ಕರ್ನಾಟಕ

ಊರಿನಲ್ಲಿ ಇರೋದು ಬೇಡ, ಬೆಂಗಳೂರಿನಲ್ಲೇ ಬದುಕು ಕಟ್ಟಿಕೊಳ್ಳೋಣ ಎಂದ ಹೆಂಡತಿಯನ್ನೇ ಹೊಡೆದು ಕೊಂದ

Pinterest LinkedIn Tumblr


ಚಿಕ್ಕಮಗಳೂರು: ಊರಿನಲ್ಲಿ ಇರೋದು ಬೇಡ, ಬೆಂಗಳೂರಿನಲ್ಲೇ ಬದುಕು ಕಟ್ಟಿಕೊಳ್ಳೋಣ ಎಂದು ಹಠ ಹಿಡಿದ ಹೆಂಡತಿಯ ಮೇಲೆ ಕೋಪಗೊಂಡ ಗಂಡ ಆಕೆಯನ್ನು ಹೊಡೆದು ಸಾಯಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ನಡೆದಿದೆ.

ಕಡೂರು ತಾಲೂಕಿನ ಜೋಡಿಲಿಂಗದಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಮಹೇಶ್​ ನಾಯ್ಕ್​ ಜ್ಯೋತಿಯನ್ನು ಮದುವೆಯಾಗಿದ್ದ. ಅವರಿಗೆ ಇಬ್ಬರು ಮಕ್ಕಳಿದ್ದರು. ಊರಿನಲ್ಲಿ ಮಳೆ-ಬೆಳೆಯಿಲ್ಲದ ಕಾರಣ ಸಂಸಾರ ನಡೆಸುವುದು ಕಷ್ಟವೆಂದು ಸದಾ ಹೇಳುತ್ತಿದ್ದ ಜ್ಯೋತಿ ತನ್ನ ಗಂಡನ ಬಳಿ ಜಗಳವಾಡುತ್ತಿದ್ದಳು.

ಕಡೂರಿನಲ್ಲಿ ಬದುಕು ನಡೆಸುವುದು ಕಷ್ಟವೆಂದು ಇಡೀ ಕುಟುಂಬ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಮಹೇಶ ಬೆಂಗಳೂರಿನಲ್ಲಿ ಟಿಂಬರ್​ ಕೆಲಸಕ್ಕೆ ಹೋಗುತ್ತಿದ್ದ. ಜ್ಯೋತಿ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದಳು. ದೀಪಾವಳಿ ಹಬ್ಬದಲ್ಲಿ ಊರಿಗೆ ಬಂದಿದ್ದ ಮಹೇಶನಿಗೆ ಮತ್ತೆ ಬೆಂಗಳೂರಿಗೆ ಹೋಗಲು ಮನಸಾಗಿಲ್ಲ. ಹೀಗಾಗಿ, ಇಲ್ಲೇ ಇರೋಣ ಎಂದು ಹೆಂಡತಿಯೊಂದಿಗೆ ಜಗಳ ಮಾಡಿದ್ದಾನೆ.

ಬಳಿಕ, ತನ್ನ ಮಕ್ಕಳನ್ನು ಚಾಕೊಲೇಟ್​ ತರಲು ಅಂಗಡಿಗೆ ಕಳುಹಿಸಿದ ಮಹೇಶ ಕುಡಿದ ಮತ್ತಿನಲ್ಲಿ ಹೆಂಡತಿ ಜ್ಯೋತಿಯನ್ನು ಹೊಡೆದು ಸಾಯಿಸಿದ್ದಾನೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಕುತ್ತಿಗೆಗೆ ಹಗ್ಗ ಹಾಕಿಕೊಂಡು ಕೆಳಗೆ ಬಿದ್ದಿದ್ದಾನೆ. ಅಕ್ಕಪಕ್ಕದವರು ಮನೆಯ ಹೆಂಚು ತೆಗೆದು ಆಂಬುಲೆನ್ಸ್ ನಲ್ಲಿ ಜ್ಯೋತಿಯನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆಂದು ಮೃತ ಜ್ಯೋತಿ ಕುಟುಂಬದವರು ಆರೋಪಿಸಿದ್ದಾರೆ. ಜ್ಯೋತಿಯ ಗಂಡ ಮಹೇಶ್ ಕಂಬಿ ಎಣಿಸುತ್ತಿದ್ದು, ಸಖರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

Comments are closed.