ಕರ್ನಾಟಕ

ಮಕ್ಕಳು ಮೊಬೈಲ್ ಬಳಸುತ್ತಿರುವ ಕುರಿತು ಮನಃಶಾಸ್ತ್ರಜ್ಞರು ಹೇಳುವುದೇನು?

Pinterest LinkedIn Tumblr


ಡಿಜಿಟಲ್​ ಯುಗದಲ್ಲಿ ಮಂಗಳಗ್ರಹಕ್ಕೆ ಹೊರಡಲು ಸಿದ್ದವಾಗಿರುವ ನಾವು ಒಂದು ಚಿಕ್ಕ ಘಟನೆಯನ್ನು ಎದುರಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂಬುದಕ್ಕೆ ನಮ್ಮ ಸುತ್ತಮುತ್ತ ನಡೆಯುವ ಅನೇಕ ಘಟನೆಗಳು ಸಾಕ್ಷಿಯಾಗಿವೆ. ಅದರಲ್ಲಿಯೂ ಈಗಿನ ಮಕ್ಕಳು ಯಾಕೆ ಈ ರೀತಿ ದುರ್ಬಲ ಮನಸ್ಥಿತಿಯನ್ನು ಹೊಂದುತ್ತಿದ್ದಾರೆ ಎಂಬ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಲೇ ಇದೆ. ಇಂಥ ಪ್ರಶ್ನೆ ಈಗ ಉದ್ಭವಿಸಲು ಕಾರಣವಾಗಿದ್ದು ಮೈಸೂರಿನಲ್ಲಿ ಇವತ್ತು ಸಂಭವಿಸಿದ 17 ವರ್ಷದ ಹುಡುಗಿಯ ಆತ್ಮಹತ್ಯೆಯ ಘಟನೆ.

ಮೈಸೂರಿನಲ್ಲಿ 17 ವರ್ಷದ ಯುವತಿಯೊಬ್ಬಳು ತನ್ನ ಅಪ್ಪ ಕೊಡಿಸಿದ್ದ ಮೊಬೈಲ್ ಕಳೆದುಕೊಂಡಿದ್ದಕ್ಕೆ ಇಂದು ಆತ್ಮಹತ್ಯೆಗೆ ಶರಣಾಗಿದ್ಧಾಳೆ. ನಿನ್ನೆ ಮಹಾರಾಷ್ಟ್ರದ ನಾಗಪುರದಲ್ಲಿಯೂ ಇಂಥದ್ದೇ ಘಟನೆ ನಡೆದಿತ್ತು. ಸದಾ ಮೊಬೈಲ್​ ನೋಡುತ್ತಿದ್ದ ಬಾಲಕನಿಂದ ಅಮ್ಮ ಮೊಬೈಲ್​ ಕಿತ್ತುಕೊಂಡಿದ್ದಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಎರಡು ಘಟನೆಗಳು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿವೆ. ಮಕ್ಕಳ ಮನಸ್ಸು ಯಾಕೆ ಇಷ್ಟು ಸೂಕ್ಷ್ಮವಾಗುತ್ತಿದೆ? ಮೊಬೈಲ್​ ಆ ಮಟ್ಟಿಗೆ ಮಕ್ಕಳ ಮನಸ್ಸುನ್ನು ಆವರಿಸುತ್ತಿದೆಯಾ? ಎಂಬ ಪ್ರಶ್ನೆ ಕಾಡುವುದು ಸಹಜ.

ಈ ಕುರಿತು ಮಾತನಾಡಿರುವ ಮನಶಾಸ್ತ್ರಜ್ಞ ಆರ್​. ಶ್ರೀಧರ್​, ಇಂದಿನ ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಹೆಚ್ಚುವ ಜೊತೆಗೆ ತಮ್ಮತನದ ಬಗ್ಗೆ ಅತಿಯಾದ ಸೂಕ್ಷ್ಮತೆ ಮೂಡಿದೆ. ನಾನು ಹೀಗೇ ಇರಬೇಕು. ನಾನು ಮಾಡಿದ ಕೆಲಸಕ್ಕೆ ಇದೇ ರೀತಿ ಫಲಿತಾಂಶ ಬರಬೇಕು ಎಂಬ ಸ್ವಾಭಿಮಾನ ಮೂಡಿರುತ್ತದೆ. ಅಲ್ಲದೆ ಇಂದಿನ ಮಕ್ಕಳು ಸಾಮಾಜಿಕವಾಗಿ ಬದುಕಬೇಕೆಂದರೆ ಹೊಂದಾಣಿಕೆ ಮುಖ್ಯ ಎಂಬುದನ್ನು ಮರೆಯುತ್ತಿದ್ದಾರೆ ಎಂದು ವಿವರಿಸಿದರು.

ವಸ್ತು ಆಧಾರಿತ ಜೀವನ:

ಇಂದಿನ ಮಕ್ಕಳು ಹಾಗೂ ಪೋಷಕರು ಮೌಲ್ಯಾಧಾರಿತ ಬದುಕಿಗಿಂತ, ವಸ್ತು ಆಧಾರಿತ ಬದುಕಿನ ಬಗ್ಗೆ ಹೆಚ್ಚು ವ್ಯಾಮೋಹಿತಗೊಂಡಿದ್ದಾರೆ. ಅಷ್ಟೇ ಅಲ್ಲದೇ ತಾನು ಮಾಡುವ ಕೆಲಸ ತನಗೆ ಮಾತ್ರ ಲಾಭ ಕೊಡಬೇಕು ಎಂಬ ಸ್ವಾರ್ಥ ಮನೋಭಾವನೆ ಸೃಷ್ಟಿಯಾಗಿದೆ ಎನ್ನುತ್ತಾರೆ.

ಅಲ್ಲದೆ, ಇಂದಿನ ಪೋಷಕರು ಇಬ್ಬರು ಕೂಡ ಹೊರಗೆ ದುಡಿಯುವವರಾಗಿದ್ದು ಮಕ್ಕಳ ಬಗ್ಗೆ ಹೆಚ್ಚು ಗಮನ ಕೇಂದ್ರಿಕರಿಸುತ್ತಿಲ್ಲ ಎನ್ನುವ ಬದಲಿಗೆ ಅವರು ತಮ್ಮ ಮಕ್ಕಳು ಶಿಸ್ತಿನಿಂದ ಬೆಳೆಸಲು ಹೋಗಿ ಮಕ್ಕಳಲ್ಲಿ ಹೇರಿಕೆ, ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಈ ಭಯದಿಂದ ತಪ್ಪಿಸಿಕೊಳ್ಳಲು ಹೋಗಿ ಈ ರೀತಿ ಅನಾಹುತ ಮಾಡಿಕೊಳ್ಳುತ್ತಿದ್ದಾರೆ.

ಭೀತಿ ಮನಸ್ಸು:

ಮಕ್ಕಳಲ್ಲಿ ಯಾವ ರೀತಿ ಮನೋಭಾವ ಮೂಡುತ್ತಿದೆ ಎಂದರೆ ಸಮಾಜಕ್ಕೆ ಹಾನಿಯಾದರೂ ಚಿಂತೆಯಿಲ್ಲ. ನಮಗೆ ಹಾನಿಯಾಗಬಾರದು ಎಂಬ ಮನಸ್ಥಿತಿ ಮೂಡಿದೆ. ಉದಾಹರಣೆಗೆ, ಒಬ್ಬ ಯುವಕ ಒಂದು ಟ್ರಾಫಿಕ್​ ಸಿಗ್ನಲ್​ ಉಲ್ಲಂಘಿಸಿದರೂ ಪರವಾಗಿಲ್ಲ. ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಅದು ನಮಗೆ ಅವಮಾನ ಎಂಬ ಮನೋಭಾವ ಮೂಡಿದೆ.

ಐಷಾರಾಮಿ ಜೀವನ:

ಇಂದಿನ ಯುಗದಲ್ಲಿ ಮಕ್ಕಳಿಗೆ ಕಷ್ಟದ ಅರಿವು ಆಗುತ್ತಿಲ್ಲ. ಇಂದಿನ ಪೋಷಕರಿಗೆ ಮಾರುಕಟ್ಟೆಯಲ್ಲಿ ಸಿಗುವ ಐಷಾರಾಮಿ ವಸ್ತುಗಳನ್ನು ತಂದುಕೊಟ್ಟರೆ ಮಕ್ಕಳಿಗೆ ಸಕಲವನ್ನೂ ನೀಡಿದಂತೆ ಎಂಬ ಮನೋಭಾವ ಮೂಡುತ್ತದೆ. ಅಲ್ಲದೆ, ಇದು ಪ್ರತಿಷ್ಠೆಯ ವಿಷಯ ಕೂಡ ಆಗಿದೆ. ಒಂದು ಕಡೆ ಭಾವನೆಗಿಂತ ಹೆಚ್ಚಾಗಿ ಪೋಷಕರು ಕೂಡ ವಸ್ತುಗಳಲ್ಲಿ ಮಕ್ಕಳ ಖುಷಿ ಅಳೆಯುತ್ತಿದ್ದಾರೆ.

ಮೊಬೈಲ್​ ಮಾಯೆ

ಇಂದಿನ ಡಿಜಿಟಲ್​ ಯುಗದಲ್ಲಿ ಮೊಬೈಲ್​ ಎಲ್ಲರ ಬದುಕನ್ನು ಅವರಿಸಿಕೊಂಡಿದೆ. ಮಕ್ಕಳಿಗೆ ಶಾಲೆಯಲ್ಲಿ ಎಷ್ಟೇ ತಿಳುವಳಿಕೆ ಬೋಧನೆ ಮಾಡಿ, ಅಪ್ಪ ಅಮ್ಮ ಎಷ್ಟೇ ತಿಳಿವಳಿಕೆ ಹೇಳಿದರೂ ಅವರು ಜೀವನದ ಪಾಠ ಕಲಿಯುವುದು ತಮ್ಮ ಸುತ್ತಮುತ್ತಲ ಪರಿಸರದಿಂದ. ಆದರೆ ಈ ಪ್ರಕೃತಿಯಿಂದ ಮಕ್ಕಳು ಪಾಠ ಕಲಿಯುವ ಬದಲು ಮೊಬೈಲ್​ನಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ಸಣ್ಣಪುಟ್ಟ ತಪ್ಪುಗಳು ಅಪರಾಧಗಳಾಗಿ ಮಕ್ಕಳನ್ನು ಕಾಡುತ್ತಿದೆ. ಅಲ್ಲದೇ ಈ ತಪ್ಪುಗಳಿಂದ ತಪ್ಪಿಸಿಕೊಳ್ಳುವ ಒಂದೇ ಉತ್ತರ ಆತ್ಮಹತ್ಯೆ ಎಂಬ ಉತ್ತರ ಕಂಡುಕೊಳ್ಳುತ್ತಿದ್ದಾರೆ.

ಅರಿವು ಕಂಡುಕೊಂಡುಕೊಳ್ಳುವಲ್ಲಿ ವಿಫಲ

ಬಹುತೇಕ ಮಂದಿ ಮೊಬೈಲ್​ನಲ್ಲಿಯೇ ತಮ್ಮ ಸಮಯವನ್ನು ಕಳೆಯುತ್ತಿರುವ ಹಿನ್ನಲೆಯಲ್ಲಿ ತಮ್ಮ ಸಮಸ್ಯೆಗೆ ಅರಿವು ಕಂಡುಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಮೊಬೈಲ್​ಗಳು ಪ್ರತಿಯೊಬ್ಬನ ಜೀವನ ಆವರಿಸಿದ್ದು, ವ್ಯಕ್ತಿಗಳ ಒಡನಾಟಕ್ಕೂ ಸಮಯ ಸಿಗದಂತೆ ಆಗಿದೆ. ಯಾವುದೇ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸಮಯಬೇಕು. ಆದರೆ ಆ ಸಮಯವನ್ನು ಇಂದು ಸಂಪೂರ್ಣವಾಗಿ ಮೊಬೈಲ್​ ಆವರಿಸಿಕೊಂಡಿದೆ. ಇದರಿಂದ ಸಮಸ್ಯೆ ಕುರಿತಾಗಲಿ, ಅದನ್ನು ಬಿಡಿಸುವ ಬಗ್ಗೆಯಾಗಲಿ ಹೆಚ್ಚಾಗಿ ಚಿಂತಿಸುತ್ತಿಲ್ಲ ಎನ್ನುತ್ತಾರೆ.

ಈ ಕುರಿತು ತಾರ್ಕಿಕವಾಗಿ ಮಾತನಾಡಲು ಸಾಧ್ಯವಿಲ್ಲ. ಇವು ನಮ್ಮ ಯುವ ಜನರ ಮಾನಸಿಕ ಸ್ಥಿರತೆ ಪ್ರಶ್ನಿಸುವ ಸ್ಥಿತಿಯಲ್ಲಿದ್ದೇವೆ. ಯಂತ್ರದ ಹತೋಟಿಯಲ್ಲಿ ಸಿಕ್ಕಿಹಾಕಿಕೊಂಡು ಮನಸ್ಸುಗಳು ಇನ್ನಷ್ಟು ಸಂಕೀರ್ಣಗೊಳ್ಳುತ್ತಿವೆ.

Comments are closed.