ ಇರುವುದಿಲ್ಲ. ಯಾರೋ ಕಲಘಟಗಿಯ ತೊಟ್ಟಿಲು ಬಗ್ಗೆ ಅಂಬರೀಶ್ ಅವರಲ್ಲಿ ಹೇಳಿದ್ದರಿಂದ ನಾನು ಅಲ್ಲಿ ಹೋಗಿ ವಿಚಾರಿಸಿದೆ. ಅಲ್ಲಿನ ತೊಟ್ಟಿಲಿಗೆ 600 ವರ್ಷಗಳ ಇತಿಹಾಸವಿದೆ ಎಂಬುದು ತಿಳಿಯಿತು. ಕಲಘಟಗಿಯಲ್ಲಿ ತೊಟ್ಟಿಲು ಮಾಡಬೇಕಾದರೆ ಅವರು ಧಾರ್ಮಿಕವಾಗಿ ಮಾಡುತ್ತಾರೆ. ತೊಟ್ಟಲಿನಲ್ಲಿ ಕಥೆಗಳಲ್ಲಿ ಬರುವ ಮುದ್ದು ಕೃಷ್ಣ ಆಟ, ಲೀಲೆಗಳನ್ನು ವಿವರಿಸುವ ಚಿತ್ರಗಳನ್ನು ಬಿಡಿಸಲಾಗುತ್ತದೆ. ಆ ಬಣ್ಣಕ್ಕೆ 100 ವರ್ಷ ಗ್ಯಾರೆಂಟಿ ಇರುತ್ತದೆ. ತೊಟ್ಟಿಲಿಗೆ ಬಣ್ಣ ಹಚ್ಚುವಾಗ ಅವರು ಸಾಧಾರಣ ಬಣ್ಣ ಹಚ್ಚುವುದಿಲ್ಲ. ಗಿಡಮೂಲಿಕೆ ಬಣ್ಣಗಳನ್ನು ತೊಟ್ಟಿಲಿಗೆ ಲೇಪನ ಮಾಡುತ್ತಾರೆ ಎಂದು ತಿಳಿಸಿದರು.

ಈ ತೊಟ್ಟಿಲಿಗೆ ಸುಮಾರು 1 ಲಕ್ಷ ರೂ.ವಿರುತ್ತದೆ. ದರವನ್ನು ಕೇಳಿ ಯಶ್ ನೀವು ಹಣ ತೆಗೆದುಕೊಳ್ಳಬೇಕು ಎಂದು ಹೇಳಿದರು. ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಇದು ಅಂಬಿ ಅಣ್ಣನ ಆಸೆ. ಹಣದ ಬಗ್ಗೆ ನಾನು ಅಣ್ಣ ಮಾತನಾಡಿಲ್ಲ. ನೀವು ಹಣ ತೆಗೆದುಕೊಂಡಿಲ್ಲ ಅಂದರೆ ನನಗೆ ಮುಜುಗರ ಆಗುತ್ತೆ ಎಂದು ಯಶ್ ಹೇಳಿದರು. ಇದು ಅಣ್ಣ ಕೊಡುತ್ತಿರುವುದು. ಹಾಗಾಗಿ ದುಡ್ಡಿನ ವಿಚಾರವನ್ನು ಈ ವಿಷಯದಲ್ಲಿ ತರಬೇಡಿ ಎಂಂದು ತಿಳಿಸಿದೆ.

ರಾಧಿಕಾ ಅವರ ಡೆಲಿವರಿ 9 ಅಥವಾ 10 ರಂದು ಆಗುತ್ತದೆ ಎಂದು ಯಶ್ ಪಿಎ ತಿಳಿಸಿದ್ದರು. ಈ ತೊಟ್ಟಿಲನ್ನು ಡಿಸೆಂಬರ್ 26 ರಂದು ಯಶ್ ಅವರಿಗೆ ನೀಡಬೇಕಿತ್ತು. ಆದರೆ ಡೆಲಿವರಿ ಡೇಟ್ ಮೊದಲೇ ರಾಧಿಕಾ ಅವರಿಗೆ ಮಗು ಆಗಿದ್ದ ಕಾರಣ 20ರ ಒಳಗಡೆ ತೊಟ್ಟಿಲು ನೀಡಬೇಕಿದೆ. ಹೀಗಾಗಿ ಈಗ ಹಗಲು ರಾತ್ರಿ ಎನ್ನದೇ ತೊಟ್ಟಿಲಿನ ಕೆಲಸ ನಡೆಯುತ್ತಿದೆ ಎಂದು ನಾರಾಯಣ್ ಕಲಾಲ ಪಬ್ಲಿಕ್ ಟಿವಿಗೆ ತಿಳಿಸಿದರು.

Comments are closed.