ಕರ್ನಾಟಕ

ಪ್ರಿಯಕರನ ಕಂಡು ಹಸೆಮಣೆ ಬಿಟ್ಟ ವಧು; ಎಲ್ಲೂ ತಾಳಿ ಕಟ್ಟಿಸಿಕೊಳ್ಳದ ಯುವತಿ

Pinterest LinkedIn Tumblr


ನೆಲಮಂಗಲ: ರಿಸಪ್ಷನ್​ನಲ್ಲಿ ಮಧುಮಗಳು ನಗುಮೊಗದಿಂದಲೇ, ಸಂತೋಷದಿಂದಲೇ ಮದುಮಗನ ಜೊತೆ ನಿಲ್ಲುತ್ತಾಳೆ…. ಮರುದಿನ ತಾಳಿ ಕಟ್ಟುವ ವೇಳೆಗೆ ಸರಿಯಾಗಿ ಬೇರೊಬ್ಬ ಯುವಕನ ಎಂಟ್ರಿಯಾಗುತ್ತದೆ… ಅದು ಆ ಮದುಮಗಳ ಪ್ರಿಯಕರ… ಆತನ ಕಣ್ಸನ್ನೆಯಿಂದಲೇ ಮದುಮಗಳು ಹಸೆಮಣೆಯಿಂದ ಕೆಳಗಿಳಿಯುತ್ತಾಳೆ. ನೋಡನೋಡುತ್ತಲೇ ಮದುವೆ ನಿಂತು ಹೋಗುತ್ತದೆ. ಎರಡೂ ಕುಟುಂಬಗಳ ನಡುವೆ ಜೋರು ಜಗಳವಾಗುತ್ತದೆ… ಅದೇ ಹಸೆಮಣೆಯಲ್ಲಿ ಪ್ರಿಯಕರನೊಂದಿಗೆ ಆ ಯುವತಿ ವಿವಾಹವಾಗುತ್ತಾಳೆ ಎಂದು ನಿರೀಕ್ಷಿಸುವಷ್ಟರಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕುತ್ತದೆ….

ಇದ್ಯಾವುದೋ ಸಿನಿಮಾವೊಂದರ ಪ್ರಸಂಗವಲ್ಲ. ನೆಲಮಂಗಲದ ವಿಶ್ವಶಾಂತಿ ಸಮುದಾಯ ಭವನದಲ್ಲಿ ನೂರಾರು ಜನರ ಸಮ್ಮುಖದಲ್ಲಿ ನಡೆದ ನಾಟಕೀಯ ಘಟನೆಗಳು….. ನೆಲಮಂಗಲ ಸಮೀಪದ ನಂದಾರಾಮಯ್ಯನಪಾಳ್ಯ ನಿವಾಸಿ ರಂಗನಾಥ್ ಹಾಗೂ ಬೆಂಗಳೂರಿನಿಂದ ಕಾಮಾಕ್ಷಿಪಾಳ್ಯ ಯುವತಿ ಪದ್ಮಪ್ರಿಯ ಎಂಬುವರ ವಿವಾಹ ಇಲ್ಲಿ ನಡೆಯುತ್ತಿತ್ತು. ತಾಳಿ ಕಟ್ಟುವ ವೇಳೆಯಲ್ಲಿ ಪದ್ಮಪ್ರಿಯಾಳ ಪ್ರೀಯಕರ ಸಂಜು ಎದುರಿಗೆ ಬಂದಿದ್ದರಿಂದ ವಧು ತಾಳಿಕಟ್ಟಿಸಿಕೊಳ್ಳದೆ ಮದುವೆ ಮುರಿದು ಬಿದ್ದಿದೆ.

ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಎಂದು ಪ್ರೇಮಲೋಕದ ಸರದಾರ ರವಿಚಂದ್ರನ್ ಹೇಳಿದ್ದಾರೆ. ಸಂಜು ಹಾಗೂ ಪದ್ಮಪ್ರಿಯಾ ಇಬ್ಬರು ಹಲವು ವರ್ಷಗಳ ಹಿಂದೆ ಫೇಸ್​ಬುಕ್​ನಲ್ಲಿ ಪರಿಚಯವಾಗಿ ಪ್ರೀತಿ ಮಾಡುತ್ತಿರುತ್ತಾರೆ. ಈ ವಿಷಯ ತಿಳಿಯದ ಹುಡುಗಿಯ ಮನೆಯವರು ರಂಗನಾಥನ ಜೊತೆ ಮದುವೆ ನಿಶ್ಚಯಿಸುತ್ತಾರೆ. ಆರು ತಿಂಗಳ ಹಿಂದೆಯೇ ಇವರಿಬ್ಬರ ಮದುವೆ ನಿಶ್ಚಯವಾಗಿ ವರನ ಮನೆಯವರೇ ಲಕ್ಷಾಂತರ ರೂ ಖರ್ಚುಮಾಡಿ ಅದ್ದೂರಿಯಾಗಿ ಮದುವೆ ಆಯೋಜಿಸಿರುತ್ತಾರೆ. ಆದರೂ ಅವರಿಬ್ಬರ ಲವ್ ವಿಚಾರ ಎರಡೂ ಕುಟುಂಬಗಳಿಗೆ ತಿಳಿಯುವುದಿಲ್ಲ. ಯುವತಿ ಕೂಡ ಬಾಯಿ ಬಿಡದೆ ಏನೂ ಆಗಿಲ್ಲದವಳಂತೆ ಸುಮ್ಮನಿರುತ್ತಾಳೆ. ಮದುವೆ ಸಮಾರಂಭದ ನಿನ್ನೆಯ ಅರತಕ್ಷತೆಯಲ್ಲೂ ಪದ್ಮಪ್ರಿಯಾ ಸಂತಸದಿಂದಲೇ ಇರುತ್ತಾಳೆ. ಆದರೆ, ಇಂದು ಮುಂಜಾನೆ ಮುಹೂರ್ತ ವೇಳೆ ಸಂಬಂಧಿಕರಂತೆ ಕಲ್ಯಾಣ ಮಂಟಪಕ್ಕೆ ಬರುವ ಪ್ರೀಯಕರ ಸಂಜು, ತಾಳಿ ಕಟ್ಟುವ ವೇಳೆ ಸರಿಯಾಗಿ ಪ್ರೇಯಸಿಯ ಮುಂದೆ ಬಂದು ಸನ್ನೆ ಮಾಡುತ್ತಾನೆ. ಪದ್ಮಪ್ರಿಯಾ ಕೂಡಲೇ ತಾಳಿಕಟ್ಟಿಸಿಕೊಳ್ಳಲು ಒಲ್ಲೆ ಎನ್ನುತ್ತಾಳೆ. ಈ ವೇಳೆ ಎರಡು ಕುಟುಂಬದವರ ನಡುವೆ ಕೆಲಕಾಲ ಗಲಾಟೆ ನಡೆಯುತ್ತದೆ.

ಸ್ಥಳಕ್ಕಾಗಮಿಸಿದ ನೆಲಮಂಗಲ ಪಟ್ಟಣ ಪೊಲೀಸರು ಪ್ರಿಯಕರ ಸಂಜು ಹಾಗೂ ಪ್ರೇಯಸಿ ಪದ್ಮಪ್ರಿಯಾ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಾರೆ. ಆಗ ಪ್ರಕರಣ ತಿರುವು ಪಡೆದುಕೊಳ್ಳುತ್ತದೆ. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಚಾರ ತಿಳಿಯುತ್ತದೆ. ಪ್ರೇಮಿಗಳನ್ನು ಒಂದಾಗಿಸಲು ಪೊಲೀಸರು ಪ್ರಯತ್ನಪಟ್ಟರೂ ಅಲ್ಲಿಯೂ ಅವರಿಗೆ ಅಚ್ಚರಿ ಕಾದಿರುತ್ತದೆ. ತನ್ನ ಪ್ರಿಯಕರನನ್ನೂ ವಿವಾಹವಾಗಲು ಹುಡುಗಿ ನಿರಾಕರಿಸುತ್ತಾಳೆ. ನಿಮ್ಮ ತಂದೆ ತಾಯಿ ಬಂದರೆ ಮಾತ್ರ ನಿಮ್ಮ ಜೊತೆ ಬರುವುದಾಗಿ ಈ ಹುಡುಗಿಯು ತನ್ನ ಪ್ರಿಯಕರನಿಗೆ ನೇರಾನೇರ ತಿಳಿಸುತ್ತಾಳೆ.

ಒಟ್ಟಾರೆ ಪದ್ಮಪ್ರಿಯಾ ಹಾಗೂ ಸಂಜು ಪ್ರೇಮ ಪ್ರಕರಣದಿಂದ ವಧು ಮತ್ತು ವರ ಇಬ್ಬರೂ ಮನೆಯವರು ತಮ್ಮ ಸಂಬಂಧಿಕರ ಮುಂದೆ ತಲೆತಗ್ಗಿಸುವಂತಾಯಿತು. ಅತ್ತ ಪ್ರೇಮಿಗಳು ಎನಿಸಿಕೊಂಡ ಪದ್ಮಪ್ರಿಯಾ ಹಾಗೂ ಸಂಜು ಇಬ್ಬರೂ ಒಂದಾಗದೆ ಒಂದೊಂದು ದಾರಿಯಲ್ಲಿ ಪ್ರತ್ಯೇಕವಾಗಿ ತೆರಳಿದ್ದಾರೆ. ಮುಂದೆ ಏನಾಗುತ್ತದೆ ಎಂಬುದು ಆ ದೇವರಿಗೆ ತಿಳಿಯಬೇಕು. ಇನ್ಮುಂದೆ ಮದುವೆಯಾಗುವವರು ಯಾವುದಕ್ಕೂ ಒಂದ್ ಸಲ ನಿಮ್ಮ ಹುಡುಗ ಹುಡುಗಿ ಬಗ್ಗೆ ವಿಚಾರಿಸಿ ಹಸೆಮಣೆಗೆ ಕೂರಿಸಲು ಮುಂದಾದರೆ ಒಳ್ಳೆಯದು.

Comments are closed.