ಬೆಂಗಳೂರು: ಗೌಡರ ಕುಟುಂಬದಲ್ಲಿ ಮತ್ತೆ ಕಲಹ ಆರಂಭವಾಗಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ನಿಂದ ಪಕ್ಷದ ವರಿಷ್ಠರಾದ ದೇವೇಗೌಡರು ತಮ್ಮ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಮಗ ಎಚ್.ಡಿ.ಕುಮಾರಸ್ವಾಮಿ ಅವರು ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅ.4ರಂದು ವಿಧಾನ ಪರಿಷತ್ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೈತ್ರಿ ಸರ್ಕಾರದ ಒಪ್ಪಂದದಂತೆ ಕಾಂಗ್ರೆಸ್ಗೆ ಎರಡು ಸ್ಥಾನ ಹಾಗೂ ಜೆಡಿಎಸ್ಗೆ ಒಂದು ಸ್ಥಾನ ಬಿಟ್ಟುಕೊಡಲಾಗಿದೆ. ಈ ಒಂದು ಸ್ಥಾನಕ್ಕೆ ಕುಮಾರಸ್ವಾಮಿ ಅವರು ನವಲಗುಂದದ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಅವರಿಗೆ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲು ಬಯಸಿದ್ದರು. ಆದರೆ, ದೇವೇಗೌಡರು ಯಾರ ಮಾತಿಗೂ ಮಣೆ ಹಾಕದೆ, ಅಷ್ಟೆನೂ ಪ್ರಭಾವಿ, ಅನುಭವವಿಲ್ಲದ ರಮೇಶ್ಗೌಡ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಇದರಿಂದ ದೇವೇಗೌಡ ಅವರ ಮೇಲೆ ಕುಮಾರಸ್ವಾಮಿ ಅವರು ಮುನಿಸಿಕೊಂಡಿದ್ದಾರಂತೆ.
ಆಡಳಿಯ ವಿಚಾರಗಳನ್ನು ಚರ್ಚೆ ಮಾಡಲು, ಸಲಹೆ ಕೇಳಲು ಪ್ರತಿದಿನ ದೇವೇಗೌಡ ಅವರನ್ನು ಸಂಪರ್ಕಿಸುತ್ತಿದ್ದ ಕುಮಾರಸ್ವಾಮಿ ಅವರು ಈ ಘಟನೆ ನಡೆದ ನಂತರದಿಂದ ಗೌಡರನ್ನು ಭೇಟಿ ಆಗಿಲ್ಲವಂತೆ. ಅಲ್ಲದೇ, ದೂರವಾಣಿ ಕರೆ ಮಾಡಿ ಕೂಡ ಮಾತನಾಡಿಲ್ಲವಂತೆ.
ಪರಿಷತ್ಗೆ ನೀವೇ ಅಭ್ಯರ್ಥಿ, ನಾಮಪತ್ರ ಸಲ್ಲಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಈ ಮೊದಲು ಕುಮಾರಸ್ವಾಮಿ ಅವರು ಕೋನರೆಡ್ಡಿ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಕೋನರೆಡ್ಡಿ ನಾಮಪತ್ರ ಸಲ್ಲಿಕೆಯ ಕೊನೇ ದಿನ ಎಲ್ಲ ಸಿದ್ಧತೆಯೊಂದಿಗೆ ಬೆಂಗಳೂರಿಗೆ ಬಂದಿದ್ದರು. ಆದರೆ, ಕೊನೇ ಕ್ಷಣದಲ್ಲಿ ದೇವೇಗೌಡರು ರಮೇಶ್ ಗೌಡ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಅಚ್ಚರಿ ನೀಡಿದ್ದರು.
ಕಾರ್ಯಕರ್ತರಿಗೂ ಬೇಸರ!
ದೇವೇಗೌಡರ ನಿರ್ಧಾರ ಕೇವಲ ಕುಮಾರಸ್ವಾಮಿ ಅವರು ಮಾತ್ರವಲ್ಲದೇ, ಪಕ್ಷದ ಎಲ್ಲ ಕಾರ್ಯಕರ್ತರಿಗೂ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ರಮೇಶ್ ಗೌಡ ನಾಮಪತ್ರ ಸಲ್ಲಿಸುವ ದಿನ ಯಾವೊಬ್ಬ ನಾಯಕರು ಅವರೊಂದಿಗೆ ಹೋಗಿರಲಿಲ್ಲ. ಅಲ್ಲದೇ. ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಮೇಲ್ಮನೆಗೆ ಅನುಭವಿ ನಾಯಕರನ್ನು ಕಳಿಯಿಸುವಂತೆ ಮಾಡಿದ್ದ ಮನವಿಯನ್ನು ದೇವೇಗೌಡರು ಲೆಕ್ಕಕ್ಕೆ ತೆಗೆದುಕೊಳ್ಳದೆ ಇದ್ದದ್ದು ಅವರ ಅಸಮಾಧಾನಕ್ಕೂ ಕಾರಣವಾಗಿತ್ತು.
Comments are closed.